ಡಿಕೆಶಿಯನ್ನು ಅಹ್ಮದ್ ಪಟೇಲ್ ಭೇಟಿಯಾದ ಹಿಂದೆ ಡ್ಯಾಮೇಜ್ ಕಂಟ್ರೋಲ್ ಯತ್ನ
ಬೆಂಗಳೂರು, ಸೆಪ್ಟೆಂಬರ್ 27: ತಿಹಾರ್ ಜೈಲಿನಲ್ಲಿ ಇರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈಚೆಗೆ ಭೇಟಿ ಆಗಿದ್ದರು. ಆದರೆ ಅದೇ ತಿಹಾರ್ ಜೈಲಿನಲ್ಲಿ ಇರುವ ಕರ್ನಾಟಕದಲ್ಲಿನ ಕಾಂಗ್ರೆಸ್ ನ ಪ್ರಭಾವಿ ಮುಖಂಡ ಡಿ. ಕೆ. ಶಿವಕುಮಾರ್ ರನ್ನು ಭೇಟಿ ಆಗಿರಲಿಲ್ಲ. ಈ ವಿಚಾರ ಒಕ್ಕಲಿಗ ಸಮುದಾಯಕ್ಕೆ ಬೇರೆ ಸಂದೇಶ ರವಾನಿಸಿದೆ ಎಂಬುದು ಕಾಂಗ್ರೆಸ್ ತಲೆಗೆ ತಾಕಿದೆ.
ಡ್ಯಾಮೇಜ್ ಕಂಟ್ರೋಲ್ ಗಾಗಿ ಕಾಂಗ್ರೆಸ್ ನ ಹಿರಿತಲೆ ಅಹ್ಮದ್ ಪಟೇಲ್ ಅವರು ಗುರುವಾರ ಡಿ. ಕೆ. ಶಿವಕುಮಾರ್ ರನ್ನು ತಿಹಾರ್ ಜೈಲಿನಲ್ಲಿ ಭೇಟಿ ಆಗಿದ್ದಾರೆ. ಇಲ್ಲಿ ಇನ್ನೊಂದು ವಿಚಾರವನ್ನು ನೆನಪಿಟ್ಟುಕೊಳ್ಳಬೇಕು. ಸಂಸದ ಹಾಗೂ ಶಿವಕುಮಾರ್ ಸೋದರ ಡಿ. ಕೆ. ಸುರೇಶ್ ಅವರು ದೇವೇಗೌಡರನ್ನು ಭೇಟಿ ಆದ ಒಂದು ದಿನದ ನಂತರ ಈ ಬೆಳವಣಿಗೆ ಆಗಿದೆ.
ಸೋನಿಯಾ ಗಾಂಧಿ ಪರಮಾಪ್ತ ಅಹ್ಮದ್ ಪಟೇಲ್ ಹಾಗೂ ಆನಂದ್ ಶರ್ಮಾ ತಿಹಾರ್ ಜೈಲಿನಲ್ಲಿ ಶಿವಕುಮಾರ್ ರನ್ನು ಭೇಟಿ ಆಗಿದ್ದಾರೆ. ಆದರೆ ಇದಕ್ಕೂ ಮುನ್ನ್ ಸೋನಿಯಾ ಹಾಗೂ ಮನಮೋಹನ್ ಸಿಂಗ್ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್, ಜೈಲು ನಿಯಮಗಳ ಕಾರಣಕ್ಕೆ ಭೇಟಿ ಮಾಡಲಿಲ್ಲ ಎಂದು ಹೇಳಿತ್ತು.

ಅಂದ ಹಾಗೆ, ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರ ಮಾಡಿದ ಮೇಲೆ ಕಾಂಗ್ರೆಸ್ ನಿಂದ ಭೇಟಿ ಆಗುತ್ತಿರುವ ಮೊದಲ ನಾಯಕರು ಆಹ್ಮದ್ ಪಟೇಲ್ ಹಾಗೂ ಆನಂದ್ ಶರ್ಮಾ. ಆಸ್ಪತ್ರೆಯಲ್ಲಿ ದಾಖಲಿಸಿದ್ದ ವೇಳೆ ಕಾಂಗ್ರೆಸ್ ನ ಕೆಲ ನಾಯಕರು ಭೇಟಿ ಮಾಡಿದ್ದರು. ಆದರೆ ತಿಹಾರ್ ಜೈಲಿಗೆ ಯಾರೂ ಬಂದಿರಲಿಲ್ಲ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಕುಮಾರ್ ರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ. ಎರಡು ವರ್ಷಗಳ ಹಿಂದೆ ಗುಜರಾತ್ ನಿಂದ ರಾಜ್ಯಸಭೆಗೆ ಅಹ್ಮದ್ ಪಟೇಲ್ ಆಯ್ಕೆಯಾಗಬೇಕಾದ ಸಂದರ್ಭದಲ್ಲಿ ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಕಾಯ್ದುಕೊಂಡಿದ್ದರು ಡಿ. ಕೆ. ಶಿವಕುಮಾರ್. ಆ ಸಂದರ್ಭದಲ್ಲೇ ಆದಾಯ ತೆರಿಗೆ ಇಲಾಖೆಯಿಂದ ಶಿವಕುಮಾರ್ ಮೇಲೆ ದಾಳಿ ಅಗಿತ್ತು.
ಡಿ. ಕೆ. ಶಿವಕುಮಾರ್ ಅವರಿಂದ ಕಾಂಗ್ರೆಸ್ ಪಕ್ಷವು ಅಂತರ ಕಾಯ್ದುಕೊಳ್ಳುತ್ತಿದೆ ಎಂಬ ಗುಮಾನಿ ಶುರುವಾಗಿರುವ ಸಂದರ್ಭದಲ್ಲಿ ಕೇಂದ್ರ ನಾಯಕತ್ವವು ಎಚ್ಚೆತ್ತುಕೊಂಡು, ಅಹ್ಮದ್ ಪಟೇಲ್ ಭೇಟಿ ಮೂಲಕ ಡ್ಯಾಮೇಜ್ ಕಂಟ್ರೋಲ್ ಗೆ ಪ್ರಯತ್ನಿಸಿದೆ.












Click it and Unblock the Notifications