ಡಿಕೆಶಿ, ಬೇಗ್ ಸಂಪುಟಕ್ಕೆ: ಸಾಹಿತಿ ಅನಂತಮೂರ್ತಿ ಆಕ್ಷೇಪ

ಅದಕ್ಕೂ ಮುನ್ನ... ಖುದ್ದು ಡಿಕೆಶಿ ಅವರು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಅವರಿಗೆ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಸವಿವರಣೆ ನೀಡಿ, ಅವರಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದುಬಂದಿರುವುದರಿಂದಲೇ ಅವರನ್ನು ಸಂಪುಟದೊಳಕ್ಕೆ ಸೇರಿಸಿಕೊಳ್ಳುತ್ತಿರುವುದಾಗಿ ಸಿಎಂ ಸಿದ್ದು ನಿರ್ಭಯದಿಂದ ಇದ್ದಾರೆ.
ಆದರೆ, ಲೋಕಸಭಾ ಚುನಾವಣೆವರೆಗೆ ಸಚಿವ ಸಂಪುಟ ವಿಸ್ತರಣೆಯೆಂಬ ಜೇನುಗೂಡಿಗೆ ಕೈಹಾಕುವುದು ಬೇಡವೆಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೈಕಮಾಂಡಿಗೆ ಮನವಿ ಮಾಡಿದ್ದರು. ಏಕಾಏಕಿ ಈಗ ಸಂಪುಟ ವಿಸ್ತರಣೆಗೆ ಕೈಹಾಕಿದ್ದಾರೆ.
ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಶಿವಕುಮಾರ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ನಾಯಕ ರೋಷನ್ ಬೇಗ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಜಾತಿ ಲೆಕ್ಕಾಚಾರದ ಎಣಿಕೆಯನ್ನು ಸರಿದೂಗಿಸಿದೆ ಎನ್ನಲಾಗಿದೆ. (ಸಚಿವ ಸ್ಥಾನಕ್ಕಾಗಿ ದೆಹಲಿಗೆ ಡಿಕೆಶಿ, ವಿಸ್ತರಣೆ ಇಲ್ಲ ಸಿಎಂ!)
ಆದರೂ... ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್ ಆರ್ ಹಿರೇಮಠ್ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆದ ಎಚ್ ಎಸ್ ದೊರೆಸ್ವಾಮಿ ಅವರು ಕಳಂಕಿತರಿಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಮುಂಚಿನಿಂದಲೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕರಾದ ಬಸವರಾಜ ರಾಯರೆಡ್ಡಿ, ಕೋಳಿವಾಡ ಮತ್ತು ಕೆ ಶಿವಮೂರ್ತಿ ಅವರುಗಳು ಬಂಡಾಯ ಬಾವುಟವನ್ನು ಜೋರಾಗಿಯೇ ಬೀಸಿರುವುದು ಕುತೂಹಲಕಾರಿಯಾಗಿದೆ. (ಎಸ್ಆರ್ ಹಿರೇಮಠ ಯಾರು? ಸಂಕ್ಷಿಪ್ತ ಪರಿಚಯ)
ಇನ್ನು, ಸಾರಸ್ವತ ಲೋಕದ ಹಿರಿಯ ಜೀವ ಯು ಆರ್ ಅನಂತಮೂರ್ತಿ ಅವರು ಕೂಡ ಕಳಂಕಿತರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರ ವಿರುದ್ಧ ಸಿಎಂ ಸಿದ್ದು ಅವರನ್ನು ಎಚ್ಚರಿಸಿದ್ದಾರೆ: ಈ ಭಾಗ್ಯಕ್ಕೇನಾ ನಾವು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದು ಎಂದು ಬೇಜಾರಾಗುತ್ತಿದೆ. ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ತೆಗೆದುಹಾಕಿದಾಗ ಸಿದ್ದರಾಮಯ್ಯ ಅವರಲ್ಲಿ ಇನ್ನೂ ನೀತಿ ನಿಜಾಯಿತಿ ಉಳಿದಿದೆ ಎಂದು ಸಂತಸಪಟ್ಟಿದ್ದೆವು. (ಕರ್ನಾಟಕ ವರ್ಷದ ವ್ಯಕ್ತಿಗೆ ಅಭಿನಂದನೆಗಳು)
ಆದರೆ ಇದೀಗ ಹೈಕಮಾಂಡಿನ ಕೈಗೊಂಬೆಯಾಗಿ ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ಒತ್ತಡಕ್ಕೆ ಮಣಿದಿರುವುದು ಅವರ ಬಗ್ಗೆಯೇ ಬೇಸರ ಮೂಡಿಸಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿನದ್ದು ಅಪಾಯಕಾರಿ ನಡೆಯಾಗಿದೆ ಎಂದಿದ್ದಾರೆ.
ಇಷ್ಟಕ್ಕೂ ಡಿಕೆಶಿ, ಬೇಗ್ ವಿರುದ್ಧದ ಆರೋಪಗಳೇನು ಅಂದರೆ ಕಾನೂನುಬಾಹಿರ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಜತೆಗೆ ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಹಗರಣದಲ್ಲೂ ಭಾಗಿಯಾಗಿದ್ದಾರೆ. (ಹಿರೇಮಠ್: ಅಕ್ರಮ ಗಣಿಗಾರಿಕೆಯ ತೊಡರುಗಲ್ಲು)
ರೋಷನ್ ಬೇಗ್ ಅವರು ಭೂಕಬಳಿಕೆ ಸಂಬಂಧ ಲೋಕಾಯುಕ್ತ ಕೋರ್ಟಿನಲ್ಲಿ ಖಾಸಗಿ ದೂರು ಎದುರಿಸುತ್ತಿದ್ದಾರೆ. ಉದ್ಯಮ ಸ್ಥಾಪಿಸುವುದಾಗಿ ಹೇಳಿ KEONICSನಿಂದ 1.103 ಎಕರೆ ಭೂಮಿಯನ್ನು ಪಡೆದು ಆ ಜಾಗದಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ನಡೆಸಿದ್ದಾರೆ ಎಂಬ ಗುರುತರ ಆರೋಪ ಕೇಳಿ ಬಂದಿದೆ.












Click it and Unblock the Notifications