ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಗೆ ಶೀಘ್ರದಲ್ಲೆ ರಾಜ್ಯ ಸೇರ್ಪಡೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಸೆ. 28: ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಸೇರ್ಪಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ತಿಳಿಸಿದರು.
ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022ಯ ಅಂಗವಾಗಿ ಆಯೋಜಿಸಿದ್ದ ನೊಂದಾಯಿತ ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಪ್ರವಾಸೋದ್ಯಮ ನೀತಿ 2020-26ರ (ಪರಿಷ್ಕತ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಪಿಎಫ್ಐ ನಿಷೇಧ: ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕರ್ನಾಟಕ ಬಿಜೆಪಿ ನಾಯಕರ ಪ್ರತಿಕ್ರಿಯೆ
"ರಾಜ್ಯಕ್ಕೆ ಆಗಮಿಸುತ್ತಿರುವ 30 ಲಕ್ಷ ಪ್ರವಾಸಿಗರನ್ನು ಮುಂದಿನ ಮೂರು ವರ್ಷದಲ್ಲಿ ಒಂದು ಕೋಟಿಗೆ ಮುಟ್ಟಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು. ರಾಜ್ಯದಲ್ಲಿ ಪ್ರವಾಸಿಗರ ಹೆಜ್ಜೆಗಳನ್ನು ಹೆಚ್ಚಿಸಬೇಕು. ವಿದೇಶಿಯರನ್ನು ಆಕರ್ಷಿಸಿ, ಸ್ಥಳೀಯರಿಗೆ ಕೆಲಸ ಕೊಡಬೇಕು. ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಹಲವು ಸ್ಥಳಗಳು ಕರ್ನಾಟಕದಲ್ಲಿವೆ. ಕಲಬುರಗಿ, ಬೀದರ್ ಕೋಟೆಗಳು ಬಹಳ ಅದ್ಭುತವಾಗಿದೆ. ಇವೆಲ್ಲಾ ನಮ್ಮ ಆಸ್ತಿ. ಅವುಗಳನ್ನು ಸುಧಾರಣೆ ಮಾಡಿದರೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ನಮ್ಮ ಹಿರಿಯರಿಂದ ಬಂದಿರುವುದನ್ನು ಜಗತ್ತಿಗೆ ನಾವು ಪರಿಚಯಿಸಬೇಕು. ಇದನ್ನು ನಮ್ಮ ಸರ್ಕಾರ ಗುರುತಿಸುವ ಕೆಲಸ ಮಾಡುತ್ತದೆ" ಎಂದು ಹೇಳಿದರು.
ಮೂರು ವರ್ಷದಲ್ಲಿ ಒಂದು ಕೋಟಿ ಪ್ರವಾಸಿಗರ ಗುರಿ
"ಪ್ರವಾಸೋದ್ಯಮದೊಂದಿಗೆ ಕಂದಾಯ, ಆಹಾರ, ಲೋಕೋಪಯೋಗಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿ, ಕರ್ನಾಟಕದ ಒಟ್ಟು ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಲಾಗುವುದು. ಪ್ರವಾಸೋದ್ಯಮ ಸಂಪೂರ್ಣ ಬಳಕೆಯಾಗಿ ಕರ್ನಾಟಕವನ್ನು ಜಗತ್ರ್ಪಸಿದ್ಧ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನವಿರಲಿದೆ" ಎಂದರು.
"ಶಿಗ್ಗಾಂವಿ ಕ್ಷೇತ್ರದಲ್ಲಿ ಕನಕದಾಸರು ಹುಟ್ಟಿದ್ದು, ಶಿಶುನಾಳ ಶರೀಫರ ಕರ್ಮಭೂಮಿಯಾಗಿದ್ದರೂ ಅಲ್ಲಿ ಯಾವ ಅಭಿವೃದ್ಧಿಯೂ ಆಗಿರಲಿಲ್ಲ. ಅಲ್ಲಿನ ಪುರಾತತ್ವ ಇಲಾಖೆ ವತಿಯಿಂದ ಉತ್ಖನನ ಮಾಡಿಸಿದ ನಂತರ ಅದು ಒಂದು ಸಣ್ಣ ಅರಮನೆ ಎಂದು ತಿಳಿಸಿದರು. ಅಲ್ಲಿ ಕನಕದಾಸರ ಕೋಟೆ ಮತ್ತು ಅರಮನೆ ಎರಡನ್ನೂ ಕಟ್ಟಲಾಗಿದೆ. 4D ಸ್ಟುಡೀಯೋ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡು ಕನಕದಾಸರನ್ನು ಅಲ್ಲಿ ಜೀವಂತವಾಗಿರಿಸಲಾಗಿದೆ. ಈಗ ಸಾವಿರಾರು ಜನ, ವಿಶೇಷವಾಗಿ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ಬರುತ್ತಾರೆ. ಮಹಾರಾಷ್ಟ್ರ, ಆಂಧ್ರ ಎಲ್ಲೆಡೆಗಳಿಂದ ಅಲ್ಲಿಗೆ ಪ್ರವಾಸಿಗರು ಬರುತ್ತಾರೆ" ಎಂದರು.
ಪ್ರವಾಸೋದ್ಯಮದಲ್ಲಿ ಹೊಸ ಯೋಜನೆ; ಆನಂದ್ ಸಿಂಗ್ಗೆ ಮೆಚ್ಚುಗೆ
"ಸಚಿವ ಆನಂದ್ ಸಿಂಗ್ ಅವರು ಬಂದ ನಂತರ ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಯಾಣ, ಚಿಕ್ಕಮಗಳೂರಗಳಲ್ಲಿ ರೋಪ್ ವೇ, ಹೋಟೇಲುಗಳನ್ನು ಪುನಶ್ಚೇತನ ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ, ಎರಡು ಸರ್ಕಿಟ್ ಗಳನ್ನು ರೂಪಿಸಲಾಗಿದೆ. ಸಿ.ಆರ್ ಝೆಡ್ ಸಾಧನೆ ಅದ್ಭುತವಾಗಿದೆ. ಅದರಲ್ಲಿ ಆನಂದ್ ಸಿಂಗ್ ಪಾತ್ರ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಇದರ ಉಪಯೋಗ ಪಡೆಯೋಣ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮವನ್ನು ಕೈಗೊಳ್ಳುವ ಕೆಲಸಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುವುದು" ಎಂದು ಮಾಹಿತಿ ನೀಡಿದರು.
ಮಾರ್ಗದರ್ಶಿಗಳ ಮೇಲೆ ಪ್ರವಾಸಿಗರಿಗೆ ವಿಶ್ವಾಸ ಮೂಡಬೇಕು
"ಪ್ರವಾಸಿ ಮಾರ್ಗದರ್ಶಿಗಳು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸುಳ್ಳು ಹೇಳುವುದು, ಬಂದವರಿಗೆ ದಾರಿ ತಪ್ಪಿಸುವುದು ಮಾಡಬಾರದು. ಕರ್ನಾಟಕದ ಪ್ರವಾಸಿ ಮಾರ್ಗದರ್ಶಿಗಳೆಂದರೆ ನಂಬರ್ ಒನ್ ಆಗಬೇಕು. ವಿಶ್ವಾಸಪೂರ್ವಕವಾಗಿರಬೇಕು. ಅವರು ಸರಿಯಾಗಿ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ಮೂಡಿಸುವ ರೀತಿಯಲ್ಲಿ ನಿಮ್ಮ ನಡೆ ನುಡಿ ಇರಬೇಕು" ಎಂದು ಮಾರ್ಗದರ್ಶಿಗಳಿಗೆ ಕಿವಿಮಾತು ಹೇಳಿದರು.
ಒಟ್ಟಾರೆ ಪ್ರವಾಸೋದ್ಯಮ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು. ನಮ್ಮ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಬಳಸುವಂತಾಗಬೇಕು. ಸರ್ಕಾರ ನಿಮ್ಮ ಜೊತೆಗಿದೆ ಎಂದು ಭರವಸೆ ನೀಡಿದ್ದಾರೆ.
ಪ್ರವಾಸೋದ್ಯಮದಿಂದ ಕನ್ನಡದ ಯುವಕರಿಗೆ ಕೆಲಸ ಸಿಗಬೇಕು
ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆಯನ್ನು ತಂದಿದೆ. ವಿಶ್ವದ ಹತ್ತು ಹಲವು ದೇಶಗಳಲ್ಲಿ ಪ್ರವಾಸೋದ್ಯಮವೇ ಪ್ರಮುಖ ಉದ್ಯಮವಾಗಿ ಹೊರಹೊಮ್ಮಿದೆ. ಭಾರತ ದೇಶದಲ್ಲಿಯೂ ಪ್ರವಾಸೋದ್ಯಮ ಉದ್ದಿಮೆಯಾಗಿ ಬೆಳೆಯುತ್ತಿದೆ. ಪ್ರವಾಸಿಗರು ಉತ್ತಮ ವಸತಿ, ಸಾರಿಗೆ, ಆಹಾರ ಸೇರಿದಂತೆ ಉತ್ತಮ ಸೇವೆಗಳನ್ನು ಬಯಸುತ್ತಾರೆ. ಪ್ರವಾಸೋದ್ಯಮದಿಂದ ಅತಿ ಹೆಚ್ಚಿನ ಉದ್ಯೋಗಸೃಷ್ಟಿಯೂ ಸಾಧ್ಯವಾಗುತ್ತಿದೆ. ಹೋಟೇಲು ಉದ್ಯಮಕ್ಕೆ ಬಹಳ ಅವಕಾಶಗಳಿವೆ. ಆನಂದ್ ಸಿಂಗ್ ಅವರು ಹಂಪಿ, ಬಾದಾಮಿ, ಬೇಲೂರಿನಲ್ಲಿ ತ್ರಿ ಸ್ಟಾರ್ ಹೋಟೇಲುಗಳನ್ನು ಪ್ರಾರಂಭಿಸಿದ್ದಾರೆ. ಬಹಳಷ್ಟು ಅಭಿವೃದ್ಧಿಯಾಗುತ್ತಿದ್ದು, ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು. ನಮ್ಮ ಕನ್ನಡದ ಹುಡುಗರಿಗೆ ಕೆಲಸ ಸಿಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ 2 ಪ್ರವಾಸೋದ್ಯಮ ಸರ್ಕೀಟ್ ಗಳನ್ನು ಅಂದರೆ ಬೇಲೂರು ಹಳೆಬೀಡು, ಸೋಮನಾಥಪುರ ಸುತ್ತಮುತ್ತಲ ಪ್ರವಾಸಿತಾಣಗಳನ್ನೊಳಗೊಂಡ ಮೈಸೂರು ಸರ್ಕೀಟ್ , ಬಿಜಾಪುರ ದಿಂದ ಬಾದಾಮಿ ಪಟ್ಟದಕಲ್ಲು ಹಂಪಿ ಇತ್ಯಾದಿಗಳನ್ನು ಒಳಗೊಂಡ ಹಂಪಿ ಸರ್ಕೀಟ್ಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಸರ್ಕೀಟ್ಗಳಿಗೆ ಪ್ರವಾಸಿಗರು ವೆಬ್ಸೈಟ್ ಮೂಲಕ ತಮ್ಮ ಪ್ರವಾಸದ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳುವ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಮುಂದಿನ 2 ತಿಂಗಳ ಒಳಗಾಗಿ ಎರಡು ಸರ್ಕಿಟ್ಗಳನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.