ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಸರ್ಕಾರದ ಹೊಸ ಯೋಜನೆ
ಬೆಂಗಳೂರು, ಏಪ್ರಿಲ್ 14 : ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನ ಶೇಕಡ 20 ರಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸುತ್ತಮುತ್ತಲಿನ 154 ಕಿ.ಮೀ ಉದ್ದದ ವಿವಿಧ ರಸ್ತೆಗಳ ಅಭಿವೃದ್ದಿ ಕಾರ್ಯಕ್ಕೆ ಮುಂದಾಗಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಮೈಸೂರು, ತುಮಕೂರು, ಹಾಸನ, ಆನೆಕಲ್, ಕನಕಪುರ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆಯಿಂದ ಜನರು ಅನಿವಾರ್ಯವಾಗಿ ನಗರಕ್ಕೆ ಆಗಮಿಸ್ತಾರೆ. ಇದರಿಂದಾಗಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿರುವ ಸಮಸ್ಯೆಯನ್ನ ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ಮೂಲಕ ಸುಮಾರು 154 ಕಿಮೀ ಉದ್ದದ ಬೆಂಗಳೂರು "ಸಪೋರ್ಟಿಂಗ್ ರಸ್ತೆ"ಗಳನ್ನ ಬರೋಬ್ಬರಿ 2000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದೆ.
ಇನ್ನು ಯೋಜನೆಯಲ್ಲಿ ಹೊಸದಾಗಿ ರಸ್ತೆಗಳ ನಿರ್ಮಾಣ ಮಾಡಲಾಗುವುದಿಲ್ಲ, ಬದಲಾಗಿ ಈಗಾಗಲೇ ಇರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನೇ ಅಗಲೀಕರಣ ಮಾಡಲಿದೆ. ಈ ಮೂಲಕ ಎರಡು ಪಥಗಳಿರುವ ರಸ್ತೆಗಳನ್ನ ನಾಲ್ಕು ಪಥದ ರಸ್ತೆಗಳನ್ನಾಗಿ ವಿಸ್ತರಣೆ ಮಾಡಲಿದೆ. ಇದರ ಜೊತೆಗೆ ಈ ರಸ್ತೆಗಳು ಸಾಗುವ ಮಾರ್ಗದಲ್ಲಿ ಇರುವ ರೈಲ್ವೆ ಗೇಟ್ ಮತ್ತು ಗ್ರಾಮಗಳ ಹತ್ತಿರ ಇರುವ ಎತ್ತರಿಸಿದ ರಸ್ತೆಗಳು, ಮೇಲ್ಸುತುವೆ, ಅಂಡರ್ ಪಾಸ್ಗಳನ್ನ ನಿರ್ಮಿಸಿ ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇದರಿಂದ ಕನಿಷ್ಟ 20 ರಷ್ಟು ಸಂಚಾರ ದಟ್ಟಣೆಯನ್ನ ಕಡಿಮೆಗೊಳಿಸಬಹುದಾಗಿದೆ.

ಕಳೆದ ಮೂರು ವರ್ಷಗಳ ಹಿಂದೆಯೇ ಈ ಯೋಜನೆ ರೂಪಿಸಲಾಗಿತ್ತು. ಆದರೆ ಕೆಲ ಕಾನೂನು ತೊಡಕುಗಳಿಂದ ಕಾಮಗಾರಿಯನ್ನ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ 50% ರಷ್ಟು ಅಭಿವೃದ್ದಿ ಕಾರ್ಯ ಮುಗಿದಿದೆ. ಉಳಿದಂತೆ ವಿದ್ಯುತ್ ಸಂಪರ್ಕ, ನೀರು ಕಾಲುವೆ ಮತ್ತು ಮರಗಳ ತೆರವು ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ರಸ್ತೆ ಅಭಿವೃದ್ದಿ ಕಾಮಗಾರಿ ಪೂರ್ಣಗೊಳ್ಳಲಿದೆ ಅಂತ ಕೆಆರ್ಡಿಸಿಎಲ್ ಮುಖ್ಯ ಇಂಜಿನಿಯರ್ ಆರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲಿರುವ ಮೂರು ಅತೀ ದೊಡ್ಡದಾದ ವಿಮಾನಗಳಲ್ಲಿ ಒಂದಾಗಿದೆ. ಪ್ರತಿದಿನ 100 ವಿಮಾನಗಳು ಕಾರ್ಯಾಚರಣೆ ನಡೆಸಲಿದೆ. ಲಕ್ಷಾಂತರ ಜನರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡುತ್ತಿರುತ್ತಾರೆ. ಸರಕು ಸಾಕಾಣಿಕೆ ದರವೂ ಕೂಡ ಹೆಚ್ಚಾಗಿದೆ. ಬೆಂಗಳೂರಿನಿಂದ ದುಬೈ ಸೇರಿದಂತೆ ಇನ್ನಿತರ ದೇಶಗಳಿಗೆ ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನ ರಫ್ತು ಮಾಡಲಾಗುತ್ತದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ತರುವ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸರಕು ಸಾಗಾಣಿಕೆಗೆ ಅನುಕೂಲವಾಗಲಿ ಅಂತ ಈ ರಸ್ತೆ ಅಭಿವೃದ್ದಿ ಕಾರ್ಯ ನಡೆಸಲಾಗುತ್ತಿದೆ.

ನಗರದ ವರ್ತೂರು ಬಳಿ ಉಂಟಾಗುವ ಟ್ರಾಫಿಕ್ ಒತ್ತಡವನ್ನ ನಿಯಂತ್ರಿಸಲು ಸುಮಾರು 1.92 ಕಿಮೀ ಉದ್ದವಾದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 182.76 ಕೋಟಿ ರೂ ವೆಚ್ಚ ಮಾಡಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಈ ಯೋಜನೆ 2024 ಜೂನ್ನಲ್ಲಿ ಪೂರ್ಣಗೊಳ್ಳಲಿದೆ. ಅಲ್ಲದೆ ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಹೆಚ್ಚುವರಿ 587.20 ಕೋಟಿ ರೂ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಗೊಲ್ಲಹಳ್ಳಿ, ರಾಜನಕುಂಟೆ, ನಾರಾಯಣಪುರ, ಕಾಡುಗೊಡಿ ಬಳಿ ರೈಲ್ವೆ ಮೇಲ್ಸುತುವೆ, ಬಸವನಹಳ್ಳಿ ಬಳಿ ರೈಲ್ವೆ ಅಂಡರ್ ಪಾಸ್, ದೊಮ್ಮಸಂದ್ರ ಮತ್ತು ವರ್ತರೂ ಕೋಡಿ ಒಟ್ಟು ಮೂರು ಕಡೆ ಗ್ರೇಡ್ ಸಪರೇಟರ್ ನಿರ್ಮಾಣ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ರಸ್ತೆ ಅಭಿವೃದ್ದಿ ಕಾರ್ಯ ನಡೆಸುವ ಮೂಲಕ ನಗರದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯ ನಿಯಂತ್ರಣಕ್ಕೆ ಮುಂದಾಗಿದೆ. ಈ ಮೂಲಕ ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿ ದೂರ ಮಾಡಲು ಈ ಯೋಜನೆಯನ್ನು ರೂಪಿಸಿದೆ.












Click it and Unblock the Notifications