ತತ್ವಗೀತೆಗಳ ಗಾಯನ ಮೂಲಕ ಸ್ವರಚಿಂತನ 7 ಸಂಭ್ರಮ
ಬೆಂಗಳೂರು, ಜೂನ್ 13: ಸ್ವರಸಿಂಚನ ಕಲಾಬಳಗವು ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಕಾರ್ಯಕ್ರಮಗಳಿಂದ ಗಮನ ಸೆಳೆದಿರುವ ಸ್ವಯಂಸೇವಾ ಸಂಸ್ಥೆ. ಬೆಂಗಳೂರಿನ ಹಲವಾರು ವೃದ್ಧಾಶ್ರಮ, ಅನಾಥಾಶ್ರಮ, ಅಬಲಶ್ರಾಮಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ನೊಂದ ಮನಸ್ಸುಗಳನ್ನು ಸಂಗೀತದ ಮೂಲಕ ಸಂತೈಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಮತ್ತು ವಂದೇ ಮಾತರಂ ಎಂಬ ಭಜನಾ ತಂಡವನ್ನು ಕಟ್ಟಿ ರಾಜ್ಯಾದ್ಯಾಂತ ಹಲವಾರು ದೇವಸ್ಥಾನಗಳಲ್ಲಿ, ಜೈಲುಗಳಲ್ಲಿ, ಕಿದ್ವಾಯಿ, ನಿಮ್ಹಾನ್ಸ್ನಂತಹ ಆಸ್ಪತ್ರೆಗಳಲ್ಲಿನ ರೋಗಿಗಳ ಮನೋಲ್ಲಾಸಕ್ಕೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಯುವಸಮುದಾಯಕ್ಕೆ ಪ್ರೇರೇಪಣೆ ನೀಡಬಲ್ಲ ನಮ್ಮ ಭಾರತ ದೇಶದ ಹಿರಿಮೆ-ಗರಿಮೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ 'ದೇಸಿಸಿಂಚನ'ವೆಂಬ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಖ್ಯಾತ ಗಾಯಕಿ ಪದ್ಮಿನಿ ಓಕ್ ಮತ್ತು ಸಂಗಡಿಗರು ಹಾಡಿರುವ ಧ್ವನಿ ಸುರುಳಿಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿರುತ್ತಾರೆ.
ಶ್ರೀಜಯರಾಮ ಸೇವಾ ಮಂಡಳಿಯ ಸುವರ್ಣ ಸಂಭ್ರಮ
ಕರ್ನಾಟಕ ಕಲಾಶ್ರೀ ಆರ್. ವೆಂಕಟೇಶ ಮೂರ್ತಿ ಸ್ಮಾರಕ ಸಂಸ್ಥೆಯ ಸ್ವರ ಸಿಂಚನ ಕಲಾ ಬಳಗದ 7ನೇ ವರ್ಷದ ವಾರ್ಷಿಕೋತ್ಸವ ಮತ್ತು ಖ್ಯಾತಗಾಯಕಿ ಶ್ರೀಮತಿ ಪದ್ಮಿನಿ ಓಕ್ ರವರಿಂದ ತತ್ವಸಿಂಚನ- ತತ್ವಗೀತೆಗಳ ಗಾಯನ ಕಾರ್ಯಕ್ರಮವನ್ನು ಜೂನ್ 17, 2018 ಭಾನುವಾರ ಸಂಜೆ 4 ಗಂಟೆಗೆ ನಗರದ ಜಯನಗರ 8ನೇ ಬ್ಲಾಕ್ ಶ್ರೀಜಯರಾಮಸೇವಾ ಮಂಡಳಿಯ ಪ್ರೊ. ಜಿ.ವಿ. ಜನ್ಮಶತಾಬ್ದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
7ರ ಸಂಭ್ರಮದಲ್ಲಿರುವ ಕಲಾ ಬಳಗವು ಕೀ ಬೋರ್ಡ್: ಕೃಷ್ಣಉಡುಪ, ವಾಸುದೇವ ತಾಮ್ಹನ್ಕರ್, ದುಶ್ಯಂತ, ಕೊಳಲು: ವಸಂತ್ ಎಲ್.ಎನ್., ತಬಲ: ಎಂ.ಸಿ. ಶ್ರೀನಿವಾಸ್, ರಿದಮ್ ಪ್ಯಾಡ್: ಯಶೋಧರ, ಧ್ವನಿ: ಯದುಗಿರಿ ಮೊದಲಾದ ನಾಡಿನ ಖ್ಯಾತ 7 ವಾದ್ಯಗಾರರ ಸಹಯೋಗದಲ್ಲಿ ತತ್ವ ಪದಗಳ ಗಾಯನ ಕೇಳುಗರ ಮನರಂಜಿಸಲಿದೆ.
ಅಂತೆಯೇ 7 ಹಿರಿಯ ಗಾಯಕ/ಗಾಯಕಿಯರಾದ ಬಿ.ಕೆ. ಸುಮಿತ್ರ, ಚಂದ್ರಿಕಾ ಗುರುರಾಜ, ಕೆ.ಎಸ್. ಸುರೇಖಾ, ಬಿ.ಎಸ್. ಮೀರಾ, ಮಂಗಳ ರವಿ, ಸ್ಮಿತ ವಸಂತ್, ಶಿಲ್ಪಕಲಾ, ವೆಂಕಟಾಚಲ, ಉದಯ್ ಅಂಕೋಲ, ದಿವಾಕರ್ ಕಶ್ಯಪ್, ಸಚಿನ್ ಶಿವರುದ್ರಪ್ಪ, ಹರೀಶ, ಕೆ.ವಿ. ಕೃಷ್ಣಪ್ರಸಾದ್, ರವಿಕೃಷ್ಣಮೂರ್ತಿ ರವರಿಗೆ ಮತ್ತು 7 ಭಜನ ತಂಡಗಳಾದ ವಿವೇಕ ಹಂಸ ಬಳಗ, ಗುರುರಾಜ ಭಜನ ಮಂಡಳಿ, ಸೌಂದರ್ಯ ಲಹರಿ ಭಜನಾ ಮಂಡಳಿ, ಶ್ರೀಚಿತ್ತ ಭಜನಾ ಮಂಡಳಿ, ಹಯಗ್ರೀವ ಭಜನಾ ಮಂಡಳಿ, ಓಂಶಕ್ತಿ ಭಜನಾ ಮಂಡಳಿ ಮತ್ತು ಗಾಯತ್ರಿ ಭಜನಾ ತಂಡದವರಿಗೆ ಗೌರವ ಸಮರ್ಪಣೆಯನ್ನು ಹಮ್ಮಿಕೊಂಡಿದೆ ಎಂದು ಆಯೋಜಕರಾದ ಪದ್ಮಿನಿ ಓಕ್ ರವರು ತಿಳಿಸಿರುತ್ತಾರೆ.