ಬಾಗ್ಮನೆ ಟೆಕ್ ಪಾರ್ಕ್ ಒತ್ತುವರಿ ತೆರವು ಸ್ಥಗಿತ ಪ್ರಶ್ನಿಸಿ ಪಿಐಎಲ್
ಬೆಂಗಳೂರು, ಸೆಪ್ಟೆಂಬರ್ 21:ಬಾಗಮನೆ ಟೆಕ್ಪಾರ್ಕ್ ಬಳಿಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೂರು ವಾರಗಳ ಕಾಲ ಮುಂದೂಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಲೋಕಾಯುಕ್ತ ನೀಡಿದ ನಿರ್ದೇಶವನ್ನು ರದ್ದುಗೊಳಿಸುವಂತೆ ಕೋರಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ.
ಈ ಕುರಿತಂತೆ ಎಸ್ಪಿಎಸ್ನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಅವರ ಪರ ವಕೀಲರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯಪೀಠಕ್ಕೆ ಬುಧವಾರ ಮನವಿ ಮಾಡಿದರು. ನ್ಯಾಯಪೀಠ ಇದೇ 26ರಂದು ಅರ್ಜಿ ವಿಚಾರಣೆ ನಡೆಸಲು ಸಮ್ಮತಿಸಿದೆ.
ಅರ್ಜಿಯಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್, ಬಿಬಿಎಂಪಿ ಆಯುಕ್ತ, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಮೆಸರ್ಸ್ ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ವ್ಯಾಪ್ತಿ ಮೀರಿ ಆದೇಶ: ಅರ್ಜಿಯಲ್ಲಿ, ಕರ್ನಾಟಕ ಲೋಕಾಯುಕ್ತ ಕಾಯ್ದೆ-1994ರ ಅನ್ವಯ ಲೋಕಾಯುಕ್ತವು, ಸಾರ್ವಜನಿಕ ಆಡಳಿತ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ದೂರುಗಳನ್ನು ಮೇಲೆ ಕ್ರಮ ಕೈಗೊಳ್ಳಬೇಕು. ಆದರೆ, ಈಗಿರುವ ಲೋಕಾಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ, ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಮತ್ತು ಸಾಂವಿಧಾನಿಕ ಹೈಕೋರ್ಟ್ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ರಾಜಕಾಲುವೆ ಒತ್ತುವರಿ ತೆರವಿಗೆ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಅದರಂತೆ, ಬಾಗ್ಮನೆ ಟೆಕ್ ಪಾರ್ಕ್ ವಿರುದ್ಧವೂ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದ ಕ್ರಮ ಜರುಗಿಸಲು ಮುಂದಾಗಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿರುವ ನೋಟಿಸ್ಗೆ ಪ್ರತಿಕ್ರಿಯಿಸಲು ಅವಕಾಶ ನೀಡುವವರೆಗೆ ಮಳೆನೀರು ಚರಂಡಿಗಳ (ಎಸ್ಡಬ್ಲ್ಯೂಡಿ) ಅತಿಕ್ರಮಣ ಆರೋಪದ ಮೇಲೆ ಎಂ/ಎಸ್ ಬಾಗ್ಮನೆ ಟೆಕ್ ಪಾರ್ಕ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜಕಾಲುವೆಗಳ ಆಪಾದಿತ ಅತಿಕ್ರಮಣದ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಯಾವುದೇ ಸಮೀಕ್ಷೆ ನಡೆಸದೆ ಅಥವಾ ಮುಂಚಿತವಾಗಿಯೇ ಮಾಹಿತಿಯನ್ನು ನೀಡದೆ ಮೌಖಿಕ ಸೂಚನೆಗಳನ್ನು ನೀಡುವ ಮೂಲಕ ಟೆಕ್ ಪಾರ್ಕ್ನ ಕಾಂಪೌಂಡ್ ಗೋಡೆಗಳನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮೆಸರ್ಸ್ ಬಾಗ್ಮನೆ ಡೆವಲ್ಲಪ್ಪರ್ಸ್ ಪ್ರವೈಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಹಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಪೂರ್ವಾ ಪಾರ್ಕ್ರಿಡ್ಜ್ನಿಂದ ರಾಜಕಾಲುವೆ ಒತ್ತುವರಿ ಮಾಡಿರುವ ಕಾರಣ ತನ್ನ ಟೆಕ್ ಪಾರ್ಕ್ನಲ್ಲಿ ಪ್ರವಾಹದ ಬಗ್ಗೆ ಜೂನ್ 2022 ರಲ್ಲಿ ಬಿಬಿಎಂಪಿಗೆ ದೂರು ನೀಡಿರುವುದಾಗಿ ಅರ್ಜಿದಾರರು ಹೇಳಿದ್ದಾರೆ ಮತ್ತು ಆ ವಸತಿ ಪ್ರದೇಶದಲ್ಲಿನ ಕೆಲವು ವಿಲ್ಲಾಗಳ ಮಾಲೀಕರು ಹೈಕೋರ್ಟ್ಗೆ ಮೊರೆ ಹೋಗಿದ್ದರು, 2022 ರ ಆಗಸ್ಟ್ನಲ್ಲಿ ವಿಲ್ಲಾ ಮಾಲೀಕರು ತಮಗೆ ಪೂರ್ವ ಸೂಚನೆ ಇಲ್ಲದೆ ಸಮೀಕ್ಷೆ ನಡೆಸಲಾಗಿದೆ ಎಂದು ದೂರಿದ ಕಾರಣ ಹೊಸದಾಗಿ ಸಮೀಕ್ಷೆ ನಡೆಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು ಎಂದು ಅರ್ಜಿದಾರರು ಹೇಳಿದ್ದಾರೆ.
ರಾಜಕಾಲುವೆ ಒತ್ತುವರಿ ಮಾಡಿರುವ ಆರೋಪದ ಮೇಲೆ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸುವ ಉದ್ದೇಶದಿಂದ ಬಿಬಿಎಂಪಿ ಅಧಿಕಾರಿಗಳು 2022ರ ಸೆ.9ರಂದು ಕೇವಲ ಮೌಖಿಕ ಸೂಚನೆ ನೀಡಿದ್ದಾರೆ, ಲಿಖಿತ ನೋಟಿಸ್ ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಆದರೆ ನ್ಯಾಯಾಲಯ, ಸರ್ವೆ ವರದಿಯ ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಿ, ರಾಜಕಾಲುವೆ ಒತ್ತುವರಿ ಮಾಡಿರುವುದು ಕಂಡುಬಂದಲ್ಲಿ ಸರ್ವೆ ವರದಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಿ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚಿಸಿತ್ತು.