ಮತ್ತಷ್ಟು ಸುಗಮವಾಗಲಿದೆ ಬೆಂಗಳೂರು-ಮೈಸೂರು ಪ್ರಯಾಣ
ಬೆಂಗಳೂರು, ಡಿಸೆಂಬರ್ 21: ಬೆಂಗಳೂರು-ಮೈಸೂರಿನ ನಡುವೆ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರದಿಂದ ಹಸಿರು ನಿಶಾನೆ ದೊರೆತಿದ್ದು , ಸಾಂಸ್ಕೃತಿಕ ನಗರಿ-ಉದ್ಯಾನ ನಗರಿಯ ನಡುವಿನ ಪ್ರಯಾಣ ಇನ್ನು ಮುಂದೆ ಇನ್ನಷ್ಟು ಸುಗಮವಾಗಲಿದೆ.
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು, ಅವರು ಜನವರಿ ಅಂತ್ಯದ ವೇಳೆಗೆ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ, ಪ್ರಸ್ತುತ ಟೆಂಡರ್ ಕರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬೆಂಗಳೂರು-ಮೈಸೂರು ರಾಜ್ಯದ ಪ್ರಮುಖ ವಾಣಿಜ್ಯ ನಗರಗಳಾಗಿದ್ದು ಇವುಗಳ ನಡುವೆ ಸಂಚಾರ ದಟ್ಟಣೆ ಹೆಚ್ಚಿದೆ ಹಾಗಾಗಿ ಬಹಳ ದಿನಗಳಿಂದಲೂ ಷಟ್ಪಥ ರಸ್ತೆಗೆ ಬೇಡಿಕೆ ಇಡಲಾಗಿತ್ತು, ಈಗ ಅದು ಸಾಕಾರಗೊಳ್ಳುವ ಮುನ್ಸೂಚನೆ ಕಾಣುತ್ತಿದೆ. ರಸ್ತೆ ನಿರ್ಮಾಣವಾದ ನಂತರ ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಪ್ರಯಾಣ ಸಾಧ್ಯವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

7000 ಕೋಟಿ ವೆಚ್ಚ
ಬೆಂಗಳೂರು-ಮೈಸೂರು ನಡುವಿನ ಆರು ಪಥ ರಸ್ತೆ 7000 ಕೋಟಿ ವೆಚ್ಚದ ಕಾಮಗಾರಿ ಆಗಿರಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅತ್ಯುತ್ತಮ ಗುಣಮಟ್ಟದ ರಸ್ತೆ ಇದಾಗಲಿದ್ದು, ಪ್ರಯಾಣಿಕರ ಸುರಕ್ಷತೆ, ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ. ಕಾಮಗಾರಿಯ ವೆಚ್ಚದ 50ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ ಇನ್ನುಳಿದ 50ರಷ್ಟು ಹಣವನ್ನು ಗುತ್ತಿಗೆದಾರರು ಸಾಲ ಮಾಡಿ ವಿನಿಯೋಗಿಸಲಿದ್ದಾರೆ. ಟೋಲ್ ಮೂಲಕ ಸಂಗ್ರಹವಾದ ಹಣದ ಮೂಲಕ ಸಾಲ ಮರುಪಾವತಿ ಮಾಡಲಿದ್ದಾರೆ.

ದರ ಕಡಿಮೆ?
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಟೋಲ್ ಪ್ಲಾಜಾಗಳು ನಿರ್ಮಾಣವಾಗಲಿವೆ, ಪ್ರಯಾಣಿಕರು ಪ್ರಯಾಣಿಸುವ ದೂರಕ್ಕಷ್ಟೆ ಹಣ ನೀಡುವ ವ್ಯವಸ್ಥೆಯನ್ನು ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರಿಚಯಿಸಲಾಗುತ್ತದೆ ಎಂದಿದ್ದಾರೆ ಸಚಿವರು. ಬೆಲೆಯೂ ಕಡಿಮೆ ಇರುತ್ತದೆ ಎಂದು ಮಹದೇವಪ್ಪ ಮಾಹಿತಿ ನೀಡಿದ್ದಾರೆ. ಈ ರಸ್ತೆ ಎರಡು ಸರ್ವಿಸ್ ರಸ್ತೆ ಇರಲಿದೆ.

ಬೆಂಗಳೂರಿನಿಂದ ಪ್ರಾರಂಭ
ಮೊದಲನೇ ಹಂತದಲ್ಲಿ ಬೆಂಗಳೂರು ವಿವಿಯಿಂದ ನಿಡಘಟ್ಟದವರೆಗೆ 56 ಕಿ.ಮೀ ಉದ್ದದ ರಸ್ತೆಯನ್ನು 1989 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ, ಎರಡನೇ ಹಂತದಲ್ಲಿ ನಿಡಘಟ್ಟದಿಂದ ಮೈಸೂರಿನ ವರೆಗೆ 7169 ಕೋಟಿ ವೆಚ್ಚದಲ್ಲಿ 66 ಕಿ.ಮೀ ರಸ್ತೆ ನಿರ್ಮಾಣ ಆಗಲಿದೆ.

ನಿತಿನ್ ಗಡ್ಕರಿ ಸೂಚಿಸಿದ್ದಕ್ಕೆ ಪ್ರಸ್ತಾವನೆ
ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಗೆ ವಾರ್ಷಿಕ 7000 ಕೋಟಿ ನೀಡುವಂತೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಂಚೆ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಗೆ 1000 ಕೋಟಿಗಿಂತಲೂ ಕಡಿಮೆ ಹಣ ನೀಡುತ್ತಿದ್ದು. 2013-14ರ ನಂತರ ವಾರ್ಷಿಕ 3000-4000 ಕೋಟಿ ಬಿಡುಗಡೆ ಆಗುತ್ತಿದೆ. ಆದರೆ ಇತ್ತೀಚೆಗೆ ಗೋವಾದಲ್ಲಿ ನಡೆದ ಸಭೆಯಲ್ಲಿ ನಿತಿನ್ ಗಡ್ಕರಿ ಅವರು ಹೊಸ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರಿಂದ 7000 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications