ಐಟಿಪಿಎಲ್ಗೆ ಎಕ್ಸ್ ಪ್ರೆಸ್ ವೇ ನಿರ್ಮಾಣ : ಪಾಟೀಲ್
ಬೆಂಗಳೂರು, ಜ.23 : ಬೆಂಗಳೂರು ನಗರದಿಂದ ಐಟಿಪಿಎಲ್ಗೆ ಎಕ್ಸ್ ಪ್ರೆಸ್ ವೇ ನಿರ್ಮಾಣ ಮಾಡಲು ಮೂಲ ಸೌಕರ್ಯ ಸಚಿವ ರೋಷನ್ ಬೇಗ್ ಜೊತೆ ಚರ್ಚೆ ನಡೆಸಲಿದ್ದೇನೆ ಎಂದು ಐಟಿ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ. ಇಂಟೆಲ್ ನೂತನ ಕಟ್ಟಡ ಸಮುಚ್ಛಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಸರ್ಜಾಪುರ ರಸ್ತೆಯ ಇಂಟೆಲ್ ಇಂಡಿಯಾದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕಾಗಿ ನಿರ್ಮಿಸುತ್ತಿರುವ ಮೂರನೇ ಕಚೇರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್, ಬೆಂಗಳೂರು ನಗರದಿಂದ ಐಟಿಪಿಎಲ್ ಗೆ ಎಕ್ಸ್ ಪ್ರೆಸ್ ವೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಕುರಿತು ಸಚಿವ ರೋಷನ್ ಬೇಗ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಐಟಿ-ಬಿಟಿ ಉದ್ಯಮಗಳನ್ನು ಸ್ಥಾಪಿಸಲು ಅಗತ್ಯ ಸಹಕಾರ ನೀಡುತ್ತಿದೆ, ಅದಕ್ಕೆ ತಕ್ಕಂತೆ ನಮ್ಮ ಆರ್ಥಿಕ ನೀತಿಗಳಲ್ಲಿ ಬದಲಾವಣೆ ಮಾಡಿಕೊಂಡು ಹೊಸ-ಹೊಸ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದೇವೆ ಎಂದು ಹೇಳಿದರು. ಸರ್ಕಾರದ ನೀತಿಗಳಿಂದ ರಾಜ್ಯ ಐಟಿವಲಯದಲ್ಲಿ ದೇಶದ ಗಮನಸೆಳೆದಿದೆ ಎಂದು ಪಾಟೀಲ್ ತಿಳಿಸಿದರು.
ಜೈವಿಕ ತಂತ್ರಜ್ಞಾನ ಕ್ಷೇತ್ರದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ 'ಬೆಂಗಳೂರು ಇಂಡಿಯಾ ಬಯೋ 2014' ಮೇಳ ಆಯೋಜಿಸಲು ನಿರ್ಧರಿಸಿದ್ದೇವೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ವಿಶ್ವದ ಹಲವಾರು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.
ನೇಮಕಾತಿ ಇಲ್ಲ : ಕಾರ್ಯಕ್ರಮದಲ್ಲಿ ಮಾತನಾಡಿದ ಇಂಟೆಲ್ ಸಂಸ್ಥೆ ಅಧ್ಯಕ್ಷೆ ಕುಮುದ್ ಶ್ರೀನಿವಾಸನ್ ತಿಳಿಸಿದರು. ಪ್ರತಿ ವರ್ಷ ನಮ್ಮ ಶೇ4 ರಷ್ಟು ಸಿಬ್ಬಂದಿ ಉದ್ಯೋಗ ಬದಲಾವಣೆ ಮಾಡುತ್ತಾರೆ. ಇದರೊಂದಿಗೆ ನಿವೃತ್ತ, ಸ್ವಯಂ ನಿವೃತ್ತಿಯಿಂದಾಗಿ ಉದ್ಯೋಗಿಗಳ ಪ್ರಮಾಣ ಕಡಿಯೆಯಾಗುತ್ತಿರುತ್ತದೆ. ನಮಗೆ ಅಗತ್ಯವಿರುವಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತೇವೆ. ಆದರೆ, ಡೊಡ್ಡ ಪ್ರಮಾಣದಲ್ಲಿ ಸದ್ಯ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವನ್ನು ಸಮಗ್ರಗೊಳಿಸುವ ನಿಟ್ಟಿನಲ್ಲಿ ಇಂಟೆಲ್ ಇಂಡಿಯಾ 600 ಕೋಟಿ ವೆಚ್ಚದಲ್ಲಿ, 18 ಎಕರೆ ಪ್ರದೇಶದಲ್ಲಿ 60 ಸಾವಿರ ಚದರಡಿ ಪ್ರದೇಶದಲ್ಲಿ ಬೃಹತ್ ಕಚೇರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಕುಮುದ್ ಶ್ರೀನಿವಾಸನ್ ಹೇಳಿದರು.












Click it and Unblock the Notifications