ಸಂಚಾರಿ ಪೊಲೀಸರಿಗೆ 'ಥ್ಯಾಂಕ್ಯೂ' ಎಂದ ಮಕ್ಕಳು
ಬೆಂಗಳೂರು, ಡಿ. 23: ಸಂಚಾರಿ ಪೊಲೀಸರಿಗಾಗಿ ಮಂಗಳವಾರ 10ನೇ ವರ್ಷದ ಸಂಚಾರ ಪೊಲೀಸ್ ದಿನದ ನಿಮಿತ್ತ ನಗರದ ಟ್ರಾಫಿಕ್ ಮ್ಯಾನೇಜ್ಮೆಂಟ್ ಕೇಂದ್ರದಲ್ಲಿ ಮಂಗಳವಾರ ಸಂಚಾರಿ ಪೊಲೀಸ್ ದಿನ ಆಯೋಜಿಸಲಾಗಿತ್ತು. ಪೌರಪ್ರಜ್ಞೆಗಾಗಿ ಮಕ್ಕಳ ಚಳವಳಿ ಸಂಸ್ಥೆ (ಸಿಎಂಸಿಎ) ಆಯೋಜಿಸಿದ್ದ ಸಂಚಾರಿ ಪೊಲೀಸ್ ದಿನಾಚರಣೆಯಲ್ಲಿ ಬೆಂಗಳೂರಿನ ವಿವಿಧ ಶಾಲೆಗಳ ಸುಮಾರು 50 ಮಕ್ಕಳು ಪೊಲೀಸರಿಗೆ ಧನ್ಯವಾದ ಕಾರ್ಡ್ ನೀಡಿ ಅಭಿನಂದಿಸಿದರು.
ಮಕ್ಕಳ ಅಭಿನಂದನೆ ಹೃದಯ ತುಂಬಿಸಿದೆ : ಮುಖ್ಯ ಅತಿಥಿಯಾಗಿದ್ದ ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಬಿ. ದಯಾನಂದ ಮಾತನಾಡಿ, "ಸಂಚಾರಿ ಪೊಲೀಸರನ್ನು ಬಹಳ ಕಡಿಮೆ ಜನ ಮೆಚ್ಚಿಕೊಳ್ಳುತ್ತಾರೆ. ಮಕ್ಕಳು ಪೊಲೀಸರಿಗಾಗಿ ಅಭಿನಂದನೆ ಕಾರ್ಯಕ್ರಮ ಆಯೋಜಿಸಿರುವುದು ನಮ್ಮ ಹೃದಯ ತುಂಬಿಬಂದಿದೆ. ಇಂತಹ ಮೌಲ್ಯವನ್ನು ಅವರಲ್ಲಿ ತುಂಬಿರುವುದಕ್ಕಾಗಿ ನಾವು ಸಿಎಂಸಿಎ ಅನ್ನು ಅಭಿನಂದಿಸುತ್ತೇನೆ" ಎಂದರು.
ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಮಾತನಾಡಿ, "ಸಂಚಾರವನ್ನು ಸುವ್ಯವಸ್ಥಿತವಾಗಿಡುವ ಪೊಲೀಸರಿಗೆ ವಂದನೆ ಸಲ್ಲಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶ. ಐಟಿ ನಗರ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ವಾಹನಗಳ ಸಂಖ್ಯೆ 15 ಲಕ್ಷಕ್ಕಿಂತ ಹೆಚ್ಚಿದೆ. ನಿತ್ಯ ಸಾಕಷ್ಟು ಸಂಖ್ಯೆಯ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ" ಎಂದರು.
"ಬೆಂಗಳೂರಿನಲ್ಲಿ ಕೇವಲ 3000 ಸಂಚಾರಿ ಪೊಲೀಸ್ ಪೇದೆಗಳಿದ್ದಾರೆ. ಆದರೂ ಬೆಂಗಳೂರಿನಂತಹ ಮಹಾನಗರದ ಸಂಚಾರ ದಟ್ಟಣೆ ನಿರ್ವಹಿಸುತ್ತ ಎಲೆ ಮರೆಯ ಕಾಯಿಯಂತೆ ಉಳಿದಿದ್ದಾರೆ" ಎಂದರು.
ವಿಶ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಮಾಜಿ ಚಾಂಪಿಯನ್ ಪಂಕಜ್ ಅಡ್ವಾಣಿ ವಿಶೇಷ ಆಹ್ವಾನಿತರಾಗಿದ್ದರು. 30ಕ್ಕೂ ಹೆಚ್ಚು ಸಂಚಾರ ಪೊಲೀಸರು ಮತ್ತು ಪೇದೆಗಳು ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿ ಸೇರಿದ್ದರು.
ಕಾರ್ಯಕ್ರಮ ಹೇಗೆ ನಡೆಯುತ್ತೆ ? : ಸಂಚಾರಿ ಪೊಲೀಸ್ ದಿನಾಚರಣೆ ನಿಮಿತ್ತ ಪೌರಪ್ರಜ್ಞೆಗಾಗಿ ಮಕ್ಕಳ ಚಳವಳಿ ಸಂಸ್ಥೆ ಸದಸ್ಯತ್ವ ಪಡೆದಿರುವ 89 ಶಾಲೆಗಳ ಸುಮಾರು 5,000 ಮಕ್ಕಳು ಈ ತಿಂಗಳಾದ್ಯಂತ ತಮ್ಮ ಶಾಲೆ ಬಳಿ ಇರುವ ಸಂಚಾರ ಪೊಲೀಸ್ ಠಾಣೆ ಹಾಗೂ ಟ್ರಾಫಿಕ್ ಜಂಕ್ಷನ್ಗಳಿಗೆ ತೆರಳಿ, ಸಂಚಾರ ಪೊಲೀಸರನ್ನು ಭೇಟಿ ಮಾಡಿ ಅವರಿಗೆ ಧನ್ಯವಾದ ಕಾರ್ಡ್ ಸಲ್ಲಿಸುತ್ತಾರೆ. ಪರ್ಯಾಯವಾಗಿ ಶಾಲೆಗಳಿಗೆ ಸಂಚಾರಿ ಪೊಲೀಸರನ್ನು ಆಹ್ವಾನಿಸಿ ಮಕ್ಕಳನ್ನು ಸನ್ಮಾನಿಸಲಾಗುತ್ತದೆ.