SWIFT City: ಬೆಂಗಳೂರಲ್ಲಿ 1000 ಎಕ್ರೆಯಲ್ಲಿ ನೂತನ 'ಸ್ವಿಫ್ಟ್ ಸಿಟಿ' ಸ್ಥಾಪನೆ, ವಿವರ
ಬೆಂಗಳೂರು, ಡಿಸೆಂಬರ್ 13: ಕರ್ನಾಟಕ ರಾಜ್ಯ ಸರ್ಕಾರ ಎಲೆಕ್ಟ್ರಾನಿಕ್ ಸಿಟಿ, ITPL ನಂತರ ಸರ್ಕಾರವೇ ಯೋಜಿತ ನಗರವನ್ನು ಸ್ಥಾಪಿಸುತ್ತಿದೆ. ಹೆಸರೇ ಹೇಳುವಂತೆ ಇದು ನವೋದ್ಯಮಗಳು, ಕೆಲಸದ ಸ್ಥಳಗಳು, ಹಣಕಾಸು ಮತ್ತು ತಂತ್ರಜ್ಞಾನ ಈ ಐದೂ ಔದ್ಯಮಿಕ ಧಾರೆಗಳನ್ನು ಮುಖ್ಯವಾಗಿ ಪರಿಗಣಿಸಿ ನಗರದಲ್ಲಿ 1000 ಎಕ್ರೆ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು.
ಕರ್ನಾಟಕವನ್ನು ವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸರ್ಕಾರ ಮಹತ್ವದ ಗುರಿ ಇಟ್ಟುಕೊಂಡಿದೆ. ಈ ಉದ್ದೇಶದಿಂದ ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ವ್ಯಾಪಕತೆ ಮತ್ತು ಸಮಗ್ರತೆ ತಂದುಕೊಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಬೆಂಗಳೂರಿನ ಸರ್ಜಾಪುರದಲ್ಲಿ 'ಸ್ವಿಫ್ಟ್ ಸಿಟಿ' (SWIFT- Startup, Work-Spaces, Intelligence, Finance & Technology) ಎನ್ನುವ ವಿನೂತನ ಉಪಕ್ರಮದ ಅಭಿವೃದ್ಧಿಗೆ ನಿರ್ಧರಿಸಲಾಗಿದೆ ಎಂದರು.

ಈ ಹೊಸ ಸಿಟಿ ಸ್ಥಾಪಿಸಲು ನಗರದ ಸರ್ಜಾಪುರ ಕೈಗಾರಿಕಾ ಪ್ರದೇಶದಲ್ಲಿ 1,000 ಎಕರೆಗೂ ಹೆಚ್ಚು ಜಮೀನನ್ನು ಮೀಸಲಿಡಲಾಗುವುದು. ಇದನ್ನು ಮೂಲಭೂತವಾಗಿ ನಾವೀನ್ಯತೆ ಮತ್ತು ಬೆಳವಣಿಗೆಗಳ ಆಡುಂಬೊಲವನ್ನಾಗಿ ಬೆಳೆಸಬೇಕು ಎನ್ನುವುದು ಸಚಿವರ ದೂರದೃಷ್ಟಿಯಾಗಿದೆ.
'ಬೆಂಗಳೂರಿನಲ್ಲಿ ಇಂದು ಸಾವಿರಾರು ಕಂಪನಿಗಳಿವೆ, ನಿಜ. ಆದರೆ ಇವುಗಳಿಗೆ ಯೋಜಿತ ಮತ್ತು ವ್ಯವಸ್ಥಿತ ತಾಣಗಳಿಲ್ಲ ಎನ್ನುವ ಅಸಮಾಧಾನ ಹಲವರಲ್ಲಿದೆ. ಆದ್ದರಿಂದ ಸರ್ಜಾಪುರದಲ್ಲಿ ಇಂತಹ ಹೆಜ್ಜೆ ಇಡಲಾಗುತ್ತದೆ. ಇಲ್ಲಿ 150 ಮೀ. ಅಗಲದ ಸಂಪರ್ಕ ರಸ್ತೆ ಮಾಡಿ, ಅಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳು, ವಸತಿ ವ್ಯವಸ್ಥೆ, ಶಾಲೆಗಳು ಇರುವಂತೆ ಅಭಿವೃದ್ಧಿ ಪಡಿಸಲಾಗುವುದು.

ನೆರೆ ರಾಜ್ಯಗಳಿಂದ ನಮಗೆ ತೀವ್ರ ಸ್ಪರ್ಧೆ ಇದೆ. ಹೀಗಾಗಿ ಇಂತಹ ಉಪಕ್ರಮ ಅನಿವಾರ್ಯ' ಎನ್ನುವುದು ಸರ್ಕಾರದ ಮುಂದಾಲೋಚನೆ ಆಗಿದೆ ಎಂದು ಸಚಿವರು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಹೆದ್ದಾರಿ ಸಮೀಪ ಹೊಸ ಸಿಟಿ ನಿರ್ಮಾಣ
ಯೋಜನೆ ಬಗ್ಗೆ ವಿವರಿಸಿದ ಅವರು, ಸರ್ಜಾಪುರ ಪ್ರದೇಶವು ರಾಜಧಾನಿಯಲ್ಲಿರುವ ಐಟಿ ತಾಣಗಳಿಗೆ ಹತ್ತಿರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 44 ಮತ್ತು 48ಕ್ಕೆ ಹತ್ತಿರಲ್ಲಿದೆ. ಸಂಪರ್ಕ ಸೌಲಭ್ಯದ ದೃಷ್ಟಿಯಿಂದ ಇದು ವರದಾನವಾಗಿದ್ದು, ಈ ಭಾಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆಗೆ ಇಂಬು ನೀಡಲು ಸೂಕ್ತ ಸ್ಥಳವಾಗಿದೆ.
ಇದನ್ನೆಲ್ಲ ಪರಿಗಣಿಸಿ, ಇದನ್ನು ಸ್ವಿಫ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದು ಸ್ಟಾರ್ಟಪ್ ಹಬ್ ಆಗಲಿದ್ದು, ಇಲ್ಲಿ 8-10 ಅತ್ಯಾಧುನಿಕ ಪ್ಲಗ್ ಅಂಡ್ ಪ್ಲೇ ಸೌಲಭ್ಯಗಳು ಇರಲಿವೆ. ಇಂತಹ ಒಂದೊಂದು ಸ್ಥಾವರಕ್ಕೂ 20-25 ಎಕರೆ ಕೊಡಲಾಗುವುದು' ಎಂದು ಹೇಳಿದರು.
ಈ ಪ್ಲಗ್ ಅಂಡ್ ಪ್ಲೇ ಪ್ರದೇಶದಲ್ಲಿ ಸುಸಜ್ಜಿತ ಕಚೇರಿಗಳು, ವಸತಿ ಪ್ರದೇಶಗಳು, ಕೋ-ವರ್ಕಿಂಗ್ ತಾಣಗಳು ಎಲ್ಲವೂ ಇರಲಿವೆ. ಈ ಮೂಲಕ ಉದ್ಯಮಗಳ ಒಂದು ವ್ಯವಸ್ಥಿತ ಜಾಲ ಏರ್ಪಡಲಿದ್ದು, ಅವು ಪರಸ್ಪರ ಸಹಭಾಗಿತ್ವ ಏರ್ಪಡಿಸಿಕೊಳ್ಳುವುದು ಸುಗಮವಾಗಲಿದೆ.
ಕರ್ನಾಟಕ 'ಸಿಲಿಕಾನ್ ರಾಜ್ಯ' ಮಾಡುವ ಉದ್ದೇಶ
ಇಡೀ ರಾಜ್ಯವನ್ನೇ ಹಂತಹಂತವಾಗಿ 'ಸಿಲಿಕಾನ್ ರಾಜ್ಯ'ವನ್ನಾಗಿ ಮಾಡಲಾಗುವುದು. ಸಿಲಿಕಾನ್ ಸಿಟಿ ಅಂದ್ರೆ ಬೆಂಗಳೂರು. ಈಗ ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದು ನಮ್ಮ ಉದ್ದೇಶ. ವಿಜಯಪುರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದು ನಗರಗಳಲ್ಲಿ ಮಿನಿ ಕ್ವಿನ್ ಸಿಟಿ ಅಭಿವೃದ್ಧಿಪಡಿಸುವುದರ ಮೂಲಕ ಇದನ್ನು ಸಾಕಾರಗೊಳಿಸುವ ಉದ್ದೇಶ ಇದೆ. ಇದಕ್ಕೆ ಐಟಿ ಇಲಾಖೆಯ ಸಹಕಾರವನ್ನೂ ಪಡೆಯಲಾಗುವುದು. ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಸಂಬಂಧ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು..












Click it and Unblock the Notifications