ಹಣ ಸುಲಿಗೆ ಮಾಡುವ ಖಾಸಗಿ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಿ: ಎಎಪಿ
ಬೆಂಗಳೂರು, ಮೇ 19: ಸರ್ಕಾರಿ ಶಾಲೆ ಬಲವರ್ಧನೆಗೆ ಅತ್ಯುತ್ತಮ ಅವಕಾಶ ನೀಡಿ ಪೋಷಕರಿಗೆ ಮಕ್ಕಳ ಶಿಕ್ಷಣ ಹೊರೆ ಆಗದಂತೆ ನಿಯಮ ರೂಪಿಸಿ. ಹಣ ಸುಲಿಗೆ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದು ಆಮ್ ಆದ್ಮಿ ಪಕ್ಷದ ಒತ್ತಾಯ ಮಾಡಿದೆ.
ಕೊರೊನಾ ಲಾಕ್ಡೌನ್ನಿಂದ ಸಮಾಜದ ಎಲ್ಲಾ ವರ್ಗಗಳು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿವೆ. ಅದರಲ್ಲೂ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳು, ಪರೀಕ್ಷೆಗಳು ಅನಿವಾರ್ಯವಾಗಿ ಹಿಂದುಳಿಯ ಬೇಕಾಯಿತು. ಈ ಸಂಗತಿ ಅನೇಕ ಫೋಷಕರ ಆತಂಕಕ್ಕೆ ಕಾರಣವಾಗಿದೆ. ಜತೆಗೆ 2020-21 ನೇ ಸಾಲಿನ ಶೈಕ್ಷಣಿಕ ವರ್ಷ ಹೇಗಿರುತ್ತದೆ, ಮುಂದೇನು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ ಅದರಲ್ಲೂ ಬಡವರ್ಗ, ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗದ ಜನತೆ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿದ್ದಾರೆ.
ಇಂತಹ ಸಂಕಷ್ಟ ಕಾಲದಲ್ಲಿ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸುಲಿಗೆಗೆ ಕಡಿವಾಣ ಹಾಕಬೇಕಾಗಿದ್ದ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಸು ಹೊದ್ದು ಮಲಗಿರುವುದು ವಿಪರ್ಯಾಸವೇ ಸರಿ. ಇದುವರೆವಿಗೂ ಯಾವೊಂದು ಶಾಲೆಗಳ ಮೇಲೂ ದಾಳಿ ನಡೆಸಿ ಪ್ರಕರಣವನ್ನು ದಾಖಲಿಸಿಲ್ಲ. ಕೈಯಲ್ಲಿ ಹಣವಿಲ್ಲದೆ ಒದ್ದಾಡುತ್ತಿರುವ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ದಿಕ್ಕು ತೋಚದಂತೆ ಆಗಿದ್ದಾರೆ. ಇವರ ಬೆನ್ನಿಗೆ ನಿಲ್ಲಬೇಕಾಗಿದ್ದ ಸರ್ಕಾರ ಕೇವಲ ಶೈಕ್ಷಣಿಕ ವರ್ಷವನ್ನು ಮುಂದಕ್ಕೆ ಹಾಕಿ ತನ್ನ ಜವಾಬ್ದಾರಿ ಮುಗಿದಿದೆ ಎನ್ನುವಂತೆ ವರ್ತಿಸುತ್ತಿದೆ ಎಂದು ಎಎಪಿ ಅಸಮಾಧಾನ ಹೊರ ಹಾಕಿದೆ.

ಶಿಕ್ಷಕರಿಗೆ ತರಬೇತಿ ನೀಡಿ
ಲಾಕ್ ಡೌನ್ ಸಂದರ್ಭದಲ್ಲಿ ಶಿಕ್ಷಕರಿಗೆ ಗುಣಮಟ್ಟದ ಶಿಕ್ಷಣವನ್ನು ಹೇಗೆ ನೀಡಬೇಕೆಂಬ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸರ್ಕಾರಿ ಶಿಕ್ಷಣವನ್ನು ಮತ್ತಷ್ಟು ಬಲವರ್ಧನೆ ಗೊಳಿಸಬೇಕಾಗಿದೆ. ಸರ್ಕಾರಿ ಶಾಲೆ ಶಿಕ್ಷಕರಿಗೆ ಶೈಕ್ಷಣಿಕವಾಗಿ ಉತ್ತಮ ತರಬೇತಿ ನೀಡುವ ಬದಲು ಆರೋಗ್ಯ ಸಮೀಕ್ಷೆಯ ಹೆಸರಿನಲ್ಲಿ ಅಲೆಸುತ್ತಿರುವುದು ನ್ಯಾಯವೇ?. ಭೀಕರ ಅತಿವೃಷ್ಟಿಯಿಂದ ನಾಶವಾದ 6,064 ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ 774 ಕೋಟಿ ರೂಪಾಯಿ ಹಣವನ್ನು ಈ ಬಾರಿಯ ರಾಜ್ಯ ಬಜೆಟ್ನಲ್ಲಿ ನೀಡಿರುವುದು ಉತ್ತಮ ನಿರ್ಧಾರವೇನೂ ಅಲ್ಲ. ಏಳು ಸಾವಿರಕ್ಕೂ ಹೆಚ್ಚಿನ ಶಾಲೆಗಳ ರಿಪೇರಿಗೆ ಈ ಮೊತ್ತ ಯಾವುದಕ್ಕೂ ಸಾಲುವುದಿಲ್ಲ.

ಆಮ್ ಆದ್ಮಿ ಪಕ್ಷದ ಸಲಹೆಗಳು
* ಶಾಲೆಗಳು ಆರಂಭವಾಗಲು 3 ತಿಂಗಳ ಕಾಲಾವಕಾಶ ಇರುವುದರಿಂದ ಈ ಸಮಯವನ್ನು ಶಿಕ್ಷಕರ ತರಬೇತಿಗೆ ಮೀಸಲು ಇಡಬೇಕು.
* ಶೈಕ್ಷಣಿಕ ಅವಧಿ 3 ತಿಂಗಳು ಕಡಿಮೆ ಆಗಿರುವುದರಿಂದ ಮಕ್ಕಳಿಗೆ ಹೊರೆ ಆಗದಂತೆ ಪಾಠ, ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ತಜ್ಞರ ಸಮಿತಿ ರಚಿಸಿ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಬೇಕು.

ಗುಣಮಟ್ಟದ ಶಿಕ್ಷಣ
ಸರ್ಕಾರಿ ಶಾಲೆಗಳು ಎಲ್ಲಾ ಆಯಾಮಗಳಲ್ಲಿಯೂ ಸದೃಢಗೊಳ್ಳಬೇಕು, ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಆಶಯದಿಂದ ಜೂನ್ 2016ರಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಡಿಯಲ್ಲಿ ಶಾಲೆಗಳ ಸಬಲೀಕರಣ ಸಮಿತಿಯನ್ನು ರಚಿಸಿ ವರದಿ ತಯಾರಿಸಿತ್ತು. ಈ ವರದಿಯಲ್ಲಿ ಮಕ್ಕಳು ಗುಣಾತ್ಮಕ ಆರೈಕೆ ರಕ್ಷಣೆ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬುದನ್ನು ಪ್ರಧಾನವಾಗಿ ತಿಳಿಸಲಾಗಿತ್ತು, ಈ ವರದಿಯ ಅಂಶಗಳನ್ನು ಪರಿಗಣಿಸಬೇಕು.

ಅನುದಾನವನ್ನು ಹೆಚ್ಚಳ ಮಾಡಬೇಕು
ದೆಹಲಿಯಲ್ಲಿ ಶೇ 24 ಬಜೆಟ್ ಅನ್ನು ಮೀಸಲಿಟ್ಟು ಇಡೀ ವಿಶ್ವವೇ ದೆಹಲಿಯತ್ತ ನೋಡುವಂತಹ ಮಾದರಿ ವ್ಯವಸ್ಥೆ ಹಾಗೂ ಶಿಕ್ಷಣ ರೂಪಿತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಮೀಸಲಿಟ್ಟಿರುವ ಶೇ 11 ಅನುದಾನದಿಂದ ಮಾಡಲು ಯಾವುದೇ ಕಾರಣಕ್ಕೂ ಸಾದ್ಯವಿಲ್ಲ ಆದ ಕಾರಣ ಕೊರೊನಾ ವಿಶೇಷ ಪ್ಯಾಕೇಜ್ ಅಡಿ ಅನುದಾನವನ್ನು ಹೆಚ್ಚಳ ಮಾಡಬೇಕು.ಈ ಮೂಲಕ ಶಾಲಾ ಕೊಠಡಿಗಳನ್ನು ಉನ್ನತೀಕರಣಗೊಳಿಸುವ ದಿಶೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕು.

ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ
* ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿರುವ ದೂರುಗಳನ್ನು ಕಾಯುತ್ತಾ ಕೂರುವ ಬದಲು ಅಧಿಕಾರಿಗಳ ವಿಚಕ್ಷಣ ಸಮಿತಿಯನ್ನು ರಚನೆ ಮಾಡಿ ಅಕ್ರಮ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಕಠಿಣ ಕ್ರಮ ಕೈಗೊಳ್ಳವೇಕು.
* ಕೊರೊನಾ ಸಂಕಷ್ಟ ಕಾಲದಲ್ಲಿ ಮಕ್ಕಳ ಶೈಕ್ಷಣಿಕ ಸಂಗತಿಯೂ ಪೋಷಕರಿಗೆ ಹೊರೆ ಆಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹ. ಹಾಗೂ ಸರ್ಕಾರಿ ಶಾಲೆಗಳನ್ನು ದೆಹಲಿಯ ಮಾದರಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಅಹತ್ಯ ರೀತಿಯಲ್ಲಿ ನೆರವಾಗಲು ಆಮ್ ಆದ್ಮಿ ಪಕ್ಷ ಸಿದ್ಧವಿದೆ ಎಂದು ಆಮ್ ಆದ್ಮಿ ಪಕ್ಷ ಸಿದ್ದವಿದೆ.












Click it and Unblock the Notifications