ಮೋದಿ ವಿರುದ್ಧ ಎಂಎಂಎಸ್ : ವಿದ್ಯಾರ್ಥಿ ಬಂಧನ
ಬೆಂಗಳೂರು, ಮೇ.25: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಂಎಂಎಸ್ ಮೂಲಕ ಅಪಪ್ರಚಾರ ಮಾಡುತ್ತಿದ್ದ ಭಟ್ಕಳ ಮೂಲದ ಐವರು ವಿದ್ಯಾರ್ಥಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಪೈಕಿ ನಾಲ್ವರನ್ನು ನಿರ್ದೋಷಿಗಳೆಂದು ಪರಿಗಣಿಸಿ ಬಿಡುಗಡೆ ಮಾಡಲಾಗಿದ್ದು, ಓರ್ವನನ್ನು ಬಂಧನದಲ್ಲಿರಿಸಲಾಗಿದೆ.
ಬಂಧಿತರನ್ನು ಎಂಬಿಎ ವಿದ್ಯಾರ್ಥಿಗಳಾದ ಮುಸಾಫರ್ ಸದಾ, ಮಹಮ್ಮದ್ ಹನೀಫ್ ಕೋಲಾ, ಬಿಸಾಮಹಲಾಂಗಾರ್, ಓಂಕಾರ್ ಬ್ರಹ್ಮಾವರ್, ರಹಮತುಲ್ಲಾ ಮಲಿಕ್ ಎಂದು ಗುರುತಿಸಲಾಗಿದೆ. ವಸಂತನಗರದ ಬಾಡಿಗೆ ಮನೆಯೊಂದರಲ್ಲಿ ಎಲ್ಲರೂ ವಾಸವಿದ್ದಾರೆ. ಮೋದಿ ವಿರುದ್ಧ ಎಸ್ ಎಂಎಸ್ ಹಾಗೂ ಎಂಎಂಎಸ್ ಗಳನ್ನು ಓಂಕಾರ್ ಬ್ರಹ್ಮಾವರ್ ರಚಿಸುತ್ತಿದ್ದ ಅದನ್ನು ಉಳಿದವರು ಹಂಚುತ್ತಿದ್ದರು ಎಂದು ತಿಳಿದು ಬಂದಿದೆ.
ಮೋದಿ ವಿರುದ್ಧ ಎಂಎಂಎಸ್ ಹರಿದಾಡುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರ ಪೂರ್ವಾಪರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಿಸಿಬಿ ಪೊಲೀಸರ ಒಂದು ತಂಡ ಈಗಾಗಲೇ ಭಟ್ಕಳಕ್ಕೆ ತೆರಳಿದೆ. ಓಂಕಾರ್ ಗೆ ರಾಷ್ಟ್ರೀಯ ಮಟ್ಟದ ಪಕ್ಷವೊಂದರ ಬೆಂಬಲವೂ ಸಿಕ್ಕಿತ್ತು ಎಂಬ ಮಾಹಿತಿ ಕೂಡಾ ಇದೆ.

ಗೋವಾ ಯುವಕ ಬಂಧನ, ಪ್ರತಿಭಟನೆ: ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿ ವಿರುದ್ಧ ಫೇಸ್ಬುಕ್ನಲ್ಲಿ ಟೀಕೆಗಳನ್ನು ಮಾಡಿದ್ದ ಗೋವಾದ ಯುವಕನೊಬ್ಬನ ಬಂಧನವನ್ನು ಖಂಡಿಸಿ ಕೆಲವು ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸದ್ಯ ರಾಜ್ಯದಿಂದ ಹೊರಗೆ ಇರುವ ಆರೋಪಿ ಲಾವು ಛೋಡಾಂಕರ್ ಪರವಾಗಿ ಕೋರಲಾದ ನಿರೀಕ್ಷಣಾ ಜಾಮೀನನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ತಳ್ಳಿ ಹಾಕಿದೆ. ರಾಜ್ಯದ ಉದ್ಯಮಿ ಮತ್ತು ಬಿಜೆಪಿ ನಾಯಕ ಅತುಲ್ ಪೈ ಕಾನೆ ಎಂಬವರು ಛೋಡಾಂಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಲಾವು ಛೋಡಾಂಕರ್ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ಗೋವಾದ ಸೈಬರ್ ಅಪರಾಧ ಘಟಕದ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ‘ಕೋಮು ಮತ್ತು ಸಾಮಾಜಿಕ ಕ್ಷೋಭೆ' ಸೃಷ್ಟಿಸುವ ಯೋಜನೆಯ ಭಾಗವಾಗಿ ಫೇಸ್ಬುಕ್ನಲ್ಲಿ ಟೀಕೆಗಳನ್ನು ಮಾಡಲಾಗಿದೆ ಎಂದು ಪೊಲೀಸರು ದೂರಿನಲ್ಲಿ ಹೇಳಿಕೊಂಡಿದ್ದಾರೆ.











Click it and Unblock the Notifications