ನೋಡ್ತಾ ಇರಿ! ಬೆಂಗಳೂರನ್ನು ಅಂತಾರಾಷ್ಟ್ರೀಯ ಸ್ಮಾರ್ಟ್ ನಗರವನ್ನಾಗಿಸುತ್ತೇವೆ: ಸಿಎಂ
ಬೆಂಗಳೂರು, ಏಪ್ರಿಲ್ 18 : ಇಡೀ ಜಗತ್ತಿನಲ್ಲಿಯೇ ಸಿಲಿಕಾನ್ ಸಿಟಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಮೆಟ್ರೋ, ಸಬ್ ಅರ್ಬನ್ ರೈಲು, ರಸ್ತೆ, ಹೊಸ ಬಡಾವಣೆಗಳ ನಿರ್ಮಾಣ, ಸ್ಯಾಟಿಲೈಟ್ ಟೌನ್ಗಳ ನಿರ್ಮಾಣ ಮೂಲಕ ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ಸ್ಮಾರ್ಟ್ ನಗರವನ್ನಾಗಿ ಮಾಡುವ ದೂರದೃಷ್ಟಿಯ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 'ಮಾಸ್ತಿ ಭವನ' ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬೆಂಗಳೂರನ್ನು ಅಂತರರಾಷ್ಟ್ರೀಯ ಬ್ರ್ಯಾಂಡ್ ಮಾಡುವ ಮೂಲಕ ಆರ್ಥಿಕತೆಗೆ ಇಂಬು ನೀಡಲಾಗುತ್ತದೆ. ಬೆಂಗಳೂರು ಭಾರತ, ಕರ್ನಾಟಕ ಹೆಮ್ಮೆ ಪಡುವ ನಗರವಾಗಲಿದೆ. ಬೆಂಗಳೂರು ಕೇವಲ ಕಟ್ಟಡಗಳಿಂದಾಗುವುದಿಲ್ಲ. ಉತ್ತಮ ಸಾಹಿತ್ಯ, ಗ್ರಂಥಾಲಯ, ಕ್ರೀಡೆ ಹೀಗೆ ಎಲ್ಲ ರಂಗಗಳಲ್ಲಿಯೂ ಬೆಂಗಳೂರು ಅಭಿವೃದ್ಧಿಯಾಗಬೇಕು. ಬೆಂಗಳೂರಿನ ಸಮಗ್ರ ಅಭಿವೃದ್ಧಿ ಸರ್ಕಾರ ಬದ್ಧವಾಗಿದೆ. ಬೆಂಗಳೂರಿನ ಅಭಿವೃಧ್ದಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಮೂಲಕ ಬೆಂಗಳೂರಿನ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ:
ಸಚಿವ ಸೋಮಶೇಖರ್ ಅವರ ಕಾರ್ಯಕ್ಷಮತೆಯಿಂದ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಈ ಬಾರಿ 33 ಲಕ್ಷ ರೈತರಿಗೆ ಶೂನ್ಯಬಡ್ಡಿ ಸಾಲ ಸೌಲಭ್ಯ, ರೈತರಿಗೆ ಯಶಸ್ವಿನಿ ಯೋಜನೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಮಾಸ್ತಿ ಕನ್ನಡ ಸಾಹಿತ್ಯ ಲೋಕದ ಆಸ್ತಿ
ಮಾಸ್ತಿಯವರ ಸಾಹಿತ್ಯದ ಎಲ್ಲ ಚಟುವಟಿಕೆಗಳು ಭವನದಲ್ಲಿ ಆಗಲಿದೆ. ಮಾಸ್ತಿ ಅವರು ಸಾಹಿತ್ಯ ಲೋಕಕ್ಕೆ ನೀಡಿರುವ ಆಸ್ತಿ ಈ ಭವನದ ಮೂಲಕ ಮುಂದಿನ ಜನಾಂಗಕ್ಕೂ ಮುಂದುವರೆಯಲಿದೆ ಎಂಬ ವಿಶ್ವಾಸವಿದೆ. ಮಾಸ್ತಿಯವರು ಕೇವಲ ಕರ್ನಾಟಕದ ಅಸ್ತಿಯಲ್ಲ, ಭಾರತ ದೇಶದ ಆಸ್ತಿಯನ್ನಾಗಿ ಮಾಡುವ ಆಶಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

ಕನ್ನಡದ ಅಸಾಮಾನ್ಯ ಸಾಹಿತಿಗಳು :
ಕನ್ನಡ ಸಾಹಿತ್ಯಕ್ಕೆ ಅತ್ಯಂತ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಕನ್ನಡ ಸಾಹಿತ್ಯ ಮನುಕುಲಕ್ಕೆ ಕೊಟ್ಟಿರುವ ಕೊಡುಗೆ ಅಪಾರ.ನಮ್ಮ ದೇಶದಲ್ಲಿ ಚರಿತ್ರೆ ಇದೆ. ಒಳ್ಳೆಯ ಚಾರಿತ್ರ್ಯ ಬೇಕಿದೆ. ಒಳ್ಳೆಯ ಚಾರಿತ್ರ್ಯ ಒಳ್ಳೆಯ ಚಿಂತನೆ ಹಾಗೂ ಅದರ ಅಭಿವ್ಯಕ್ತಿ ಸಾಹಿತ್ಯದಿಂದ ಮಾತ್ರ ಸಾಧ್ಯ. ಸಾಹಿತ್ಯದಲ್ಲಿ ಉತ್ಕøಷ್ಟತೆಯ ಪ್ರತಿಪಾದನೆ ದೊಡ್ಡ ತಪಸ್ಸು. ಅಂತಹ ತಪ್ಪಸ್ಸಿನ ಮೂಲಕ ಸಾಹಿತ್ಯ ದಿಗ್ಗಜರು ಜ್ಞಾನಪೀಠ ಪುರಸ್ಕೃತರು. ಸಾಮಾನ್ಯ ಜನರ ನಡುವೆ ಅಸಮಾನ್ಯ ಸಾಹಿತಿಗಳು ಕನ್ನಡದಲ್ಲಿದ್ದಾರೆ ಎಂದರು.
ಮಾಸ್ತಿ ಭವನದಲ್ಲಿ ಸಾಹಿತ್ಯಾತ್ಮಕ ಸಂಶೋಧನೆ : ವಿಭಿನ್ನ ದೃಷ್ಟಿಕೋನ, ವಾಸ್ತವಾಂಶದ ನೆಲೆಗಟ್ಟಿನ ವಿಶ್ಲೇಷಣೆ, ವೈಚಾರಿಕತೆಯನ್ನು ಮಾಸ್ತಿಯರ ಕೃತಿಗಳಲ್ಲಿ ಕಾಣಬಹುದು. ಮಾಸ್ತಿಯವರ ವಿಚಾರ ಬಂಢಾರ ಇವತ್ತಿನ ಕಾಲಕ್ಕೆ ಯಾವ ರೀತಿ ಸಾಮ್ಯತೆ, ಭಿನ್ನತೆಗಳಿವೆ ಎನ್ನುವ ಬಗ್ಗೆ ಚಿಂತನೆ,ಸಾಹಿತ್ಯಾತ್ಮಕ ಸಂಶೋಧನಾ ಕಾರ್ಯಗಳು ಮಾಸ್ತಿ ಭವನದಲ್ಲಿ ಆಗಬೇಕು. ಮಾಸ್ತಿ ಭವನದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದರು.
ಚಂದ್ರಶೇಖರ ಕಂಬಾರ ಅವರ ಚಿಂತನೆ, ಜಾನಪದ ಸೊಗಡು ಮನಸ್ಸಿಗೆ ಹತ್ತಿರವಾಗುವಂಥದ್ದು. ಅವರ ಒತ್ತಾಸೆಯಿಂದ ಹಾವೇರಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ವೈಚಾರಿಕ ಚಿಂತನೆಗೆ, ಸಮಾಜದ ಅಂಕುಡೊಂಕುಗಳನ್ನು ಅವರ ಕೃತಿಗಳು ಬಿಂಬಿಸುತ್ತವೆ ಎಂದರು.












Click it and Unblock the Notifications