ಸಿನಿಮೀಯ ಶೈಲಿಯಲ್ಲಿ1200 ಕಿ.ಮೀ ಚೇಸ್ ಮಾಡಿ ಆರೋಪಿಗಳನ್ನು ಕರೆತಂದ ಬೆಂಗಳೂರು ಪೊಲೀಸ್!
ಬೆಂಗಳೂರು, ಏಪ್ರಿಲ್ 28: ಬೆಂಗಳೂರಿಗೆ ಬರುವ ಕೆಲವು ದರೋಡೆಕೋರರು ಸಿಕ್ಕ ಸಿಕ್ಕವರ ಹತ್ತಿರ ಸುಲಿಗೆ ಮಾಡಿ ಟ್ರೈನ್ ಹತ್ತಿ ಎಸ್ಕೇಪ್ ಆಗಿ ಬಿಡುತ್ತಾರೆ. ಮಡಿವಾಳದ ಬಳಿ ಓಲಾ ಕ್ಯಾಬ್ ಚಾಲಕನ ಹಣ ಕಿತ್ತುಕೊಂಡು ಚಾಲಕನಿಗೆ 32 ಕಡೆ ಚಾಕುವಿಂದ ಕುಯ್ದು ಪರಾರಿಯಾಗಿದ್ದರು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೆ ನೆಡೆದಿದ್ದು ಇದನ್ನು ಸವಾಲಾಗಿ ತೆಗೆದುಕೊಂಡ ಮಡಿವಾಳ ಪೊಲೀಸರು ಆರೋಪಿಗಳನ್ನು 1200 ಕೀಮೀ ಚೇಜ್ ಮಾಡಿ 48 ಗಂಟೆಯಲ್ಲಿ ದರೋಡೆಕೋರ ಬಂಧಿಸಿದ್ದಾರೆ.
ಓಲಾ ಕ್ಯಾಬ್ ಹತ್ತಿದರು.. ಚಾಲಕನಿಗೆ 32 ಕಡೆ ಇರಿದರು..!
ಇದೇ ತಿಂಗಳು 17 ರಂದು ಬೊಮ್ಮನಹಳ್ಳಿ ಬಳಿ ಮುಂಜಾನೆ 3ರ ಸಮಯದಲ್ಲಿ ಇಬ್ಬರು ಯುವಕರು ಓಲಾ ಡ್ರಾಪ್ಗಾಗಿ ಕ್ಯಾಬ್ ಹತ್ತಿದ್ದಾರೆ. ಕ್ಯಾಬ್ ಮಡಿವಾಳದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಬರುತ್ತಿದ್ದಂತೆ ಆರೋಪಿಗಳು ಚಾಲಕನಿಗೆ ಚಾಕು ತೋರಿಸಿ ಹಣ ಕೇಳಿದ್ದಾರೆ. ಚಾಲಕ ಹಣ ಕೊಡದೆ ಇದ್ದಾಗ ಚಾಲಕ ಬೆನ್ನಿಗೆ 32 ಕಡೆ ಇರಿದು 12 ಸಾವಿರದಷ್ಟು ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅಲ್ಲೇ ಗಸ್ತಿನಲ್ಲಿದ್ದ ಮಡಿವಾಳ ಪೊಲೀಸರೇ ಗಾಯಾಳು ಚಾಲಕನನ್ನು ಅಸ್ಪತ್ರೆಗೆ ಗೆ ದಾಖಲು ಮಾಡಿ ಆರೋಪಿಗಳ ಬೆನ್ನು ಬಿದ್ದಿದ್ದರು.
ಮೊಬೈಲ್ ನ ಜಾಡು ಹಿಡಿದು ಆರೋಪಿಗಳ ಚೇಸ್
ಚಾಲಕ ಓಲಾ ಬುಕ್ ಮಾಡಿದ್ದ ಫೋನ್ ನಂಬರ್ ಅನ್ನು ಪೊಲೀಸರಿಗೆ ನೀಡುತ್ತಾನೆ. ಅದೇ ಮೊಬೈಲ್ನ ಜಾಡು ಹಿಡಿದಾಗ ಆಗಲೇ ಯಶವಂತಪುರದ ಬಳಿ ಟ್ರೈನ್ ಹತ್ತಿರುವುದು ಗೊತ್ತಾಗಿದೆ. ಮೊಬೈಲ್ ಟವರ್ ಹಾಗು ಟ್ರೈನ್ ಲೊಕೇಶನ್ ಒಟ್ಟಿಗೆ ಬಂದಿದೆ. ರಾಜಾಸ್ಥಾನದ ಬಿಕಾನೇರ್ ಟ್ರೈನ್ ನಲ್ಲಿ ಆರೋಪಿಗಳು ಹೊರಟಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಡಿಸಿಪಿ ಶ್ರೀನಾಥ್ ಹಾಗೂ ಎಸಿಪಿ ಸುಧೀರ್ ಹೆಗಡೆ ಮಾರ್ಗದರ್ಶನದಲ್ಲಿ ಮೂರು ತಂಡಗಳನ್ನು ಮಾಡಿ ಆರೋಪಿಗಳನ್ನು ಚೇಸ್ ಮಾಡಿದ್ದಾರೆ. ಒಂದು ತಂಡ ಫ್ಲೈಟ್ ನಲ್ಲಿ ಇನ್ನೊಂದು ತಂಡ ರೈಲಿನ ಒಳಗಡೆ ಹಾಗೂ ಮತ್ತೊಂದು ತಂಡ ಕಾರಿನಲ್ಲಿ ಟ್ರೈನ್ನನ್ನು ಚೇಸ್ ಮಾಡಿದ್ದಾರೆ. ಆರೋಪಿಗಳು ಸುರತ್ಕಲ್ ಬಳಿ ಇಳಿದುಕೊಂಡು ಗುಜರಾತ್ನ ದಹೇಜ್ ಕೈಗಾರಿಕಾ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಸುತ್ತುವರೆದ ಮಡಿವಾಳ ಪೊಲೀಸರು ಇಬ್ಬರು ಆರೋಪಿಗಳನ್ನು ಖೆಡ್ಡಾಗೆ ಕೆಡವಿ ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಿಸಿದಾಗ ಅವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರೆಂದು ತಿಳಿದು ಬಂದಿದೆ. ಆರೋಪಿ ಬಾಲಕರು ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದು ಊರಿಗೆ ಹೋಗುವ ಮುಂಚೆ ಸುಲಿಗೆ ಮಾಡಿಕೊಂಡು ಹೋಗಲು ಯೋಚಿಸಿದ್ದರಂತೆ. ಸದ್ಯ ಆರೋಪಿ ಬಾಲಕರನ್ನು ಪೊಲೀಸರು ಬಾಲಾಪರಾಧಿಗಳ ಪರಿವೀಕ್ಷಣಾ ಮಂದಿರಕ್ಕೆ ರಿಮ್ಯಾಂಡ್ ಮಾಡಿದ್ದಾರೆ. ಒಟ್ಟಿನಲ್ಲಿ ತಪ್ಪು ಮಾಡಿದವರು ಎಲ್ಲೇ ಅಡಗಿದ್ದರೂ ಬೆಂಗಳೂರು ಪೊಲೀಸರು ಬಿಡಲ್ಲ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.