ಬೆಳ್ಳಂದೂರು ಕೆರೆ ಬೆಂಕಿ ಹಿಂದೆ ಯಾರದ್ದೊ ಕೈವಾಡ: ಕೆ.ಜೆ.ಜಾರ್ಜ್
ಬೆಂಗಳೂರು, ಫೆಬ್ರವರಿ 05: ಬೆಳ್ಳಂದೂರು ಕೆರೆಯಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಿಂದೆ ಯಾರದ್ದೊ ಕೈವಾಡ ಇದೆ ಎಂದು ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅನುಮಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ (ಭಾನುವಾರ) ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ (ಎನ್ಜಿಟಿ) ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಮೀಪಿಸುತ್ತಿದ್ದಂತೆ ಇಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರ ಹಿಂದೆ ಯಾರದೋ ಕೈವಾಡ ಇರುವಂತಿದೆ' ಎಂದರು.
ಬೆಳ್ಳಂದೂರು ಕೆರೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, 'ಉದ್ದೇಶಪೂರ್ವಕವಾಗಿಯೇ ಕೆರೆಗೆ ಬೆಂಕಿ ಹಚ್ಚಿದ್ದಾರೆಯೇ ಅಥವಾ ನೈಸರ್ಗಿಕವಾಗಿ ಹೊತ್ತಿಕೊಂಡಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ, ನೀರಿನಲ್ಲಿ ಶೇ 0.01ರಷ್ಟು ಮೀಥೇನ್ ಅಂಶ ಇದೆ. ಆದರೆ, ಇದರಿಂದಾಗಿ ಬೆಂಕಿ ಹೊತ್ತಿಕೊಂಡಿಲ್ಲ. ಒಣ ಹುಲ್ಲಿನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದರು.

'ಕೆರೆಗೆ ನೀರಿನ ಒಳಹರಿವು ಹಾಗೂ ಹೊರಹರಿವು ನಿಯಂತ್ರಿಸಲು ಸ್ಲೂಸ್ ಗೇಟ್ (ಜಾರು ಬಾಗಿಲು) ಅಳವಡಿಸಲಾಗುತ್ತಿದೆ. ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಏರೇಟರ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೆರೆ ಮೇಲ್ವಿಚಾರಣಾ ಸಮಿತಿ ಸರ್ಕಾರದ ಕಾರ್ಯವೈಖರಿ ಟೀಕಿಸಿದೆ. ಆದರೆ, ಸರ್ಕಾರ ಕೆರೆ ಉಳಿವಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅದು ಗಮನ ವಹಿಸಬೇಕು' ಎಂದು ಅವರು ಹೇಳಿದರು.
'ಕೆರೆಯ ಸುತ್ತಲೂ ಇರುವ ಅನಧಿಕೃತ ಕೈಗಾರಿಕೆಗಳನ್ನು ಮುಚ್ಚಿಸುತ್ತೇವೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಜಲಮೂಲಕ್ಕೆ ಕೊಳಚೆ ನೀರು ಸೇರುವ ಕಡೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್ಟಿಪಿ) ಸ್ಥಾಪಿಸಲಾಗುತ್ತಿದೆ. 2020ರ ವೇಳೆಗೆ ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.












Click it and Unblock the Notifications