ಟ್ಯಾಕ್ಸಿ- ಕ್ಯಾಬ್ ಆಪರೇಟರ್ ಗಳಿಂದ ಶೋಷಣೆ ತಪ್ಪಿಸಲು ಸಿಎಂಗೆ ಮನವಿ
ಬೆಂಗಳೂರು, ಜೂನ್ 5: ಸಿಟಿ ಟ್ಯಾಕ್ಸಿ- ಕ್ಯಾಬ್ ಚಾಲಕರಿಗೆ ಆಪರೇಟರ್ ಗಳಿಂದ ಶೋಷಣೆ ತಪ್ಪಿಸಲು ಉನ್ನತ ಮಟ್ಟದ ಸಮಿತಿ ರಚಿಸಿ, ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಆಪರೇಟರ್ ಗಳು , ಕ್ಯಾಬ್ ಮಾಲೀಕರು ಮತ್ತು ಚಾಲಕರಿಗೆ ಕಡಿಮೆ ಹಣ ಪಾವತಿಸುತ್ತಿದ್ದಾರೆ ಹಾಗೂ ವೈಯಕ್ತಿಕವಾಗಿ ತಮ್ಮ ಲಾಭ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ ಎಂದು ಹೇಳಿದರು.
ಈ ಬಗ್ಗೆ ತಕ್ಷಣ ಉನ್ನತ ಮಟ್ಟದ ಸಮಿತಿ ರಚಿಸಿ, ಟ್ಯಾಕ್ಸಿ ಚಾಲಕರು/ ಮಾಲೀಕರು ಮತ್ತು ಆಪರೇಟರ್ ಗಳ ಜೊತೆ ಮಾತುಕತೆ ನಡೆಸಿ, ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸಾರಿಗೆ ಆಯುಕ್ತರು ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಆದೇಶಿಸಿದರು.
ತಮ್ಮನ್ನು ಭೇಟಿಯಾದ ಉಬರ್ ಸಿಟಿ ಟ್ಯಾಕ್ಸಿ ಹಾಗೂ ಕೆ ಎಸ್ ಟಿಡಿಸಿ ಸಿಟಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ನಿಯೋಗದ ಅಹವಾಲುಗಳನ್ನು ಆಲಿಸಿ, ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.