ಬೆಂಗಳೂರು: ಸ್ವಾನಂದಾಶ್ರಮದಲ್ಲಿ ವಿದ್ಯಾ ಚೇತನ ದಿನಾಚರಣೆ
ಬೆಂಗಳೂರು, ಜೂನ್ 13 : ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಸ್ವಾನಂದಾಶ್ರಮದಲ್ಲಿ ಜೂನ್ 16ರಂದು ವಿದ್ಯಾ ಚೇತನ ದಿನ ನಡೆಯಲಿದೆ.
ಮಾನವ ಸೇವೆಯೆ ಮೂಲ ಮಂತ್ರವಾಗಿರಿಸಿಕೊಂಡಿರುವ ಆಶ್ರಮ, ಆಶ್ರಮದ ಸುತ್ತಲಿನ 12 ಗ್ರಾಮದ 14 ಸರ್ಕಾರಿ ಶಾಲೆಯ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವ ಒಂದು ವಿಶಿಷ್ಟ ಸೇವಾ ಕಾರ್ಯಕ್ರಮ ವಿದ್ಯಾಚೇತನವಾಗಿದೆ.
ಅಲ್ಪಪ್ರಮಾಣದಲ್ಲಿ ಆರಂಭವಾದ ಈ ಯೋಜನೆಯು ಇದೀಗ 1270 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್ , ಶೈಕ್ಷಣಿಕ ಸೌಲಭ್ಯವನ್ನು ನೀಡುವ ಗುರಿ ತಲುಪಿ ತನ್ಮೂಲಕ ಸಾಮಾಜಿಕ ಸೇವೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
ಜೂನ್ 16 ರಂದು ಶನಿವಾರ ಬೆಳಗ್ಗೆ 10ಕ್ಕೆ ಕೇಂದ್ರಸಚಿವ ಡಿ.ವಿ.ಸದಾನಂದಗೌಡ ವಿಶೇಷ ಆಹ್ವಾನಿತರಾಗಿ ಆಗಮಿಸುವ ಈ ಸಮಾರಂಭದಲ್ಲಿ ಶಾಸಕ ಎಸ್ ಟಿ ಸೋಮಶೇಖರ್ , ವಿಶೇಷ ಆಹ್ವಾನಿತರಾಗಿ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕಿನ ಡೆಪ್ಯುಟಿ ಉಪಾಧ್ಯಕ್ಷ ಎನ್ ಎಸ್ ನಾಗೇಂದ್ರ ಹಳದಿಪುರ, ಭಾಗ್ಯಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೆ ಜಿ ಸುಬ್ಬರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಂಗಳೂರು ಕನಕಪುರ ರಸ್ತೆಯ ಮೆಟ್ರೋ ನಂತರ ನೈಸ್ ರಸ್ತೆ ದಾಟಿ ಕೊಂಚದೂರ ಪಯಣಸಿದರೆ ಕುಂಬಳಗೋಡು ಕಡೆಗೆ ಸಾಗುವ ಅಗರ-ತಾತಗುಣಿ ರಸ್ತೆಯಲ್ಲಿ ಆಧ್ಯಾತ್ಮ ಆಸಕ್ತರನ್ನು ತನ್ನೆಡೆಗೆ ಸೆಳೆಯುತ್ತ ಸಾಮಾಜಿಕ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅಪರೂಪದ ಸಂಘಟನೆ -, ಗಣೇಶೋಪಾಸನೆಯ ಕೇಂದ್ರ ಸ್ವಾನಂದಾಶ್ರಮವಿದೆ . ಈ ದೇವಾಲಯಕ್ಕೆ ದೈವೀಕ ಹಿನ್ನೆಲೆಯಿದೆ, ಇದರ ಮೂಲದಲ್ಲಿ ತಪಸ್ಸು ಇದೆ.
ಸಕಲ ಆಶೋತ್ತರ ಸಿದ್ದಿಯ ನೀಡುವ ಸ್ವಾನಂದ ಬಾಲ ಗಣಪತಿ ನೆಲೆನಿಂತಿದ್ದಾನೆ. ಆಧುನಿಕತೆಯಲ್ಲೆ ಮಿಂಚಿದ್ದರು ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಡದ ವಿನಾಯಕೋಪಾಸನೆಯ ವೈವಿಧ್ಯಗಳು ಭಕ್ತರನ್ನು ನಿಬ್ಬೆರಗಾಗಿಸುತ್ತದೆ .