Darshan Bail: ಈ ಕಾರಣಕ್ಕೆ ದರ್ಶನ್ ಜಾಮೀನು ಅರ್ಜಿ ಪದೇ ಪದೇ ಮುಂದೂಡಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ಗೆ ಪದೇ ಪದೇ ಜಾಮೀನು ಅರ್ಜಿ ವಿಚಾರಣೆ ಮುಂದೂಡಿತ್ತಿರುವುದು ನಿರಾಸೆ ತಂದಿದೆ. ಸೆಪ್ಟೆಂಬರ್ 27ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿದ್ದರು, ಅದನ್ನು ಇಂದಿಗೆ (ಸೆಪ್ಟೆಂಬರ್ 30) ಮುಂದೂಡಲಾಗಿತ್ತು, ಇಂದಾದರೂ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತದೆ ಎಂದು ಕಾದಿದ್ದ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.
ಹಾಗಾದರೆ ದರ್ಶನ್ ಜಾಮೀನು ಅರ್ಜಿ ಪದೇ ಪದೇ ಮುಂದೂಡಿಕೆಯಾಗುತ್ತಿರುವುದು ಯಾಕೆ, ದರ್ಶನ್ ಪರ ವಕೀಲರ ಮಾಸ್ಟರ್ ಪ್ಲಾನ್ ಏನಿದೆ. ಎರಡು ಬಾರಿ ದರ್ಶನ್ ಪರ ಅರ್ಜಿ ವಿಚಾರಣೆ ಮುಂದೂಡಲು ಮನೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ.

57ನೇ ಸೆಷನ್ ಕೋರ್ಟ್ನಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆಗೆ ಬಂದಿತು. ಆದರೆ ದರ್ಶನ್ ಪರ ವಕೀಲರು ವಾದ ಮಂಡಿಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಕೇಳಿದ್ದರಿಂದ ಐದು ದಿನಗಳ ಕಾಲ ವಿಚಾರಣೆಯನ್ನು ಮುಂದೂಡಿತು. ಈಗ ಅಕ್ಟೋಬರ್ 4ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಕೋರ್ಟ್ ಕೂಡ ಅಂದೇ ಈ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಹಿರಿಯ ವಕೀಲರ ಅಲಭ್ಯತೆ
ಎರಡು ಬಾರಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲು ಪ್ರಮುಖ ಕಾರಣ ದರ್ಶನ್ ಪರ ಹಿರಿಯ ವಕೀಲರು ಲಭ್ಯವಿಲ್ಲದೇ ಇರುವುದು. ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಎಸ್ಪಿಪಿ ಪ್ರಸನ್ನಕುಮಾರ್ ತಕರಾರು ಅರ್ಜಿ ಸಲ್ಲಿಸಿದ ಬಳಿಕ ವಿಚಾರಣೆ ಆರಂಭವಾಯಿತು, ಆದರೆ ದರ್ಶನ್ ಪರ ಕಿರಿಯ ವಕೀಲ ಸುನಿಲ್ ಕಕ್ಷಿದಾರ ಪರ ಹಿರಿಯ ವಕೀಲರು ಹಾಜರಿಲ್ಲದ ಕಾರಣ, ವಿಚಾರಣೆ ಮುಂದೂಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸೆ.27ರಂದು ಹಿರಿಯ ವಕೀಲರು ಹಾಜರಿಲ್ಲ ಎಂದು ವಿಚಾರಣೆ ಮುಂದೂಡಲು ಮನವಿ ಮಾಡಿದ್ದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಆಕ್ಷೇಪಣೆ ಸಲ್ಲಿಸಿಲ್ಲ ಎಂದು ದರ್ಶನ್ ಪರ ವಕೀಲರು ತಕರಾರು ಮಾಡಿದ್ದರು, ಈಗ ನಾವು ಆಕ್ಷೇಪಣೆ ಸಲ್ಲಿಸಿದ್ದು, ವಾದ ಮಂಡಿಸಲೂ ಸಿದ್ದರಾಗಿದ್ದೇವೆ, ಆದ್ದರಿಂದ ನಮಗೆ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ ದರ್ಶನ್ ಪರ ವಕೀಲರ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತು.
ವಾದ ಮಂಡನೆಗೆ ಸಿದ್ಧತೆ
ದರ್ಶನ್ಗೆ ಸೆಷನ್ಸ್ ಕೋರ್ಟ್ನಲ್ಲೇ ಜಾಮೀನು ಸಿಗಲಿದೆ ಎಂದು ದರ್ಶನ್ ಪರ ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದರು. ಆರೋಪ ಪಟ್ಟಿಯನ್ನು ಅಧ್ಯಯನ ಮಾಡಿರುವ ವಕೀಲರು, ಹಲವು ಕಾರಣಗಳನ್ನು ಕೊಟ್ಟು ದರ್ಶನ್ಗೆ ಜಾಮೀನು ನೀಡಬೇಕು ಎಂದು ವಾದಿಸಲು ಸಜ್ಜಾಗಿದ್ದಾರೆ. ಅಕ್ಟೋಬರ್ 4ರಂದು ನ್ಯಾಯಾಲಯದಿಂದ ಸಿಹಿ ಸುದ್ದಿ ಸಿಗಲಿದೆ ಎಂದು ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.












Click it and Unblock the Notifications