ನಮ್ಮ ಮೆಟ್ರೋ ವೇಳಾಪಟ್ಟಿ ಪರಿಷ್ಕರಣೆ; ಹೆಚ್ಚಾಯಿತು ಕಾಯುವ ಸಮಯ!
ಬೆಂಗಳೂರು, ಸೆಪ್ಟೆಂಬರ್ 04; ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಮುಂಜಾನೆ ಮತ್ತು ತಡರಾತ್ರಿ ರೈಲು ಸಂಚಾರದ ಅವಧಿಯನ್ನು ಕಡಿಮೆ ಮಾಡಿದೆ. ಆದರೆ ಇದು ಈಗ ಪ್ರಯಾಣಿಕರಿಗೆ ಅನುಕೂಲವಾಗುವ ಬದಲು ಅನಾನುಕೂಲ ಉಂಟು ಮಾಡಿದೆ.
ಆಗಸ್ಟ್ 8ರಿಂದಲೇ ಜಾರಿಗೆ ಬರುವಂತೆ ಬೆಳಗ್ಗೆ 5 ರಿಂದ 6 ಮತ್ತು ರಾತ್ರಿ 10 ರಿಂದ 11 ಗಂಟೆ ನಡುವಿನ ಅವಧಿಯಲ್ಲಿ ಪ್ರತಿ ರೈಲು ಸಂಚಾರದ ನಡುವೆ ಇದ್ದ 20 ನಿಮಿಷದ ಅಂತರವನ್ನು 15 ನಿಮಿಷಕ್ಕೆ ಬಿಎಂಆರ್ಸಿಎಲ್ ಇಳಿಕೆ ಮಾಡಿದೆ. ಇದು ಪಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಹೇಳಿತ್ತು.
ಆದರೆ ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಇದನ್ನು ಪರಿಷ್ಕರಣೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ರೈಲು ಸಂಚಾರದ ಅವಧಿ ಕಡಿಮೆ ಮಾಡಿದರೂ ಜನರು ಕಾಯುವ ಅವಧಿ 30 ನಿಮಿಷಕ್ಕೆ ಏರಿಕೆಯಾಗಿದೆ.

ಬೈಯಪ್ಪನಹಳ್ಳಿಯಿಂದ ಪ್ರಯಾಣ ಮಾಡಿ, ನಾಗಸಂದ್ರದ ಕಡೆಗೆ ಹೋಗುವ ಮೆಟ್ರೋ ಪ್ರಯಾಣಿಕರಿಗೆ ಹೊಸ ವೇಳಾಪಟ್ಟಿಯ ಕಾರಣ ತೊಂದರೆಯಾಗಿದೆ. ಅವರ ಕಾಯುವ ಅವಧಿ ಜಾಸ್ತಿಯಾಗಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
ಮೆಟ್ರೋ ಪ್ರಯಾಣಿಕರು ಬೈಯಪ್ಪನಹಳ್ಳಿಯಲ್ಲಿ 15 ನಿಮಿಷ ಕಾದು ಮೆಟ್ರೋ ಹತ್ತಿ, ಮೆಜೆಸ್ಟಿಕ್ಗೆ ಆಗಮಿಸಿದರೆ ನಾಗಸಂದ್ರ ಕಡೆ ಹೋಗಲು ಹಸಿರು ಮಾರ್ಗಕ್ಕೆ ಬದಲಾವಣೆ ಮಾಡಬೇಕು. ಇಲ್ಲಿ ನೇರಳೆ ಮೆಟ್ರೋ ಇಳಿದು, ಹಸಿರು ಮೆಟ್ರೋ ಏರಲು 15 ನಿಮಿಷ ಕಾಯಬೇಕು ಎಂಬುದು ಪ್ರಯಾಣಿಕರ ದೂರು.
ರಾತ್ರಿ 10 ಗಂಟೆಯ ಬಳಿಕ ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್ ತನಕ ಯಾವ ನಿಲ್ದಾಣದಲ್ಲಿ ಮೆಟ್ರೋ ಹತ್ತಿದರೂ ಎರಡೂ ಕಡೆ ಸೇರಿ ಅರ್ಧ ಗಂಟೆ ಕಾಯುವಂತೆ ಆಗಿದೆ. ರೈಲು ಸಂಚಾರದ ಕಡಿಮೆ ಮಾಡಿದರೂ ಜನರಿಗೆ ಮಾತ್ರ ಕಾಯುವುದು ತಪ್ಪಿಲ್ಲ.

ಹಿಂದಿನ ವೇಳಾಪಟ್ಟಿಯಂತೆ ಕೆಂಪೇಗೌಡ ನಿಲ್ದಾಣದಲ್ಲಿ ಗರಿಷ್ಠ 6 ನಿಮಿಷ ಕಾಯಬೇಕಿತ್ತು. ವೇಳಾಪಟ್ಟಿ ಪರಿಷ್ಕರಣೆ ಆದ ಬಳಿಕ ಬೈಯಪ್ಪನಹಳ್ಳಿ ಕಡೆಯಿಂದ ಆಗಮಿಸುವ ರೈಲು ಆಗಮಿಸುವ ಒಂದು ನಿಮಿಷ ಮುನ್ನ ಒಂದು ರೈಲು ನಾಗಸಂದ್ರ ಕಡೆ ಹೋಗಿರುತ್ತದೆ. ಆದ್ದರಿಂದ ಮುಂದಿನ ರೈಲು ಬರಲು 14 ನಿಮಿಷ ಕಾಯಬೇಕು.
ಆದ್ದರಿಂದ ನಾಗಸಂದ್ರ ಕಡೆ ಸಾಗುವ ಹಸಿರು ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಲಾಗುತ್ತಿದೆ. ಬಿಎಂಆರ್ಸಿಎಲ್ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಲಿದೆಯೇ? ಎಂದು ಕಾದು ನೋಡಬೇಕಿದೆ.
ಮೆಟ್ರೋ ಪ್ರಯಾಣಿಕರು ಹೆಚ್ಚಳ; ಆಗಸ್ಟ್ 8ಕ್ಕೂ ಮೊದಲು ಬೆಳಗ್ಗೆ 6 ಗಂಟೆಗೆ ಮುನ್ನ ಮತ್ತು ರಾತ್ರಿ 10 ಗಂಟೆಯ ಬಳಿಕ ಪ್ರಯಾಣಿಕರು ನಿಲ್ದಾಣಗಳಲ್ಲಿ ಗರಿಷ್ಠ 20 ನಿಮಿಷದ ತನಕ ಕಾಯಬೇಕಿತ್ತು. ಆದ್ದರಿಂದ ರೈಲು ಸಂಚಾರ ಸಮಯ ಪರಿಷ್ಕರಣೆ ಮಾಡಿ 20 ರಿಂದ 15 ನಿಮಿಷಕ್ಕೆ ಕಡಿತಗೊಳಿಸಲಾಗಿತ್ತು. ಆದರೆ ಈ ವೇಳಾಪಟ್ಟಿಯೂ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದೆ.
ಪ್ರತಿದಿನ ನಮ್ಮೆ ಮಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ 2.50 ರಿಂದ 3 ಲಕ್ಷ ಆಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಬಿಎಂಆರ್ಸಿಎಲ್ಗೆ ಆದಾಯ ಸಹ ಹೆಚ್ಚಾಗುತ್ತಿದೆ.
ಈಗ ಮಾಸ್ಕ್ ಧರಿಸುವುದು ಹೊರತುಪಡಿಸಿ ಬೇರೆ ಯಾವುದೇ ನಿರ್ಬಂಧವೂ ಮೆಟ್ರೋ ಪ್ರಯಾಣಿಕರಿಗೆ ಇಲ್ಲ. ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಮತ್ತು ಟೋಕನ್ ಬಳಕೆ ಮಾಡಿಕೊಂಡು ಸಂಚಾರ ನಡೆಸಬಹುದಾಗಿದೆ. ಅಲ್ಲದೇ ನಗರದಲ್ಲಿ ಸಂಜೆ ವೇಳೆಗೆ ಮಳೆಯಾಗುತ್ತಿದೆ. ಆದ್ದರಿಂದ ಜನರು ಬೈಕ್, ಕಾರು ಬಿಟ್ಟು ಮೆಟ್ರೋ ಉಪಯೋಗ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಿದೆ.












Click it and Unblock the Notifications