ಹೈಕೋರ್ಟ್ ತೀರ್ಪು: ವಾಣಿ ಸ್ಕೂಲಿಗೆ ನುಂಗಲಾರದ ತುತ್ತು
ಬೆಂಗಳೂರು, ಏ.30: ಬಡ ಮಕ್ಕಳಿಗೆ ಶಿಕ್ಷಣ ಖಾತ್ರಿ ಒದಗಿಸಲು ಅಲ್ಪಸಂಖ್ಯಾತ ಸ್ಥಾನಮಾನದ ಸೋಗಿನಲ್ಲಿ ಹಿಂದೇಟು ಹಾಕುತ್ತಿದ್ದ ರಾಜಧಾನಿಯ ಪ್ರತಿಷ್ಠಿತ ಶಾಲೆಗೆ ರಾಜ್ಯ ಹೈಕೋರ್ಟ್ ತಪರಾಕಿ ನೀಡಿದೆ. ಈ ತೀರ್ಪು ಬೇರೆ ಶಾಲೆಗಳ ಮೇಲೂ ಪ್ರಭಾವ ಬೀರಲಿದ್ದು, RTE ಅನುಸಾರ ಶಿಕ್ಷಣ ವಂಚಿತರಾಗುತ್ತಿದ್ದ ಮಕ್ಕಳಿಗೆ ಜೀವದಾನ ನೀಡಿದಂತಾಗಿದೆ.
ಬೆಂಗಳೂರಿನಲ್ಲಿ ಮೂರು ಕಡೆ ದೊಡ್ಡ ದೊಡ್ಡ ಶಾಲೆಗಳನ್ನು ಹೊಂದಿರುವ ನಾಲ್ಕು ದಶಕಗಳಷ್ಟು ಹಳೆಯದಾದ ತೆಲುಗು ಭಾಷಾ ಅಲ್ಪಸಂಖ್ಯಾತ ಶ್ರೀ ವಾಣಿ ವಿದ್ಯಾಸಂಸ್ಥೆಗೆ ಈ ಹಿಂದೆ ಹೈಕೋರ್ಟ್ ಜಸ್ಟೀಸ್ ಆನಂದ ಬೈರಾರೆಡ್ಡಿ ಅವರ ಏಕಸದಸ್ಯ ನ್ಯಾಯಪೀಠವು ಏಪ್ರಿಲ್ 8ರಂದು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಿ, ಪೊರೆದಿತ್ತು. ಅದರಂತೆ ಶಿಕ್ಷಣ ಹಕ್ಕು ಕಾಯ್ದೆಯಡಿ ಶೇ. 25ರಷ್ಟು ಮೀಸಲು ಸೀಟು ಭರ್ತಿಗೆ ವಿನಾಯಿತಿ ನೀಡಿತ್ತು.
ಆದರೆ ನಿನ್ನೆ ಹೈಕೋರ್ಟ್ ವಿಭಾಗೀಯ ಪೀಠವು ಈ ಅದೇಶವನ್ನು ಅನೂರ್ಜಿತಗೊಳಿಸಿ, ಶ್ರೀ ವಾಣಿ ಸ್ಕೂಲುಗಳು RTE ಅನುಸಾರ ಶೇ. 25ರಷ್ಟು ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲೇಬೇಕು ಎಂದು ಖಡಕ್ ತೀರ್ಪು ನೀಡಿದ್ದು, ಶ್ರೀ ವಾಣಿ ವಿದ್ಯಾಸಂಸ್ಥೆಗೆ ಇದು ನುಂಗಲಾರದ ತುತ್ತಾಗಿದೆ.

ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಗೆ ಪೂರಕವಾಗಿ ಚೀಫ್ ಜಸ್ಟೀಸ್ ಡಿಎಚ್ ವಘೇಲಾ ಮತ್ತು ಜಸ್ಟೀಸ್ ಬಿವಿ ನಾಗರತ್ನ ಅವರ ನ್ಯಾಯಪೀಠವು ಈ ಖಡಕ್ ತೀರ್ಪು ನೀಡಿದೆ.
RTE ಅನುಸಾರ ಎಲ್ಲಾ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳು ಶೇ. 25 ರಷ್ಟು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು. ಆದರೆ ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೆ ಇದಕ್ಕೆ ವಿನಾಯಿತಿ ಇದೆ. ಪ್ರಸ್ತುತ ಶ್ರೀ ವಾಣಿ ವಿದ್ಯಾಸಂಸ್ಥೆಯ ಶಾಲೆಗಳೂ ಸಹ ತನ್ನದು ತೆಲುಗು ಭಾಷಾ ಅಲ್ಪಸಂಖ್ಯಾತ ಶಾಲೆಯೆಂದು RTE ತನಗೆ ಅನ್ಚಯವಾಗದು ಎಂದು ಸಬೂಬು ಹೇಳಿ ತಪ್ಪಿಸುವ ನಾಟಕವಾಡಿತ್ತು.
ಕಳೆದ ವರ್ಷ RTE ಅನುಸಾರ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಒಪ್ಪಿಕೊಂಡಿದ್ದ ವಾಣಿ ಸ್ಕೂಲ್ ಈ ಬಾರಿ ಎಲ್ಲ ಮಕ್ಕಳಂತೆ ಬಡ ಮಕ್ಕಕಳೂ ಸಹ ಫೀಸು ಕಟ್ಟಬೇಕು ಎಂದು ಸೂಚಿಸಿತ್ತು. ಇದೀಗ ಕೋರ್ಟ್ ಮಧ್ಯಂತರ ತೀರ್ಪಿನನಂತೆ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ವಾಣಿ ಸ್ಕೂಲಿಗೆ ಅನಿವಾರ್ಯವಾಗಿದೆ. ನಗರದಲ್ಲಿ ಇಂತಹ ವಾಣಿ ಸ್ಕೂಲುಗಳ ಸಂಖ್ಯೆ ಬಹುಸಂಖ್ಯಾತ ಪ್ರಮಾಣದಲ್ಲಿದ್ದು, ಆ ಶಾಲೆಗಳಿಗೂ ಈ ತೀರ್ಪು ನೀತಿಪಾಠವಾಗಲೆಂದು ಪೋಷಕರು ಆಶಿಸಿದ್ದಾರೆ.












Click it and Unblock the Notifications