ಜೆಸಿ ರಸ್ತೆ ಸ್ಟೀಲ್ ಬ್ರಿಡ್ಜ್ ಯೋಜನೆಗೆ ದೊರೆಯದ ಅನುಷ್ಠಾನ
ಬೆಂಗಳೂರು, ಜನವರಿ 25: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಜೆಸಿ ರಸ್ತೆಯಿಂದ ನಿರ್ಮಿಸಲು ಯೋಜಿಸಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಕರೆದಿದ್ದ ಟೆಂಡರ್ ಮೂರನೇ ಬಾರಿಯೂ ರದ್ದಾಗಿದೆ.
ಜೆಸಿ ರಸ್ತೆಯ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, 2016ರಲ್ಲಿ ಯೋಜನೆಗೆ 135 ಕೋಟಿ ರೂ ಅಂದಾಜಿಸಲಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಯೋಜನೆ ಅನುಷ್ಠಾನಕ್ಕೆ ಪಾಲಿಕೆ ನಿರಾಸಕ್ತಿ ತೋರಿದರಿಂದಾಗಿ ಸೇತುವೆ ನಿರ್ಮಾಣ ಅಂದಾಜು ವೆಚ್ಚ 179 ಕೋಟಿ ರೂಗೆ ಏರಿಕೆಯಾಗಿದೆ.
ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ
ಸ್ಟೀಲ್ ಬ್ರಿಡ್ಜ್ ನ್ನು ಮೊದಲು ಕೇಂದ್ರ ಪುರಸ್ಕೃತ ಜೆ ನರ್ಮ್ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಪಾಲಿಕೆ ಮುಂದಾಗಿತ್ತು. ಇದಕ್ಕೆ ಒಪ್ಪಿಗೆ ಸಿಗದ ಕಾರಣ ರಾಜ್ಯ ಸರ್ಕಾರದ ನಗರೋತ್ಥಾನ ಯೋಜನೆಯತ್ತ ದೃಷ್ಟಿ ಹರಿಸಿದರೂ,ಯಶಸ್ಸು ಸಿಗಲಿಲ್ಲ, ಇತ್ತೀಚೆಗೆ ಕೇಂದ್ರದ ಅಮೃತ್ ಯೋಜನೆಯ ಅನುದಾನ ಬಳಸಿಕೊಳ್ಳುವ ಪ್ರಯತ್ನವೂ ಫಲ ನೀಡಲಿಲ್ಲ.
ಯೋಜನೆ ಅನುಷ್ಠಾನಕ್ಕೆ ಮುಂದಾಗದ ಪಾಲಿಕೆ
ಆದರೆ ಪಾಲಿಕೆಯಿಂದ ನಿಗದಿತ ಅವಧಿಯಲ್ಲಿ ಟೆಂಡರ್ ಆಹ್ವಾನಿಸಿ ಯೋಜನೆ ಜಾರಿಗೊಳಿಸಲು ಮುಂದಾಗಿಲ್ಲ. ಈ ನಡುವೆ ಜಿಎಸ್ಟಿ ಜಾರಿಯಾಗಿ ಕಟ್ಟಡ ನಿರ್ಮಾಣ ಸರಕು-ಸಲಕರಣೆಗಳ ಬೆಲೆಯಲ್ಲಿ ಏರಿಕೆಯಾಗಿದೆ. ಆ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಅಂದಾಜು ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ನಗರೋತ್ಥಾನ ಯೋಜನೆ 135 ಕೋಟಿಗೆ ಅನುಮೋದನೆ
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಯಲ್ಲಿ 135 ಕೋಟಿ ರೂ.ಗಳಲ್ಲಿ ಸೇತುವೆ ನಿರ್ಮಿಸಲು ಅನುಮೋದನೆ ನೀಡಿತ್ತು. ಯೋಜನೆಯ ವಿಸ್ತೃತ ಯೋಜನೆ ವರದಿ ಸಿದ್ಧಪಡಿಸಿದ್ದ ಮೂರನೇ ವ್ಯಕ್ತಿಯ ಸಂಸ್ಥೆಯು ಸೇತುವೆ ನಿರ್ಮಾಣಕ್ಕೆ 138.80 ಕೋಟಿ ರೂ.ಗಳಲ್ಲಿ ಯೋಜನೆ ನಿರ್ಮಿಸಬಹುದೆಂದು ವಿವರವಾದ ವರದಿ ನೀಡಿತ್ತು.
ಮರು ಟೆಂಡರ್ ಆಹ್ವಾನಿಸಲು ಸಿದ್ಧತೆ
ಅದರಂತೆ ಯೋಜನೆ ಅನುಷ್ಠಾನಕ್ಕಾಗಿ ಕೆಲ ತಿಂಗಳ ಹಿಂದೆ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಗುತ್ತಿಗೆದಾರರು ಅಂದಾಜು ಮೊತ್ತಕ್ಕಿಂತಲೂ ಶೇ.32ರಷ್ಟು ಹೆಚ್ಚು ಮೊತ್ತವನ್ನು ಟೆಂಡರ್ನಲ್ಲಿ ಉಲ್ಲೇಖೀಸಿದ್ದಾರೆ. ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ 2.91 ಕಿ.ಮೀ. ಉದ್ದದ ಸೇತುವೆ ನಿರ್ಮಾಣವನ್ನು 179 ಕೋಟಿಯಲ್ಲಿ ನಿರ್ಮಿಸುವುದಾಗಿ ಗುತ್ತಿಗೆದಾರರು ಟೆಂಡರ್ನಲ್ಲಿ ತಿಳಿಸಿದ್ದಾರೆ. ಈ ಕುರಿತು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದರೂ ಹಣ ಕಡಿಮೆ ಮಾಡಲು ಒಪ್ಪದ ಹಿನ್ನಲೆಯೆಲ್ಲಿ ಮರು ಟೆಂಡರ್ ಆಹ್ವಾನಿಸಲು ಪಾಲಿಕೆ ಮುಂದಾಗಿದೆ.
ಸ್ಟೀಲ್ ಬ್ರಿಡ್ಜ್ ಅನುಕೂಲವೇನು?
ಜೆ.ಸಿ.ರಸ್ತೆಯಲ್ಲಿ ಸೇತುವೆ ನಿರ್ಮಿಸುವುದರಿಂದ ಪ್ರಮುಖ ಏಳು ಜಂಕ್ಷನ್ಗಳು ಸಿಗ್ನಲ್ ಮುಕ್ತವಾಗಲಿವೆ. ಅದರಂತೆ ಮಿನರ್ವ ಜಂಕ್ಷನ್, ಭಾರತ್ ಟಾಕಿಸ್, ಶಿವಾಜಿ ಟಾಕೀಸ್, ಟೌನ್ಹಾಲ್, ಎಲ್ಐಸಿ ಕೇಂದ್ರ ಕಚೇರಿ, ಹಲಸೂರು ಗೇಟ್ ಪೊಲೀಸ್ ಠಾಣೆ ಹಾಗೂ ಹಡ್ಸನ್ ವೃತ್ತದ ಜಂಕ್ಷನ್ಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಜತೆಗೆ ಸಂಚಾರದಲ್ಲಿ 30 ನಿಮಿಷಗಳ ಉಳಿತಾಯವಾಗಲಿದೆ.