ಬೆಂಗಳೂರಿನಲ್ಲಿ ನಾಲ್ವರು ಶಂಕಿತ ಉಗ್ರರ ಬಂಧನ
ಬೆಂಗಳೂರು, ಆ.7 : ತಮಿಳುನಾಡಿನಲ್ಲಿ ನಡೆದ ಹಿಂದೂಪರ ಸಂಘಟನೆಗಳ ಮುಖಂಡ ಕೆ.ಪಿ.ಸುರೇಶ್ ಕುಮಾರ್ ಅವರ ಕೊಲೆ ಪ್ರಕರಣ ಸಂಬಂಧ ಅಲ್-ಉಮಾ ಭಯೋತ್ಪಾದಕ ಸಂಘಟನೆಯ ನಾಲ್ವರು ಶಂಕಿತ ಉಗ್ರರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ತಮಿಳುನಾಡು ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬುಧವಾರ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ವಿವೇಕನಗರದಲ್ಲಿ ನೆಲೆಸಿದ್ದ ಶಮೀಮ್, ಶಮಿವುಲ್ಲಾ, ಸಾದಿಕ್ ಮತ್ತು ನವಾಜ್ ಎಂಬುವರನ್ನು ಬಂಧಿಸಿದ್ದಾರೆ. ಇವರೆಲ್ಲ ತಮಿಳುನಾಡಿನ ಅಲ್-ಉಮಾ ನಿಷೇಧಿತ ಭಯೋತ್ಪಾದನಾ ಸಂಘಟನೆಯ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂಪರ ಸಂಘಟನೆಗಳ ಮುಖಂಡ ಕೆ.ಪಿ.ಸುರೇಶ್ ಕುಮಾರ್ ಅವರನ್ನು ಜೂ.18ರಂದು ಅಂಬತ್ತೂರು ಬಸ್ ನಿಲ್ದಾಣ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ತನಿಖೆ ನಡೆಸಿದ್ದ ತಮಿಳುನಾಡು ವಿಶೇಷ ತನಿಖಾ ದಳದ (ಎಸ್ಐಟಿ) ಕೃತ್ಯದಲ್ಲಿ ಅಲ್ ಉಮಾ ಸಂಘಟನೆ ಸದಸ್ಯರ ಕೈವಾಡವಿರುವುದನ್ನು ಖಚಿತಪಡಿಸಿದ್ದರು.
ಕೊಲೆ ಆರೋಪಿಗಳು ಬೆಂಗಳೂರಿನಲ್ಲಿ ಅಡಗಿರುವ ಬಗ್ಗೆ ತಮಿಳುನಾಡು ಪೊಲೀಸರು ಆ.5ರಂದು ನಗರದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬುಧವಾರ ಬೆಳಿಗ್ಗೆ ನಗರಕ್ಕೆ ಬಂದ ಅಲ್ಲಿನ ತಂಡ, ಆರೋಪಿಗಳ ಪತ್ತೆಗೆ ಬೆಂಗಳೂರು ಪೊಲೀಸರ ನೆರವು ಕೋರಿತು. ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಲಾಗಿದೆ.
ಆರೋಪಿಗಳು, ಪೇಂಟಿಂಗ್ ಕೆಲಸ ಮಾಡಿಕೊಂಡು ಎರಡು ತಿಂಗಳಿನಿಂದ ವಿವೇಕನಗರದಲ್ಲಿ ವಾಸವಾಗಿದ್ದರು. ನಗರದಲ್ಲಿ ನಡೆದಿರುವ ಭಯೋತ್ಪಾದನಾ ಕೃತ್ಯಗಳಲ್ಲಿ ಅವರ ಕೈವಾಡವಿಲ್ಲ. ಆರೋಪಿಗಳನ್ನು ತಮಿಳುನಾಡು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications