ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಸ್ಫೋಟ; 6 ಮಂದಿಗೆ ಗಾಯ
ಬೆಂಗಳೂರು, ಜೂನ್ 07: ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾರ್ಗೋ ಕಾಂಪ್ಲೆಕ್ಸ್ ಎದುರಿನ ಅಂಡರ್ ಪಾಸ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡುವ ವೇಳೆ ಅವಘಡ ಸಂಭವಿಸಿದೆ. ಯಂತ್ರಕ್ಕೆ ಇಟ್ಟಿದ್ದ ಸಿಲಿಂಡರ್ ಸ್ಫೋಟವಾಗಿರುವುದಾಗಿ ತಿಳಿದುಬಂದಿದೆ. ನಿಲ್ದಾಣದ ವಿಸ್ತರಣೆ ಹಾಗೂ ಎರಡನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿತ್ತು. ನಿಲ್ದಾಣ ವ್ಯಾಪ್ತಿಯ ಜಾಗದಲ್ಲಿ ಹೊಸ ರಸ್ತೆ ನಿರ್ಮಿಸಲಾಗುತ್ತಿತ್ತು.

ಕೆಳ ಸೇತುವೆಯಲ್ಲಿ ಬಣ್ಣ, ರಾಸಾಯನಿಕಗಳ ಬಾಕ್ಸ್ಗಳು ಹಾಗೂ ಇತರೆ ಸಲಕರಣೆಗಳನ್ನು ಇರಿಸಲಾಗಿತ್ತು. ಸ್ಫೋಟದ ರಭಸಕ್ಕೆ ಕ್ಯಾಂಟರ್ ಸುಟ್ಟು ಕರಕಲಾಗಿದೆ. ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಆರು ಮಂದಿಗೆ ಗಾಯವಾಗಿದೆ.
ಸ್ಫೋಟದ ನಂತರ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಎಲ್ಲಾ ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಿನಾಶ್, ಸಿರಾಜ್, ಪ್ರಶಾಂತ್, ಗೌತಮ್, ಅಜಯ್ ಕುಮಾರ್ ಹಾಗೂ ನಾಗೇಶ್ ರಾವ್ ಗಾಯಗೊಂಡಿದ್ದಾರೆ.
ಅಂಡರ್ ಪಾಸ್ನಲಿ ಸ್ಫೋಟವಾದ ಹಿನ್ನೆಲೆ ಭಾರಿ ಅನಾಹುತ ತಪ್ಪಿದೆ. ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications