ತ್ರಿಪುರಾದ ಮಗುವಿಗೆ ಮರು ಜನ್ಮಕೊಟ್ಟ ಬೆಂಗಳೂರಿನ ಡಾಕ್ಟರ್ಸ್
ಬೆಂಗಳೂರು, ಸೆಪ್ಟೆಂಬರ್ 25: ತ್ರಿಪುರಾ ಮೂಲದ ಎರಡು ವರ್ಷದ ಮಗು ಮಾಯಂಕ ಸರ್ಕಾರ್ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಂಡಿದ್ದ. ಹೀಗಾಗಿ ಈ ವಯೋಮಾನದ ಮಕ್ಕಳು ಸಾಮಾನ್ಯವಾಗಿ ಹೊಂದಿರಬೇಕಿದ್ದ 12 ಕೆ.ಜಿ. ತೂಕದ ಬದಲು ಆತ ಕೇವಲ 5.5 ಕೆ.ಜಿ. ತೂಕ ಮಾತ್ರ ಹೊಂದಿದ್ದ.
ಜೀರ್ಣಶಕ್ತಿ ಕಳೆದುಕೊಂಡ ಕಾರಣ ಈತನಿಗೆ ನಿತ್ಯ 25ರಿಂದ 30 ಸಾರಿ ಆಹಾರವನ್ನು ತಿನ್ನಿಸಲಾಗುತ್ತಿತ್ತು. ಸಾಕಷ್ಟು ಆಸ್ಪತ್ರೆಗಳನ್ನು ಓಡಾಡಿದ ನಂತರವೂ ಯಾವುದೇ ಪರಿಹಾರ ಸಿಗದೇ ಪಾಲಕರು ಚಿಂತೆಗೀಡಾಗಿದ್ದರು.
ಕೊನೆಗೆ ಬೆಂಗಳೂರು ಮೂಲದ ಬಿಆರ್ ಲೈಫ್ ಎಸ್ಎಸ್ಎನ್ಎಂಸಿ ಆಸ್ಪತ್ರೆಗೆ ಮಗುವನ್ನು ಕರೆತರಲಾಯಿತು. ಆಗ ಮಗು ಡುಯೋಡೋನಜೆಜುನಾಲ್ ಜಂಕ್ಷನ್ ಮಲ್ರೊಟೇಷನ್ ಅಥವಾ ಕರುಳಿನ ಮಲ್ರೋಟೇಷನ್ ಸಮಸ್ಯೆಯಿಂದ ಬಳಲುತ್ತಿದೆ ಎಂದು ಅರಿಯಲಾಯಿತು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಈ ರೋಗ ಪ್ರಾಣಕ್ಕೂ ಎರವಾಗಬಲ್ಲಷ್ಟು ಮಾರಕವಾದದ್ದಾಗಿದೆ.
ಮಗುವಿನ ತೂಕಹೀನತೆಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಸಂದರ್ಭ ಹಾನಿಗೊಳಗಾಗಿದ್ದ ಕರುಳಿನ ಕುಣಿಕೆಗಳನ್ನು ತೆಗೆದುಹಾಕಲಾಗಿದೆ. ಇದಾದ ನಂತರ ಜಂಬಲ್ ಅಪ್ ಕರುಳಿನ ಬಿಡುಗಡೆ ಮಾಡಲಾಗಿದೆ.

ಬದುಕಿರುವುದೇ ದೊಡ್ಡ ಪವಾಡದ ಸಂಗತಿ
"ಈ ರೋಗಕ್ಕೆ ಚಿಕಿತ್ಸೆ ಪಡೆಯದೇ ಮಗು ಎರಡು ವರ್ಷ ಬದುಕಿರುವುದೇ ದೊಡ್ಡ ಪವಾಡದ ಸಂಗತಿ. ಮಗು ತೀವ್ರ ನಿರ್ಜಲೀಕರಣದಿಂದಾಗಿ, ಅಪೌಷ್ಠಿಕತೆ ಮತ್ತು ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿತ್ತು. ಆಹಾರ ಸೇವಿಸಲಾಗದೇ ಇರುವುದರಿಂದ ಎದುರಾದ ಸಮಸ್ಯೆಯಿಂದ ಮಗುವಿನ ಅಂಗಾಂಶಗಳ ಮೇಲೆ ಕೂಡ ಘಾಡ ಪರಿಣಾಮ ಉಂಟಾಗಿತ್ತು.
ಹೀಗಾಗಿ ಆತನ ದೇಹದಲ್ಲಿ ಕೊಬ್ಬಿನ ಅಂಶವೇ ಇರಲಿಲ್ಲ. ಮಗುವಿನ ಶಸ್ತ್ರಚಿಕಿತ್ಸೆಗೆ ಮುನ್ನ ದೇಹ ಅದಕ್ಕೆ ಸಹಕರಿಸುತ್ತದೆಯೇ ಎನ್ನುವುದನ್ನು ಅರಿಯಲು ನಾಲ್ಕು ದಿನ ಗಮನ ಹರಿಸಿ ಮಗುವಿನ ದೇಹಾರೋಗ್ಯವನ್ನು ಪರಿಶೀಲಿಸಿದ್ದೇವೆ' ಎಂದು ಆಸ್ಪತ್ರೆಯ ಮಕ್ಕಳ ಚಿಕಿತ್ಸಕ ಡಾ. ಎಂ. ಕೇಶವಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. 'ಇಂಥ ಸಮಸ್ಯೆ ಜೀವಂತವಾಗಿ ಜನಿಸುವ 20 ಸಾವಿರ ಮಕ್ಕಳಲ್ಲಿ ಒಂದಕ್ಕೆ ಇರುತ್ತದೆ. ಅಷ್ಟು ಅಪರೂಪದ ಸಮಸ್ಯೆ ಇದಾಗಿದೆ' ಎಂದಿದ್ದಾರೆ.

ಮಕ್ಕಳ ವೈದ್ಯ ಡಾ. ರವಿಶಂಕರ್ ಮಾರ್ಪಳ್ಳಿ
ಮಕ್ಕಳ ವೈದ್ಯ ಡಾ. ರವಿಶಂಕರ್ ಮಾರ್ಪಳ್ಳಿ ಅವರ ಪ್ರಕಾರ, ನನ್ನ ಮೂರು ದಶಕದ ವೈದ್ಯ ವೃತ್ತಿಯಲ್ಲಿ ಈ ಪ್ರಕರಣ ಅತ್ಯಂತ ಸವಾಲಿನದ್ದಾಗಿ ಕೂಡಿತ್ತು. ಮಗು ಹೊಂದಿದ್ದ ಸಮಸ್ಯೆ ಕೂಡ ಅಪರೂಪದ್ದಾಗಿರುವ ಜತೆಗೆ ಚಿಕಿತ್ಸೆ ಕೂಡ ಅಷ್ಟೇ ಸೂಕ್ಷ್ಮವಾಗಿ ನಡೆಯಬೇಕಾದ್ದಾಗಿತ್ತು. ಮಗು ಎಷ್ಟು ಪ್ರಮಾಣದ ಪೌಷ್ಠಿಕಾಂಶ ಕೊರತೆ ಎದುರಿಸುತ್ತಿತ್ತು ಎಂದರೆ, ಸ್ವಂತ ಬಲದ ಮೇಲೆ ಎದ್ದು ನಿಲ್ಲುವ ಶಕ್ತಿ ಕೂಡ ಕಳೆದುಕೊಂಡಿತ್ತು ಎಂದು ವಿವರಿಸಿದ್ದಾರೆ.

ಅಗತ್ಯ ಚಿಕಿತ್ಸೆ ಸಿಕ್ಕಿರಲಿಲ್ಲ
ಚಿಕಿತ್ಸೆಗೆ ಒಳಗಾಗಿರುವ ಮಾಯಂಕ ಸರ್ಕಾರ್ ತ್ರಿಪುರಾದ ರತನ್ ಹಾಗೂ ಮೀರಾ ಸರ್ಕಾರ್ ಅವರ ಎರಡನೇ ಮಗು. ಪಾಲಕರು ಮಗುವನ್ನು ಇಲ್ಲಿಗೆ ಕರೆತರುವ ಮುನ್ನ ತ್ರಿಪುರಾ ಹಾಗೂ ಕೋಲ್ಕಾತ್ತಾದ ಕೆಲವೆಡೆ ವೈದ್ಯರಿಗೆ ತೋರಿಸಿದ್ದಾರೆ. ಅಲ್ಲಿನ ವೈದ್ಯರು ಇದನ್ನು ನರ ದೌರ್ಬಲ್ಯ ಎಂಬ ಕಾರಣ ನೀಡಿ ಚಿಕಿತ್ಸೆ ಕೊಟ್ಟಿದ್ದರು. ಆದ್ದರಿಂದ ಮಗುವಿಗೆ ಸೂಕ್ತ ಹಾಗೂ ಅಗತ್ಯ ಚಿಕಿತ್ಸೆ ಸಿಕ್ಕಿರಲಿಲ್ಲ.

ಈಗ ಮಗು ಗುಣವಾಗುತ್ತಿದೆ
ನಾವು ಬೆಂಗಳೂರಿಗೆ ಬಂದು ವೈದ್ಯರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದಾಗ ಇಲ್ಲಿ ತಪಾಸಣೆ ನಡೆಸಿದ ನಂತರ ವೈದ್ಯರು ತಿಳಿಸಿದಾಗಲೇ ತಿಳಿದದ್ದು, ಮಗುವಿನ ಹೊಟ್ಟೆಯಲ್ಲಿ ಸಮಸ್ಯೆ ಇದೆ ಎನ್ನುವುದು. ಈಗ ಮಗು ಗುಣವಾಗುತ್ತಿದೆ ಎಂದು ಮಗುವಿನ ತಂದೆ ರತನ್ ಸರ್ಕಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಎರಡು ವರ್ಷದ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪಾಲಕರೊಂದಿಗೆ ಮಗು ತ್ರಿಪುರಾಗೆ ತೆರಳಿದೆ.












Click it and Unblock the Notifications