ಟೆಕ್ಕಿ ಅಮೃತಾ ಬೆಂಗಳೂರಿಗೆ; ತನಿಖೆ ಹಾದಿ ತಪ್ಪಿಸಲು ಪ್ರಯತ್ನ!
ಬೆಂಗಳೂರು, ಫೆಬ್ರವರಿ 07 : ತಾಯಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಟೆಕ್ಕಿ ಅಮೃತಾ ಮತ್ತು ಆಕೆಯ ಪ್ರಿಯಕರನನ್ನು ಕೆ. ಆರ್. ಪುರ ಪೊಲೀಸರು ಬೆಂಗಳೂರಿಗೆ ಕರೆ ತಂದಿದ್ದಾರೆ. ಕೊಲೆ ಮಾಡಿ ಪರಾರಿಯಾಗಿದ್ದ ಅಮೃತಾಳನ್ನು ಅಂಡಮಾನ್ನ ಪೋರ್ಟ್ ಬ್ಲೇರ್ನಲ್ಲಿ ಬಂಧಿಸಲಾಗಿತ್ತು.
ಫೆಬ್ರವರಿ 2ರ ಮುಂಜಾನೆ 4 ಗಂಟೆ ಸುಮಾರಿಗೆ ನಿದ್ರೆ ಮಾಡುತ್ತಿದ್ದ ತಾಯಿ ನಿರ್ಮಲಾರನ್ನು ಚಾಕುವಿನಿಂದ ಚುಚ್ಚಿ ಅಮೃತಾ ಹತ್ಯೆ ಮಾಡಿದ್ದಳು. ಬಳಿಕ ಸಹೋದರನ ಹರೀಶ್ ಕುಮಾರ್ ಹತ್ಯೆಗೆ ಪ್ರಯತ್ನ ನಡೆಸಿದ್ದಳು. ಸಹೋದರ ಅಸ್ವಸ್ಥಗೊಂಡ ಬಳಿಕ ಪರಾರಿಯಾಗಿದ್ದಳು.
ತಾಯಿಕೊಂದಿದ್ದ ಟೆಕ್ಕಿ ಅಮೃತಾ, ಪ್ರಿಯಕರ ಶ್ರೀಧರ್ ಬಂಧನ
ಫೆಬ್ರವರಿ 5ರಂದು ಅಂಡಮಾನ್ನ ಪೋರ್ಟ್ ಬ್ಲೇರ್ನಲ್ಲಿ ಪ್ರಿಯಕರ ಶ್ರೀಧರ್ ಜೊತೆ ಇದ್ದ ಅಮೃತಾಳನ್ನು ಕೆ. ಆರ್. ಪುರ ಪೊಲೀಸರು ಬಂಧಿಸಿದ್ದರು. ಇಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತಾಯಿ ಕೊಂದು ಟೆಕ್ಕಿ ಪರಾರಿ; ಏರ್ಪೋರ್ಟ್ನಲ್ಲಿ ಬೈಕ್ ಪತ್ತೆ
ಟೆಕ್ಕಿ ಅಮೃತಾ ಮತ್ತು ಆಕೆಯ ಪ್ರಿಯಕರ ಬೇರೆ-ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದು, ತನಿಖೆಯ ಹಾದಿ ತಪ್ಪಿಸಲು ಪ್ರಯತ್ನ ನಡೆಸುತ್ತಿರಬಹುದು ಎಂದು ಶಂಕಿಸಲಾಗಿದೆ. ಸಾಲದ ಕಾರಣಕ್ಕಾಗಿಯೇ ಹತ್ಯೆ ಮಾಡಿದ್ದೇನೆ ಎಂದು ಅಮೃತಾ ಹೇಳಿಕೆ ಕೊಟ್ಟಿದ್ದಾಳೆ.
ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು
4 ತಿಂಗಳಿನಿಂದ ಸಂಚು
ತಾಯಿ ಮತ್ತು ಸಹೋದರನ ಹತ್ಯೆಗೆ 4 ತಿಂಗಳ ಹಿಂದೆ ಟೆಕ್ಕಿ ಅಮೃತಾ ಸಂಚು ರೂಪಿಸಿದ್ದಳು. ಅದಕ್ಕಾಗಿಡೆಕಾಥ್ಲಾನ್ನಿಂದ ಎರಡು ಚಾಕುವನ್ನು ಖರೀದಿ ಮಾಡಿದ್ದಳು. ಫೆಬ್ರವರಿ 2ರಂದು ತಾಯಿ ನಿದ್ರೆ ಮಾಡುತ್ತಿದ್ದಾಗ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಳು. ಸಹೋದರ ಹರೀಶ್ ಕುಮಾರ್ ಕುತ್ತಿಗೆ ಭಾಗಕ್ಕೆ ಚಾಕು ಚುಚ್ಚಿದ್ದಳು. ಹರೀಶ್ ಅಸ್ವಸ್ಥರಾಗುತ್ತಿದ್ದಂತೆ ಮನೆಯಿಂದ ಪರಾರಿಯಾಗಿದ್ದಳು.
ಅಂಡಮಾನ್ಗೆ ಪ್ರಯಾಣ
ಫೆಬ್ರವರಿ 2ರಂದು ಪ್ರಿಯಕರ ಶ್ರೀಧರ್ ಜೊತೆ ಅಂಡಮಾನ್ಗೆ ಹೋಗಲು ಮೊದಲೇ ಅಮೃತಾ ತಯಾರಿ ಮಾಡಿಕೊಂಡಿದ್ದಳು. ಅದರಂತೆ ಶ್ರೀಧರ್ ಮನೆಯ ಬಳಿ ಮುಂಜಾನೆ ಬೈಕ್ ತೆಗೆದುಕೊಂಡು ಬಂದಿದ್ದ. ಇಬ್ಬರು ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಅಂಡಮಾನ್ಗೆ ಪರಾರಿಯಾಗಿದ್ದರು. ಅಮೃತಾ ಪರಾರಿಯಾದ ಬಳಿಕ ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಬೈಕ್ ಸಿಕ್ಕಿತ್ತು.
ಹತ್ಯೆಯ ಬಗ್ಗೆ ಎರಡು ಹೇಳಿಕೆ
ಅಮೃತಾ ಮನೆಯಿಂದ ಬರುವಾಗ ತಾಯಿಯನ್ನು ಹತ್ಯೆ ಮಾಡಿರುವ ವಿಚಾರವನ್ನು ಶ್ರೀಧರ್ಗೆ ಹೇಳಿರಲಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಅಂಡಮಾನ್ ತಲುಪಿದ ಮೇಲೆ ಈ ವಿಚಾರ ತಿಳಿಸಿದಳು ಎಂದು ಶ್ರೀಧರ್ ಹೇಳಿದ್ದಾರೆ. ಆದ್ದರಿಂದ, ಪೊಲೀಸರು ಹತ್ಯೆ ಪ್ರಕರಣದಲ್ಲಿ ಶ್ರೀಧರ್ ಪಾತ್ರ ಇರುವ ಕುರಿತು ವಿವರವಾದ ತನಿಖೆಯನ್ನು ನಡೆಸುತ್ತಿದ್ದಾರೆ.
2013ರಲ್ಲಿ ಪ್ರೇಮಾಂಕುರ
ಶ್ರೀಧರ್ ಮತ್ತು ಅಮೃತಾ 2013ರಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಹಲವಾರು ಕಡೆ ಈ ಜೋಡಿ ಓಡಾಡಿದ್ದರು. ಹೊಸಕೋಟೆ ಬಳಿ ಶ್ರೀಧರ್ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಗಾಯಗೊಂಡಿದ್ದ. ಆಗ ಅಮೃತಾ ಸಾಲ ಮಾಡಿ ಶ್ರೀಧರ್ಗೆ ಹಣ ಕೊಟ್ಟಿದ್ದಳು. ಬಳಿಕ ಇಬ್ಬರ ಜಗಳ ನಡೆದು ಬ್ರೇಕ್ ಅಪ್ ಆಗಿತ್ತು. ಕೆಲವು ದಿನಗಳ ಹಿಂದೆ ಮತ್ತೆ ಭೇಟಿಯಾಗಿದ್ದರು. ಆಗ ಅಂಡಮಾನ್ಗೆ ಪ್ರವಾಸ ಹೋಗುವ ಯೋಜನೆ ರೂಪಿಸಿದ್ದರು.
ವಿವಿಧ ಬ್ಯಾಂಕ್ನಿಂದ ಸಾಲ
ಅಮೃತಾ ಕ್ರೆಡಿಟ್ ಕಾರ್ಡ್ ಮೂಲಕ, ವಿವಿಧ ಬ್ಯಾಂಕ್ಗಳಿಂದ 15 ಲಕ್ಷ ರೂ.ಗಳಿಗೂ ಅಧಿಕ ಸಾಲ ಮಾಡಿದ್ದಳು. ಸಾಲ ಕೇಳುವವರು ಮನೆಗೆ ಬಂದರೆ ಅವಮಾನವಾಗುತ್ತದೆ ಎಂದು ತಾಯಿ, ಸಹೋದರನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದಳು. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದವಳು ಅಂಡಮಾನ್ಗೆ ಹೋಗುವ ಯೋಜನೆ ಮಾಡಿದ್ದಳೇ?,ಟೆಕ್ಕಿ ಅಮೃತಾ ಹೇಳಿಕೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಿ ವ್ಯಕ್ತಪಡಿಸಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.