ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರಗೆ ಕೊರೊನಾ ವೈರಸ್
ಬೆಂಗಳೂರು, ನವೆಂಬರ್ 9: ಶಿರಾ ವಿಧಾನಸಭೆ ಉಪ ಚುನಾವಣೆಯ ಚುನಾವಣೆಯ ಹಿಂದಿನ ದಿನವೇ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಅವರು ಕೋವಿಡ್ 19 ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಮಂಗಳವಾರ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಅದಕ್ಕೂ ಮೊದಲೇ ಅಭ್ಯರ್ಥಿ ಟಿಬಿ ಜಯಚಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಿಬಿ ಜಯಚಂದ್ರ ಅವರ ಪತ್ನಿ ಜಿಎಚ್ ನಿರ್ಮಲಾ ಅವರಿಗೂ ಕೋವಿಡ್ ಸೋಂಕು ಪಾಸಿಟಿವ್ ಎಂಬ ವರದಿ ಬಂದಿದೆ.
Recommended Video
ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಸಂಗತಿಯನ್ನು ಜಯಚಂದ್ರ (71) ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ತೀವ್ರವಾದ ಕೆಮ್ಮಿನಿಂದ ಅವರು ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
'ನನ್ನ ಶ್ರೀಮತಿಯವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ನಾನು ಕೂಡ ವಿಕ್ರಂ ಆಸ್ಪತ್ರೆಯಲ್ಲಿ ಇಂದು ಪರೀಕ್ಷೆ ಮಾಡಿಸಿದ್ದು. ನನಗೂ ಪಾಸಿಟಿವ್ ಬಂದಿದೆ. ಹೀಗಾಗಿ ನಾಳಿನ ಮತ ಎಣಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ನಿಮ್ಮೆಲ್ಲ ಪರಿಶ್ರಮದಿಂದ ಚುನಾವಣೆ ನಡೆದಿದೆ' ಎಂದು ಟಿಬಿ ಜಯಚಂದ್ರ ಹೇಳಿದ್ದಾರೆ.
'ನೀವು ಎದೆಗುಂದದೆ ಧೈರ್ಯದಿಂದ ಮತ ಎಣಿಕೆಯಲ್ಲಿ ಪಾಲ್ಗೊಳ್ಳಿ. ನಮ್ಮ ಕಾರ್ಯಕರ್ತರು, ಮುಖಂಡರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂಬ ನಂಬಿಕೆ ಇದೆ. ಆದಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗಿ ನಿಮ್ಮನ್ನು ಭೇಟಿಯಾಗಿ ಕೃತಜ್ಞತೆ ಹೇಳುವ ಪ್ರಯತ್ನ ಮಾಡುತ್ತೇನೆ. ನಾಳೆ ಜಯ ನಮ್ಮದು, ಜಯ ನಮಗೆ ಕಟ್ಟಿಟ್ಟ ಬುತ್ತಿ. ನನ್ನ ಗೈರು ಹಾಜರಿಗೆ ಯಾರೂ ಬೇಸರ ಪಟ್ಟುಕೊಳ್ಳಬೇಡಿ' ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
ಕೋವಿಡ್ ಪಾಸಿಟಿವ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ.
— T B Jayachandra (@JayachandraTB) November 9, 2020
ನಾಳಿನ ಮತ ಎಣಿಕೆಗೆ ಭಾಗವಹಿಸಲು ಆಗುವುದಿಲ್ಲ, ನಿಮ್ಮೆಲ್ಲರ ಶ್ರಮ ಹಾಗೂ ಆಶೀರ್ವಾದ ಗೆಲುವಿನ ಫಲಿತಾಂಶ ನೀಡಲಿದೆ ಎಂಬ ವಿಶ್ವಾಸದಲ್ಲಿ ...🙏 pic.twitter.com/YKMTKPQLSS
ಶಿರಾ ವಿಧಾನಸಭೆ ಕ್ಷೇತ್ರ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ಬಿಜೆಪಿಯ ಸಿಎಂ ರಾಜೇಶ್ ಗೌಡ, ಜೆಡಿಎಸ್ನ ಅಮ್ಮಾಜಮ್ಮ ಹಾಗೂ ಕಾಂಗ್ರೆಸ್ನ ಟಿಬಿ ಜಯಚಂದ್ರ ಪ್ರಮುಖ ಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದಾರೆ.