ಕಾವೇರಿ ವಿವಾದ: ಫೆ.16ಕ್ಕೆ ಸುಪ್ರೀಂ ಅಂತಿಮ ತೀರ್ಪು
ಬೆಂಗಳೂರು, ಫೆಬ್ರವರಿ 15: ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದ 2007ರ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಪ್ರಕರಣಕ್ಕೆ ನಾಳೆ ಸುಪ್ರಿಂಕೋರ್ಟ್ ಅಂತಿಮ ತೀರ್ಪು ನೀಡಲಿದೆ.
2007ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರಾ ಅವರ ಪೀಠದಿಂದ ನಾಳೆ ತೀರ್ಪು ಹೊರಬೀಳಲಿದೆ.
2007ರಲ್ಲಿ ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಮತ್ತು ಕರ್ನಾಟಕಕ್ಕೆ 270 ಟಿಎಂಸಿ ನದಿ ನೀಡು ಹಂಚಿಕೆ ಮಾಡಿ ತೀರ್ಪು ನೀಡಲಾಗಿತ್ತು. ಈ ತೀರ್ಪು ಮೂರು ರಾಜ್ಯಗಳಿಗೆ ತೃಪ್ತಿ ತಂದಿರಲಿಲ್ಲ.

ನಾಳೆ ನೀಡುವ ತೀರ್ಪಿನಲ್ಲಿ ಕಾವೇರಿ ನದಿ ನೀರು ಹಂಚಿಕೆ ಮೇಲ್ವಿಚಾರಣಾ ಸಮಿತಿಯನ್ನು ಸ್ಥಾಪಿಸುವ ಬಗ್ಗೆ ಸುಪ್ರೀಂ ಆದೇಶ ಹೊರಡಿಸುವ ಸಾಧ್ಯತೆ ಇದ್ದು, ಮೇಲ್ವಿಚಾರಣಾ ಸಮಿತಿ ಅನುಷ್ಠಾನಕ್ಕೆ ಬಂದರೆ ಕೆಆರ್ಎಸ್ ಮತ್ತು ಕಾವೇರಿ ನದಿ ಮೇಲಿನ ಮೇಲೆ ಕರ್ನಾಟಕದ ಹಿಡಿತ ಸಂಪೂರ್ಣ ಕೈತಪ್ಪಲಿದೆ ಎನ್ನಲಾಗುತ್ತಿದೆ.
ತಮಿಳುನಾಡು ಸರ್ಕಾರವು, ಕರ್ನಾಟಕ ಎರಡು ವರ್ಷದಿಂದ 190 ಟಿಎಂಸಿ ನೀರು ಬಿಡದೆ ಬಾಕಿ ಉಳಿಸಿಕೊಂಡಿದ್ದು ಆ ನೀರನ್ನು ಬಿಡುಗಡೆಗೆ ಆದೇಶಿಸಬೇಕೆಂದು ಮನವಿ ಸಲ್ಲಿಸಿದೆ, ಸುಪ್ರೀಂ ಈ ಮನವಿಯನ್ನು ಪುರಸ್ಕರಿಸಿದಲ್ಲಿ ಮಂಡ್ಯ, ಮೈಸೂರು, ಬೆಂಗಳೂರಿಗರು ಒದ್ದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಕಾವೇರಿ ನದಿ ನೀರು ಹಂಚಿಕೆ ತೀರ್ಪು ರಾಜ್ಯಕ್ಕೆ ವ್ಯತಿರಿಕ್ತವಾಗಿ ಬಂದರೆ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಗಲಭೆ ಆಗುವ ಸಂಭವ ಇರುವ ಕಾರಣ ಪೊಲೀಸರು ಈಗಾಗಲೇ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.
ಕೆಆರ್ಎಸ್ಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮಂಡ್ಯ ಜಿಲ್ಲೆಯಲ್ಲಿಯೂ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.












Click it and Unblock the Notifications