'ತೇಜಸ್ವಿನಿ ಅನಂತ್ ಕುಮಾರ್ ಜಯನಗರದ ಬಿಜೆಪಿ ಅಭ್ಯರ್ಥಿಯಲ್ಲ'
ಬೆಂಗಳೂರು, ಮೇ 14 : 'ತೇಜಸ್ವಿನಿ ಅವರು ಜಯನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಸ್ಪಷ್ಟನೆ ನೀಡಿದರು.
ಬಸವನಗುಡಿಯಲ್ಲಿ ಸೋಮವಾರ ದಿ.ವಿಜಯ ಕುಮಾರ್ ಶ್ರದ್ಧಾಂಜಲಿ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅನಂತ್ ಕುಮಾರ್ ಅವರು, 'ತೇಜಸ್ವಿನಿ ಅವರು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ' ಎಂದು ಹೇಳಿದರು.

'ತೇಜಸ್ವಿನಿ ಅವರು ಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬುದು ಕೇವಲ ವದಂತಿ. ಸಮಾಜ ಸೇವಾ ಕಾರ್ಯಗಳಲ್ಲೇ ಅವರು ನೆಮ್ಮದಿಯಿಂದ ಇದ್ದಾರೆ' ಎಂದು ಅನಂತ್ ಕುಮಾರ್ ಸ್ಪಷ್ಟಪಡಿಸಿದರು.

'ರಾಜ್ಯ ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳು ಮುಗಿದ ಬಳಿಕ ರಾಜ್ಯ ಬಿಜೆಪಿ ನಾಯಕರು ಜಯನಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ತೇಜಸ್ವಿನಿ ಅವರು ಅಭ್ಯರ್ಥಿಯಾಗುವುದಿಲ್ಲ' ಎಂದು ಹೇಳಿದರು.
ಚುನಾವಣೆ ಮುಂದೂಡಿಕೆ : ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್.ವಿಜಯ ಕುಮಾರ್ ಅವರು ಮೇ 4ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಆದ್ದರಿಂದ, ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.
ತೇಜಸ್ವಿನಿ ಅನಂತ್ ಕುಮಾರ್ ಅವರು ಜಯನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಅನಂತ್ ಕುಮಾರ್ ಅವರು ಈ ಸುದ್ದಿಯನ್ನು ಇಂದು ತಳ್ಳಿ ಹಾಕಿದ್ದಾರೆ.
ಜಯನಗರ ಕ್ಷೇತ್ರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್ನಿಂದ ಕಾಳೇಗೌಡ ಅವರು ಕಣದಲ್ಲಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿ ಕೃಷ್ಣಾ ರೆಡ್ಡಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.












Click it and Unblock the Notifications