ಪ್ರಚೋದನಕಾರಿ ಭಾಷಣ, ಮುತಾಲಿಕ್ ವಿರುದ್ಧ ಎಫ್ ಐಆರ್
ಬೆಂಗಳೂರು, ಜುಲೈ 4: ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪ್ರಚೋದನಕಾರಿ ಭಾಷಣ ಹಾಗೂ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದ ಆರೋಪದಲ್ಲಿ ಬೆಂಗಳೂರು ಪೊಲೀಸರು ದೂರು ದಾಖಲು ಮಾಡಿದ್ದಾರೆ.
ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದ ಪೇಜಾವರ ಶ್ರೀ
ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಇನ್ನು ಮುಂದೆ ಇಫ್ತಾರ್ ಕೂಟಗಳನ್ನು ಆಯೋಜಿಸಿದರೆ ಹಾಗೂ ನಮಾಜ್ ನಡೆಸಿದರೆ ನಮ್ಮ ರಕ್ತವನ್ನು ಚೆಲ್ಲಿಯಾದರೂ ತಡೆಯಬೇಕಾಗುತ್ತದೆ ಎಂಬ ಹೇಳಿಕೆಯನ್ನು ಸಾರ್ವಜನಿಕವಾಗಿ ಕೊಟ್ಟಿದ್ದರು. ಎರಡು ಕೋಮಿನ ಮಧ್ಯೆ ಸಾಮರಸ್ಯ ಕದಡುವ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿ ಹೇಳಿಕೆ ನೀಡಿದ ಆರೋಪ ಮಾಡಲಾಗಿದೆ.
ಜುಲೈ ಎರಡರಂದು ನಡೆಸಿದ ಪ್ರತಿಭಟನೆ ವೇಳೆ ಪ್ರಮೋದ್ ಮುತಾಲಿಕ್ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಸ್ವಾಮೀಜಿ ವಿರುದ್ಧ ಟೀಕಿಸಿದ್ದರು. ಜತೆಗೆ ಇನ್ನು ಮುಂದೆ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಇಫ್ತಾರ್ ಅಥವಾ ನಮಾಜ್ ನಡೆದರೆ ರಕ್ತ ಹರಿಯುತ್ತದೆ ಎಂದು ಕೂಡ ಹೇಳಿದ್ದರು.
ರಂಜಾನ್ ನ ಪ್ರಯುಕ್ತ ಸೌಹಾರ್ದತೆಯ ಪ್ರತೀಕವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಸೌಹಾರ್ದ ಉಪಾಹಾರ ಕೂಟ ಆಯೋಜಿಸಿದ್ದರು. ಈ ಕ್ರಮವನ್ನು ಖಂಡಿಸಿದ್ದ ಪ್ರಮೋದ್ ಮುತಾಲಿಕ್ 'ಇದೊಂದು ಅವಮಾನ' ಎಂದು ಕರೆದಿದ್ದರು. ಆ ನಡೆ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದರು.