ಪೆಟ್ರೋಲ್, ಡೀಸೆಲ್ ಆಯ್ತು, ಈಗ ಟೊಮೆಟೊ, ತರಕಾರಿ ಬೆಲೆ ಏರಿಕೆ
ಬೆಂಗಳೂರು, ಏಪ್ರಿಲ್ 21 : ಬೆಂಗಳೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿದೆ. ಅದರಲ್ಲೂ ಜನಸಾಮಾನ್ಯರು ಹೆಚ್ಚಾಗಿ ಬಳಸುವ ಟೊಮೆಟೊ ಬೆಲೆ ಹೆಚ್ಚಳವಾಗಿದೆ. ಮಳೆ ಹಾಗೂ ಬಿಸಿಲಿನ ತಾಪಮಾನದಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಟೊಮೆಟೊ ಬೆಲೆ ಹೆಚ್ಚಾಗಿದ್ದು, ಈ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ ಜನರಿಗೆ ಈಗ ಟೊಮೆಟೊ ಬೆಲೆ ಏರಿಕೆಯ ಹೊಡೆತ ಬೀಳಲಿದೆ,
ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳಲ್ಲಿ ಅಕಾಲಿಕ ಮಳೆ ಹಾಗೂ ಬಿಸಿಲಿನ ತಾಪಮಾನ ಹೆಚ್ಚಾದ್ದರಿಂದ ಟೊಮೆಟೊ ಬೆಳೆ ನಾಶವಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ. ವಾರದ ಹಿಂದೆಲ್ಲಾ ಒಂದು ಕೆಜಿ ಟೊಮೆಟೊಗೆ ಕೇವಲ 5 ರಿಂದ 10 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೀಗ ಮಳೆ ಹೊಡೆತದಿಂದ ನಗರದಲ್ಲಿ ಟೊಮೆಟೊ ಕೆಜಿಗೆ 40 ರಿಂದ 45 ರೂಪಾಯಿಗೆ ಮಾರಾಟವಾಗುತ್ತಿದೆ.
ಈ ಹಿಂದೆಯೆಲ್ಲಾ ಮಾರುಕಟ್ಟೆಗೆ ಟೊಮೆಟೊ ಹಣ್ಣಿನ ಸರಬರಾಜು ಹೆಚ್ಚಾಗಿ ನಡೆಯುತ್ತಿತ್ತು. ಹೀಗಾಗಿ ಆಗೆಲ್ಲಾ ಕಡಿಮೆ ಬೆಲೆ ಮಾರಾಟ ಮಾಡಲಾಗುತ್ತಿತ್ತು. ಆದ್ರೆ ಈಗ ಪೂರೈಕೆಗೆ ಹೊಡೆತ ಬಿದ್ದಿದ್ದು, ಬೇಡಿಕೆ ಕೂಡ ಹೆಚ್ಚಾಗಿದೆ. ಹೀಗಾಗಿ ಟೊಮೆಟೊ ಬೆಲೆ ಏರಿಕೆಯಾಗಿದೆ ಅಂತ ವರ್ತಕರೊಬ್ಬರು ಮಾಹಿತಿ ನೀಡಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಇನ್ನಿತರ ನೆರೆಯ ಜಿಲ್ಲೆಗಳಲ್ಲಿ ಒಂದು ತಿಂಗಳಿನಿಂದ ನಿರಂತರವಾಗಿ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ರೈತರಿಗೂ ಸಹ ಟೊಮೆಟೊ ಬೆಳೆಯಲು ಸಾಧ್ಯವಾಗುತ್ತಿಲ್ಲ. ಜಿಟಿ ಜಿಟಿ ಮಳೆಯಿಂದಾಗಿ ರೈತರ ಜಮೀನಿನಲ್ಲಿ ನೀರು ನಿಂತಿದ್ದು, ಶೇಕಡ 50ರಷ್ಟು ಉತ್ಪಾದನೆಗೆ ಹಾನಿಯುಂಟಾಗಿದೆ. ಹೀಗಾಗಿ ನಗರಕ್ಕೆ ಬರುವ ಟೊಮೆಟೊ ಪ್ರಮಾಣದಲ್ಲಿ ಶೇಕಡ 40 ರಷ್ಟು ಇಳಿಕೆಯಾಗಿದೆ. ಇದಿಷ್ಟೇ ಅಲ್ಲದೆ ದೇಶದ ನಾನಾ ಭಾಗಗಳಿಂದಲೂ ಟೊಮೆಟೊ ಸರಬರಾಜು ಆಗದೇ ಇರುವುದರಿಂದ ಬೆಲೆ ಏರಿಕೆ ಹೆಚ್ಚಾಗಿದೆ ಅಂತ ವ್ಯಾಪರಸ್ಥರು ಹೇಳಿದ್ದಾರೆ.
ಸದ್ಯ ಈಗ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಕೂಡ ಕಡಿಮೆಯಾಗಿದೆ. ಜೊತೆಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಇದರಿಂದಾಗಿ ಬೆಲೆಗಳು ಮತ್ತೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ. ಕೆಲವು ವಾರಗಳ ಹಿಂದೆ ಬೆಲೆ ಸಿಗದೇ ರೈತರು ಹೆದ್ದಾರಿ ರಸ್ತೆ ಬದಿಗಳಲ್ಲಿ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. ಮತ್ತೆ ಟೊಮೆಟೊಗೆ ಬೆಲೆ ಬಂದಿದ್ದು, ಟೊಮೆಟೊ ಬೆಳೆಗಾರರಲ್ಲಿ ಸಮಾಧಾನ ತರಿಸಿದೆ. ಇನ್ನು ಕೋಲಾರ ಜಿಲ್ಲೆ ಟೊಮೆಟೊ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲಿ ಒಂದಾಗಿದೆ. ಸದ್ಯ ಮಳೆ ಹಾಗೂ ಬಿಸಿಲಿನ ತಾಪಮಾನದಿಂದ ಟೊಮೆಟೊ ಬೆಳೆ ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಲೆ ಕೂಡ ಏರಿಕೆಯಾಗಿದೆ.

ಕೇವಲ ಟೊಮೆಟೊ ಮಾತ್ರ ಏರಿಕೆಯಾಗಿಲ್ಲ, ಮಳೆಯಿಂದಾಗಿ ದಿನನಿತ್ಯ ಬಳಸುವ ಅಡುಗೆ ಎಣ್ಣೆ, ತರಕಾರಿ ಬೆಲೆಯೂ ದುಬಾರಿಯಾಗಿದೆ. ಬೀನ್ಸ್ ಕೆಜಿಗೆ 65 ರೂಪಾಯಿಗೆ ಹೆಚ್ಚಾಗಿದ್ದರೆ, ಕ್ಯಾಪ್ಸಿಕಂ 80 ರೂ, ಹಸಿ ಮೆಣಸಿನಕಾಯಿ 65 ರೂ, ಕೊತ್ತಂಬರಿ ಕಂತೆಗೆ 60 ರೂ, ಕರಿಬೇವಿನ ಸೊಪ್ಪು ಕೆಜಿಗೆ 85 ರೂಪಾಯಿಗೆ ಮಾರಾಟವಾಗುತ್ತಿದೆ. ಸದ್ಯ ಮಳೆಯ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗಿರುವುದರಿಂದ ತರಕಾರಿಗಳ ಮಾರುಕಟ್ಟೆಗೆ ಸರಕು ಸಾಗಾಣಿಕೆ ಮಾಡುವುದನ್ನ ಕಡಿಮೆಗೊಳಿಸಲಾಗಿದೆ. ಇದರಿಂದಾಲೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಲು ಪ್ರಮುಖ ಕಾರಣವಾಗಿದೆ.
ರಾಜ್ಯದ ಜನರು ಪೆಟ್ರೋಲ್, ಡೀಸೆಲ್ನಿಂದ ಕಂಗೆಟ್ಟಿದ್ದರು. ಈಗ ಟೊಮೆಟೊ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಲೆ ಕೂಡ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಗ್ರಾಹಕರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಸದ್ಯ ಈಗಲಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಿದ್ದು, ಜನರ ಪರವಾಗಿ ಕೆಲಸ ಮಾಡಬೇಕಿದೆ.











Click it and Unblock the Notifications