ತಮಿಳುನಾಡು ನೂತನ ಸಚಿವರಿಗಿಲ್ಲ ಶಶಿಕಲಾ ದರ್ಶನ
ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಶಶಿಕಲಾರನ್ನು ನೋಡಲು ಬಂದ ತಮಿಳುನಾಡು ಸಚಿವರಿಗೆ ನಿರಾಸೆ ಕಾದಿತ್ತು. ಮೂವರು ಮಂತ್ರಿಗಳಾದ ಡಿ ಶ್ರೀನಿವಾಸನ್, ಸೆಂಗೊಟೈಯನ್ ಮತ್ತು ಸೆಲ್ಲೂರ್ ರಾಜುರನ್ನು ಜೈಲಿನೊಳಕ್ಕೆ ಬಿಟ್ಟಿಲ್ಲ.
ಇದರಿಂದಾಗಿ ಚೆನ್ನೈನಿಂದ ಬೆಂಗಳೂರ ತನಕ ಬಂದಿದ್ದ ಸಚಿವರಿಗೆ ಚಿನ್ನಮ್ಮನ ದರ್ಶನ ಲಭ್ಯವಾಗಿಲ್ಲ.[ಶಶಿಕಲಾ ನಟರಾಜನ್ ಮತ್ತು ಮನ್ನಾರ್ ಗುಡಿ ಗ್ಯಾಂಗ್]

ಕಾರಾಗೃಹ ವಿಭಾಗದ ಡಿಜಿಪಿಯವರ ಆದೇಶದಂತೆ ವಾರಕ್ಕೆ ಕೇವಲ ಎರಡು ಬಾರಿ ಖೈದಿಗಳನ್ನು ಭೇಟಿಯಾಗಲು ಅವಕಾಶವಿದೆ. ಆದರೆ ಈಗಾಗಲೇ ಶಶಿಕಲಾ ತಮ್ಮ ಆಪ್ತರು ಮತ್ತು ವಕೀಲರನ್ನು ಭೇಟಿಯಾಗಿದ್ದರಿಂದ ಅವರ ಪಾಲಿನ ಕೋಟಾ ಮುಗಿದಿದೆ. ಹೀಗಾಗಿ ಸಚಿವರ ಭೇಟಿಗೆ ಜೈಲು ಮುಖ್ಯಸ್ಥರು ಅವಕಾಶ ನೀಡಿಲ್ಲ.[ಶಶಿಕಲಾ ಬರುವ ದಾರಿಯಲ್ಲಿ.. ಗಲಭೆ ಸೃಷ್ಟಿಸಲು ಸುಪಾರಿ ಕೊಟ್ಟಿದ್ರಂತೆ!]
ಸಚಿವರು ಮಂಗಳವಾರ ಶಶಿಕಲಾ ಭೇಟಿಗೆ ಅವಕಾಶ ಕೇಳಿದ್ದರು. ಆದರೆ ಮೂರು ಗಂಟೆಗಳಷ್ಟು ಕಾದ ನಂತರ ಭೇಟಿ ಸಾಧ್ಯವಿಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮತ್ತೆ ಮುಂದಿನ ವಾರ ಶಶಿಕಲಾರನ್ನು ಭೇಟಿಯಾಗಲು ಸಚಿವರು ಬೆಂಗಳೂರಿಗೆ ಆಗಮಿಸಬೇಕಾಗಿದೆ.
ಈಗಾಗಲೇ ಶಶಿಕಲಾ ಪರಪ್ಪನ ಅಗ್ರಹಾರದಿಂದ ತಮಿಳುನಾಡಿಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜೈಲಿನ ಅಧಿಕಾರಿಗಳು ಅರ್ಜಿಯನ್ನು ಕರ್ನಾಟಕ ಗೃಹ ಇಲಾಖೆಗೆ ಕಳುಹಿಸಿದೆ. ಆದರೆ ಕಾನೂನು ತಜ್ಞರ ಪ್ರಕಾರ ಪ್ರಕರಣ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದಲ್ಲೇ ಈ ವರ್ಗಾವಣೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ. ಮುಂದೇನಾಗುತ್ತದೋ ನೋಡಬೇಕಾಗಿದೆ.












Click it and Unblock the Notifications