ತೇಜಸ್ವಿ ಸೂರ್ಯಗೆ ಬೆಂ.ದಕ್ಷಿಣ ಟಿಕೆಟ್: ಬಿಜೆಪಿ ಮುಖಂಡರಲ್ಲಿ ಅಸಮಾಧಾನ
ಬೆಂಗಳೂರು, ಮಾರ್ಚ್ 26: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಕಡೆ ಗಳಿಗೆಯಲ್ಲಿ ತೇಜಸ್ವಿನಿ ಅನಂತ್ಕುಮಾರ್ ಬದಲಿಗೆ ಯುವಕ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಇದು ಪಕ್ಷದ ಮುಖಂಡರಿಗೆ ಅಸಮಾಧಾನ ಉಂಟು ಮಾಡಿದೆ.
ಟಿಕೆಟ್ ಘೋಷಣೆ ಆಗುತ್ತಿದ್ದಂತೆ, ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತ್ಕುಮಾರ್ ಅವರನ್ನು ಭೇಟಿಯಾದ ತೇಜಸ್ವಿ ಸೂರ್ಯ ಆಶೀರ್ವಾದ ಪಡೆದಿದ್ದರು, ನಾಮಪತ್ರ ಸಲ್ಲಿಕೆಗೆ ಆಗಮಿಸುವಂತೆ ಮನವಿ ಮಾಡಿದ್ದರು. ಆದರೆ ತೇಜಸ್ವಿನಿ ಅವರು ಪಕ್ಷ ಮೊದಲು ಎಂದು ಸುದ್ದಿಗಾರರಿಗೆ ಹೇಳಿದರಾದರೂ, ನಾಮಪತ್ರ ಸಲ್ಲಿಕೆಗೆ ಹೋಗಿಲ್ಲ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಷ್ಟೆ ಅಲ್ಲ, ಬೆಂಗಳೂರಿನ ಚುನಾವಣೆ ಉಸ್ತುವಾರಿ ವಹಿಸಿರುವ ಆರ್.ಅಶೋಕ್, ವಿ.ಸೋಮಣ್ಣ ಅವರುಗಳು ಸಹ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಲು ಹೋಗಿಲ್ಲ. ಇದು ಪಕ್ಷದ ಮುಖಂಡರಲ್ಲಿ ಎದ್ದಿರುವ ಅಸಮಾಧಾನವನ್ನು ಸ್ಪಷ್ಟವಾಗಿ ತೋರುತ್ತಿದೆ.
ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸೂರ್ಯ ಅವರ ಚಿಕ್ಕಪ್ಪ, ಶಾಸಕ ರವಿ ಸುಬ್ರಹ್ಮಣ್ಯ, ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಹಾಗೂ ಇನ್ನು ಕೆಲವು ಮುಖಂಡರು ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆಗೆ ಹಾಜರಾಗಿದ್ದರು.
ಹಠಾತ್ತನೆ ತೇಜಸ್ವಿ ಸೂರ್ಯ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿರುವುದು ಬಿಜೆಪಿ ಮುಖಂಡರಿಗೆ ತೀವ್ರ ಅಸಮಾಧಾನ ತಂದಿದೆ ಎನ್ನಲಾಗಿದೆ. ರಾಜ್ಯದ ಬಿಜೆಪಿ ಮುಖಂಡರು ತೇಜಸ್ವಿನಿ ಅನಂತ್ಕುಮಾರ್ ಒಬ್ಬರ ಹೆಸರನ್ನೇ ಹೈಕಮಾಂಡ್ಗೆ ಕಳುಹಿಸಿದ್ದರು, ಆದರೆ ಹೈಕಮಾಂಡ್ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದೆ.