Bengaluru Karaga: ಐತಿಹಾಸಿಕ ಬೆಂಗಳೂರು ಕರಗದಲ್ಲಿ ಯಾವುದೇ ಬದಲಾವಣೆಯಿಲ್ಲ; ಆರ್. ಅಶೋಕ್
ಬೆಂಗಳೂರು, ಏಪ್ರಿಲ್ 8: "ಬೆಂಗಳೂರು ಕರಗಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಈ ಹಿಂದೆ ಕರಗ ಹೇಗೆ ನಡೆಯುತ್ತಿತ್ತೋ ಈ ಬಾರಿಯೂ ಅದೇ ರೀತಿ ನಡೆಯುತ್ತದೆ," ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, "ಹಿಂದಿನ ಪರಂಪರೆಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ, ಕರಗ ನಡೆಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕರಗ ಸಮಿತಿ ನಿರ್ಧಾರ ಮಾಡಿದೆ. ಕರಗ ವಿಚಾರವಾಗಿ ನಾನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದ್ದೇನೆ. ಹಿಂದಿನ ಸಂಪ್ರದಾಯದಂತೆ ಕರಗ ನಡೆಸುವುದಾಗಿ ಹೇಳಿದ್ದಾರೆ," ಎಂದು ಸಚಿವ ಆರ್. ಅಶೋಕ್ ವಿವರಿಸಿದರು.
"ದರ್ಗಾದ ಆಹ್ವಾನದ ಮೇರೆಗೆ ದರ್ಗಾ ಮುಂದೆಯೇ ಕರಗ ಹೋಗುತ್ತದೆ ಎಂದು ಹೇಳಿದ ಸಚಿವ ಆರ್. ಅಶೋಕ್, ಇದಕ್ಕೆ ಯಾವುದೇ ಸಮಸ್ಯೆ ಆಗಬಾರದು, ಇದು ಸರ್ಕಾರದ ಸ್ಪಷ್ಟ ನಿಲುವು. ಈಗಾಗಲೇ ನಾನು ಗೃಹ ಇಲಾಖೆ ಜೊತೆ ಚರ್ಚಿಸಿದ್ದೇನೆ ಎಂದು ವಿವರಿಸಿದ ಆರ್. ಅಶೋಕ್, ಕರಗ ನಡೆಯುವ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗಬಾರದು," ಎಂದು ಜನರಲ್ಲಿ ಮನವಿ ಮಾಡಿದರು.

ಮಾವು ಖರೀದಿ ವಿಚಾರ
ಮಾವು ಖರೀದಿ ಬಗ್ಗೆ ಜನರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಭೇಟಿ ಮಾಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ ಕಂದಾಯ ಸಚಿವರು, ರೈತರ ಹಣ್ಣುಗಳು ಯಾರು ಬೇಕಾದರೂ ಖರೀದಿ ಮಾಡಬಹುದು, ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ ಹಿಂದೂಪರ ಸಂಘಟನೆಗಳ ವಿರುದ್ಧ ಕಿಡಿಕಾರಿದ ಅವರು, ಹಿಂದೆ ಹೇಗೆ ವ್ಯಾಪಾರ ನಡೆಯುತ್ತಿತ್ತೋ ಹಾಗೆಯೇ ವ್ಯಾಪಾರ ನಡೆಯಬೇಕು. ಯಾವುದೇ ವಿಚಾರದಲ್ಲಿ ಕೋಮುಗಲಭೆ ಸೃಷ್ಟಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ ಅವರು, ಬೆಂಗಳೂರು ಕರಗಕ್ಕೆ ತನ್ನದೇ ಆದ ಇತಿಹಾಸ ಇದೆ. ಬೆಂಗಳೂರು ಕರಗಕ್ಕೆ ಕೆಂಪೇಗೌಡರ ಕೊಡುಗೆ ಇದೆ, ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಇಲ್ಲಿರುವ ಎಲ್ಲಾ ಸಮುದಾಯಗಳಿಗೆ ವ್ಯಾಪಾರ ಮಾಡುವ ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು.
ಇನ್ನು ಮೋಹನ್ ದಾಸ್ ಪೈ ಟ್ವೀಟ್ ವಿಚಾರವಾಗಿ ಮಾತನಾಡಿ, ಇಡೀ ದೇಶದಲ್ಲಿ ವೇಗವಾಗಿ ಬೆಳೆಯುವ ನಗರ ಅಂದರೆ ಅದು ಬೆಂಗಳೂರು. ಇಡೀ ದೇಶದಲ್ಲಿ ಕಂಪನಿಗಳನ್ನು ಆಕರ್ಷಣೆ ಮಾಡುವ ನಗರ ಅಂದರೆ ಅದು ಬೆಂಗಳೂರು. ಹೈದರಾಬಾದ್ಗೆ ಉದ್ಯಮಿಗಳು ಬರಬೇಕು ಎಂದು ತೆಲಂಗಾಣ ಮಂತ್ರಿಯೊಬ್ಬರು ಆಮಂತ್ರಣ ನೀಡಿದ್ದಾರೆ. ಬೆಂಗಳೂರಿಗೆ ಪ್ರತಿಸ್ಪರ್ಧಿ ಹೈದರಾಬಾದ್ ಅಲ್ಲ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ರಸ್ತೆ ಅಭಿವೃದ್ಧಿ ಬಗ್ಗೆ ಸಿಎಂ ಬೊಮ್ಮಾಯಿ ಗಮನ ಹರಿಸುತ್ತಿದ್ದಾರೆ ಎಂದು ಹಾರಿಕೆಯ ಉತ್ತರ ನೀಡಿದ ಅವರು, ಈಗಾಗಲೇ ಆರೂವರೆ ಸಾವಿರ ಕೋಟಿ ರೂ. ಅನುದಾನ ಬೆಂಗಳೂರಿಗೆ ಸಿಕ್ಕಿದೆ ಎಂದರು. ಆದರೆ ಮೂಲಭೂತ ಸಮಸ್ಯೆ ಮಾತ್ರ ಗಗನಕುಸುಮವಾಗಿದೆ. ಇಡೀ ಬೆಂಗಳೂರಿನ ರಸ್ತೆಗಳು, ಡಾಂಬರೀಕರಣ ಆಗಲಿದೆ. ಎಲ್ಲಾ ಉದ್ಯಮಿಗಳಿಗೆ ಬೇಕಾಗುವ ಎಲ್ಲಾ ಸೌಕರ್ಯ ನಾವು ನೀಡುತ್ತೇವೆ ಎಂದು ಸಚಿವ ಆರ್. ಅಶೋಕ್ ಹೇಳಿದರು.












Click it and Unblock the Notifications