ಖಾಸಗಿ ಚಾನಲ್ಗಳ ಕ್ಯಾಮರಾ ನಿರ್ಬಂಧ ಯಾಕೇ? ಇಲ್ಲಿದೆ ಮಾಹಿತಿ!
ಬೆಂಗಳೂರು. ಫೆ. 14: ಖಾಸಗಿ ಚಾನಲ್ಗಳ ಕ್ಯಾಮರಾಗಳು ವಿಧಾನಸಭೆ ಪ್ರವೇಶಕ್ಕೆ ರಾಜ್ಯ ಬಿಜೆಪಿ ಸರ್ಕಾರ ನಿರ್ಬಂಧ ಹಾಕಿದೆ. ಈ ಹಿಂದೆ ಮೈತ್ರಿ ಸರ್ಕಾರದ ಪತನದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹೊಸ ಮಾದರಿಯನ್ನು ಮೊದಲ ಬಾರಿ ಅನುಸರಿಲಾಗಿತ್ತು. ಇದೀಗ ಅದನ್ನೆ ಮುಂದುವರೆಸಲು ಸರ್ಕಾರ ತೀರ್ಮಾನಿಸಿದ್ದು, ವಿಧಾನಸಭೆ ಕಲಾಪದ ನೇರ ಪ್ರಸಾರಕ್ಕೆ ಖಾಸಗಿ ಚಾನಲ್ಗಳ ಕ್ಯಾಮರಾಗಳಿಗೆ ನಿಷೇಧ ಹಾಕಲಾಗಿದೆ.
ಜೊತೆಗೆ ಮುದ್ರಣ ಮಾಧ್ಯಮದ ಛಾಯಾಗ್ರಾಹಕರಿಗೂ ನಿಷೇಧ ಹಾಕಲಾಗಿದ್ದು, ಸದನದ ಕಲಾಪಗಳ ಛಾಯಾಚಿತ್ರಗಳನ್ನು ಒದಗಿಸಲು ತೀರ್ಮಾನ ಮಾಡಲಾಗಿದೆ. ಕರ್ನಾಟಕ ವಿಧಾನಸಬೆ ಸಚಿವಾಯಲದಿಂದಲೇ ಇದನ್ನು ನಿರ್ವಹಣೆ ಮಾಡಲು ಉದ್ದೇಶಿಸಲಾಗಿದ್ದು, ಟಿವಿ ಚಾನಲ್ಗಳಿಗೆ ದೂರದರ್ಶನದ ಮೂಲಕ ಔಟ್ಪುಟ್ ಕೊಡಲು ಹಾಗೂ ವಾರ್ತಾ ಇಲಾಖೆಯಿಂದ ಮುದ್ರಣ ಮಾಧ್ಯಮಗಳಿಗೆ ಛಾಯಾಚಿತ್ರ ಒದಗಿಸಲು ತೀರ್ಮಾನಿಸಿದೆ.
ಕಳೆದ ಅಕ್ಟೋಬರ್ನಲ್ಲಿ ಮಾಧ್ಯಮ ನಿರ್ಬಂಧವನ್ನು ಪರಿಶೀಲನೆ ಮಾಡುತ್ತೇವೆ, ಮಾಧ್ಯಮಗಳಿಗೆ ನಿರ್ಬಂಧ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದರು. ಆದರೆ ಇದೀಗ ಸಿಎಂ ಬಿಎಸ್ವೈ ಕೂಡ ಮಾಧ್ಯಮ ನಿರ್ಬಂಧಕ್ಕೆ ಸಮ್ಮತಿ ಸೂಚಿಸಿದ್ದಾರೆ. ಅದರಿಂದಾಗಿ ದಶಕಗಳ ಸಾಂಪ್ರದಾಯಕ್ಕೆ ರಾಜ್ಯ ಬಿಜೆಪಿ ಸರ್ಕಾರ ಕೊನೆ ಹಾಡಿದ್ದು, ಕ್ಯಾಮರಾ ನಿರ್ಬಂಧಿಸುವ ನೂತನ ನೀತಿಯನ್ನು ಜಾರಿಗೆ ತಂದಿದೆ. ಇನ್ನುಮುಂದೆ ನಮ್ಮ ಜನಪ್ರತಿನಿಧಿಗಳು ಮಾಡುವ ಯಡವಟ್ಟುಗಳನ್ನು ಕಣ್ಣಾರೆ ನೋಡುವ ಭಾಗ್ಯದಿಂದ ರಾಜ್ಯದ ಜನತೆ ವಂಚಿತರಾಗಲಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹೊಸ ನೀತಿ
ಮೈತ್ರಿ ಸರ್ಕಾರದ ಪತನದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಡೆದ ಮೊದಲ ವಿಧಾನಮಂಡಲ ಅಧಿವೇಶನದಲ್ಲಿ ಈ ಹೊಸ ನೀತಿಯನ್ನು ಜಾರಿಗೆ ತರಲಾಗಿತ್ತು. ಕಳೆದ 2019ರ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ವಿಧಾನಸಭೆ ಕಲಾಪಕ್ಕೆ ಇತಿಹಾಸದಲ್ಲೆ ಮೊದಲ ಬಾರಿ ಖಾಸಗಿ ಚಾನಲ್ಗಳ ಕ್ಯಾಮರಾಗಳಿಗೆ ನಿಷೇಧ ಹಾಕಲಾಗಿತ್ತು. ಇದೀಗ ಅದೇ ವ್ಯವಸ್ಥೆಯನ್ನು ಮುಂದುವರೆಸಲು ತೀರ್ಮಾನಿಸಲಾಗಿದ್ದು, ದೂರದರ್ಶನ ಕೊಡುವ ನೇರಪ್ರಸಾರದ ದೃಶ್ಯಾವಳಿಗಳನ್ನು ಖಾಸಗಿ ಚಾನಲ್ಗಳು ಪ್ರಸಾರ ಮಾಡಬೇಕಾಗುತ್ತದೆ.
ಇನ್ನು ವಾರ್ತಾ ಇಲಾಖೆಯ ವತಿಯಿಂದ ಮಾಧ್ಯಮಗಳಿಗೆ ಛಾಯಾಚಿತ್ರಗಳನ್ನು ಒದಗಿಸುವ ಭರವಸೆಯನ್ನು ವಿಧಾನಸಭೆ ಸಚಿವಾಲಯ ಕೊಟ್ಟಿದೆ.
ಲೋಕಸಭೆ ಮಾದರಿಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ
ಲೋಕಸಭೆ, ರಾಜ್ಯಸಭೆ ಮಾದರಿಯಲ್ಲಿ ಖಾಸಗಿ ಮಾದ್ಯಮಗಳ ಕ್ಯಾಮರಾಗಳಿಗೆ ನಿಷೇಧ ಹೇರಿದ್ದು, ಹಿಂದೆ ಪ್ರಾಯೋಗಿಕವಾಗಿ ಮಾಡಿದ್ದ ವ್ಯವಸ್ಥೆಯನ್ನು ಈಗ ಸಂಪೂರ್ಣವಾಗಿ ಅನುಷ್ಠಾನಗೊಳಿಸುತ್ತೇವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಹಲವು ರಾಜ್ಯಗಳು ಕೂಡ ಲೋಕಸಭಾ ಮಾದರಿಯನ್ನು ಮಾದರಿ ಅನುಸರಿಸುತ್ತಿವೆ. ನಾವು ಕೂಡ ಅದೇ ಮಾದರಿ ಅನುಸರಿಸುತ್ತೇವೆ. ಲೋಕಸಭೆ, ರಾಜ್ಯಸಭೆಯಂತೆ ನಡೆದು ಕೊಳ್ಳುತ್ತೇವೆ. ಕಳೆದ ಅಧಿವೇಶನದಲ್ಲಿ ಪ್ರಾಯೋಗಿಕವಾಗಿ ಮಾಡಿದ್ದ ವ್ಯವಸ್ಥೆ ವ್ಯವಸ್ಥೆ ಈಗಲೂ ಮುಂದುವರಿಯಲಿದ್ದು, ವಿಧಾನಸಭೆ ಕಲಾಪ ನೇರ ಪ್ರಸಾರ ಮಾಡಲು ಖಾಸಗಿ ಮಾಧ್ಯಮಗಳ ಕ್ಯಾಮರಾ, ಕ್ಯಾಮರಾಮ್ಯಾನ್ಗಳಿಗೆ ಇದ್ದ ನಿರ್ಬಂಧ ಮುಂದುವರಿಯಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ 17 ರಿಂದ ಜಂಟಿ ಅಧಿವೇಶನ ಪ್ರಾರಂಭ
ಇದೇ ಫೆಬ್ರವರಿ 17ರಿಂದ ಜಂಟಿ ಅಧಿವೇಶನ ಪ್ರಾರಂಭವಾಗಲಿದ್ದು, ಮಾರ್ಚ್ 30 ರವರೆಗೆ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸೌಧದಲ್ಲಿ ಹೇಳಿದ್ದಾರೆ. ಈ ಸಲ ಜನಪರ ವಿಷಯಗಳ ಚರ್ಚೆಗೆ ಸುಧೀರ್ಘ ಅವಕಾಶ ಸಿಕ್ಕಿದೆ. ಫೆಬ್ರವರಿ 17 ರಂದು ರಾಜ್ಯಪಾಲ ವಜೂಬಾಯಿ ವಾಲಾ ಅವರು ಜಂಟಿ ಸದನ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿ ಆಹ್ವಾನಿಸಿದ್ದೇವೆ. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವುದ ಮೇಲೆ ಚರ್ಚೆ ನಡೆಯಲಿದೆ. ಫೆಬ್ರವರಿ 20 ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ ಎಂದು ಸ್ಪೀಕರ್ ಕಾಗೇರಿ ಅವರು ಮಾಹಿತಿ ಕೊಟ್ಟಿದ್ದಾರೆ.
ಮಾರ್ಚ್ 2 ರಿಂದ 31ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಮಾರ್ಚ್ 5 ರಂದು ಬೆಳಗ್ಗೆ 11ಕ್ಕೆ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದಲ್ಲಿ 6 ವಿಧೇಯಕಗಳು ಮಂಡನೆಯಾಗಲಿವೆ. ಲೋಕಸೇವಾ ವಿಧೇಯಕ, ಕಾನೂನು ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ, ನಗರಪಾಲಿಕೆ ತಿದ್ದುಪಡಿ ವಿಧೇಯಕ ಮಂಡನೆಯಾಗಲಿವೆ. ವಿಧೇಯಕಗಳ ಮೇಲೆ ಹೆಚ್ಚಿನ ಸದಸ್ಯರು ಮಾತನಾಡಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಬಜೆಟ್ ಅಧಿವೇಶನದದಲ್ಲಿ ಸಂವಿಧಾನ ಕುರಿತು ಚರ್ಚೆ
ಬಜೆಟ್ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಸಂವಿಧಾನದ ಮೇಲೆ ಚರ್ಚೆಗೆ ಅವಕಾಶ ಒದಗಿಸಿ ಕೊಡಲಾಗಿದೆ. ಮಾರ್ಚ್ 2 ಮತ್ತು 3 ರಂದು ಸಂವಿಧಾನ ಕುರಿತ ಚರ್ಚೆಗೆ ಅವಕಾಶ. ಆದರೆ ಈ ಚರ್ಚೆಯಲ್ಲಿ ರಾಜಕೀಯ ನುಸುಳಬಾರದು. ನಾವು ಸಂವಿಧಾನ ಒಪ್ಪಿಕೊಂಡು 70 ವರ್ಷಗಳಾದ ಹಿನ್ನೆಲೆ ಈ ವಿಶೇಷ ಅವಕಾಶ. ಪೌರತ್ವ, ಸಿಎಎ ಬಗ್ಗೆ ನಮ್ಮ ಸದಸ್ಯರು ನಮ್ಮ ಸದಸ್ಯರು ಮಾತನಾಡುವುದಿಲ್ಲ, ಸಂವಿಧಾನದ ಬಗ್ಗೆಯೇ ಮಾತನಾಡ್ತಾರೆಂಬ ವಿಶ್ವಾಸವಿದೆ ಎಂದು ವಿಧಾನಸಭಾಧ್ಯಕ್ಷ ಕಾಗೇರಿ ಹೇಳಿದ್ದಾರೆ.
ವಿಧಾನಸಭೆಗೆ ಮಾಧ್ಯಮ ನಿರ್ಬಂಧ ಸರಿಯಲ್ಲ
ಸದನಕ್ಕೆ ಮಾಧ್ಯಮ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿರುವ ಮಾಜಿ ಸಚಿವ, ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಕಲಾಪ ವರದಿಗೆ ಮಾಧ್ಯಮ ನಿರ್ಬಂಧ ಸರಿಯಲ್ಲ ಎಂದು ಹೇಳಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವೆ. ಜತೆಗೆ, ನಾಲ್ಕನೆಯದು ಪತ್ರಿಕಾರಂಗವೂ ಇದೆ. ಮಾಧ್ಯಮವನ್ನ ಯಾಕೆ ನಿರ್ಬಂಧಿಸಬೇಕು? ಗೋಪಾಲಗೌಡರಂತವರು ಇದ್ದ ಸದನ ಇದು. ಮಾಧ್ಯಮಕ್ಕೆ ನಿರ್ಬಂಧ, ಕಡಿವಾಣ ಹಾಕುತ್ತೇವೆ ಅನ್ನೋದು ಸರಿಯಲ್ಲ. ಕೆಲವೊಮ್ಮೆ ಟೀಕೆ ಟಿಪ್ಪಣಿ ಇರುತ್ತದೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ನಾನು ಪ್ರಸ್ತಾಪ ಮಾಡುತ್ತೇನೆ ಎಂದಿದ್ದಾರೆ.
ಕಲಾಪದಲ್ಲಿ ನೀಲಿ ಚಿತ್ರ ನೋಡಿದ್ದ ಬಿಜೆಪಿ ಸಚಿವರು
ವಿಧಾನಸಭೆಯಲ್ಲಿ ಗಂಭೀರ ಚರ್ಚೆ ವೇಳೆ ಶಾಸಕರು, ಸಚಿವರು ನಿದ್ದೆ ಮಾಡುವುದು, ಗುಟ್ಕಾ ತಿನ್ನುವುದು, ನೀಲಿ ಚಿತ್ರವನ್ನು ನೋಡಿ ರಾಜೀನಾಮೆ ಕೊಟ್ಟಿದ್ದು, ಟೇಬಲ್ ಮೇಲೆ ನಿಂತು ಅಂಗಿ ಹರಿದುಕೊಂಡಿದ್ದ ಸಚಿವರು, ಗುಂಪುಗಾರಿಕೆ, ಗೈರುಹಾಜರಿ ಹೀಗೆ ಹಲವು ವಿಷಯಗಳನ್ನು ಖಾಸಗಿ ಚಾನಲ್ಗಳು ದೃಶ್ಯಗಳ ಸಮೇತ ಜನತೆಯ ಎದುರು ತೆರೆದಿಟ್ಟಿದ್ದವು. ರೈತರ ಸಮಸ್ಯೆಗಳು, ಬರ ಪರಿಸ್ಥಿತಿಯ ಮೇಲೆ ಚರ್ಚೆ ನಡೆದಾಗ ಆಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಈಗಿನ ಡಿಸಿಎಂ ಲಕ್ಷ್ಣಣ ಸವದಿ, ಸಚಿವ ಸಿ.ಸಿ. ಪಾಟೀಲ್ ಹಾಗೂ ಮಾಜಿ ಶಾಸಕ ಕೃಷ್ಣ ಪಾಲೇಮಾರ್ ವಿಧಾನಸಭೆಯಲ್ಲಿಯೆ ನೀಲಿ ಚಲನಚಿತ್ರ ನೋಡಿದ್ದರು. ಆಮೇಲೆ ಮೂವರು ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಬಿಜೆಪಿಗೆ ಮುಜುಗರವನ್ನುಂಟು ಮಾಡಿತ್ತು.
ಜೊತೆಗೆ ಹಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟಾಗ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ತಮ್ಮ ಅಂಗಿಯನ್ನೇ ಹರಿದು ಹಾಕಿ ಪ್ರತಿಭಟನೆ ಮಾಡಿದ್ದರು. ಇಂತಹ ಹಲವು ವಿಷಯಗಳನ್ನು ಖಾಸಗಿ ಚಾನಲ್ಗಳು ಬಿತ್ತರಿಸಿದ್ದವು. ಆದ್ದರಿಂದಲೇ ಸರ್ಕಾರ ಮಾಧ್ಯಮ ನಿಷೇಧಕ್ಕೆ ಮುಂದಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.