"ದೊಡ್ಡ ಕಂಪನಿಗಳು ಸಿಲಿಕಾನ್ ಸಿಟಿ ಬಿಟ್ಟು ಅನ್ಯ ರಾಜ್ಯಗಳತ್ತ ಮುಖ ಮಾಡಿವೆ"
ಬೆಂಗಳೂರಿನಲ್ಲಿ ರಸ್ತೆ ಅವ್ಯವಸ್ಥೆಯಿಂದ ಬೆಂಗಳೂರಿನಿಂದ ಬೇರೆ ಊರುಗಳಿಗೆ / ಸ್ಥಳಾಂತರಗೊಳ್ಳಲಿದ್ದೇವೆ ಎಂದು ಕೆಲವೊಂದು ಐಟಿ ಕಂಪನಿಗಳು ಹೇಳಿರುವ ಬೆನ್ನಲ್ಲೇ ಇದು ರಾಜಕೀಯ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ವಿವಿಧ ಭಾಗದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚಳವಾಗಿದೆ ಎನ್ನುವ ಆರೋಪವು ಜನ ಸಾಮಾನ್ಯರಿಂದ ಕೇಳಿ ಬರುತ್ತಿದೆ. ಇದೀಗ ಈ ವಿಚಾರವಾಗಿ ರಾಜ್ಯ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಮುಗಿಬಿದ್ದಿವೆ.
ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಮೂಲಸೌಕರ್ಯ ಕಡೆಗಣಿಸಿದ್ದರಿಂದ ದೊಡ್ಡ ದೊಡ್ಡ ಕಂಪನಿಗಳು ಸಿಲಿಕಾನ್ ಸಿಟಿ ಬಿಟ್ಟು ಅನ್ಯ ರಾಜ್ಯಗಳತ್ತ ಮುಖ ಮಾಡಿವೆ. ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬಿದ್ದಿರುವ ತೆಗ್ಗುಗುಂಡಿ ಹಾಗೂ ಮೂಲಸೌಕರ್ಯ ಕೊರತೆಯಿಂದ ಓಡಾಡದಂತಾಗಿದೆ.! ಹೀಗಾಗಿ ಇಲ್ಲಿಂದ ಹೊರಹೋಗಲು ನಾವು ನಿರ್ಧರಿಸಿದ್ದೇವೆ ಎಂದು ಬ್ಲಾಕ್ ಬಕ್ ಕಂಪನಿ ಸಿಇಒ ಎಕ್ಸ್ನಲ್ಲಿ ಬರೆದುಕೊಂಡಿರುವುದು ಬೆಂಗಳೂರಿನಲ್ಲಿ ಮೂಲಸೌಕರ್ಯ ಪಾತಾಳ ಕಂಡಿರುವುದರ ಧ್ಯೋತಕವಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತುಘಲಕ್ ಆಡಳಿತದ ವಿರುದ್ಧ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರೂ ಕ್ರಮವಹಿಸಿಲ್ಲ. ಕಾಂಗ್ರೆಸ್ ದುರಾಡಳಿತದಿಂದಾಗಿ ಬೆಂಗಳೂರು ಹೂಡಿಕೆದಾರರ ಆಕರ್ಷಣೆ ಕಳೆದುಕೊಂಡಿದೆ ಹಾಗೂ ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಅಧ:ಪತನಕ್ಕೆ ಜಾರುತ್ತಿದೆ. ಸ್ವಾಮಿ ಸಿದ್ದರಾಮಯ್ಯನವರೇ ಇರುವ ಕಂಪನಿಗಳು ಗಂಟುಮೂಟೆ ಕಟ್ಟುವ ಮುನ್ನ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆ ಬಗೆಹರಿಸಿ, ಉದ್ಯಮಿಗಳ ಬೇಡಿಕೆಗೆ ಸ್ಪಂದಿಸಿ ಎಂದು ಹೇಳಲಾಗಿದೆ.
ಅಲ್ಲದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ, ಹದಗೆಟ್ಟ ರಸ್ತೆಗಳಿಂದ ಬೆಂಗಳೂರಲ್ಲಿ ಬದುಕಲು ಮತ್ತು ಕೆಲಸ ಮಾಡಲು ಕಷ್ಟವಾಗಿ ಕಂಪನಿಗಳು ಹೊರಹೋಗಲು ನಿರ್ಧರಿಸಿವೆ. ಸ್ಟಾರ್ಟ್ಅಪ್ ಗಳು ನಿಮ್ಮ ಆಡಳಿತಕ್ಕೆ ಬೇಸತ್ತು 'EXIT' ಆಗಲು ನಿರ್ಧರಿಸಿದಂತೆಯೇ ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನರು ಈ ಕಾಂಗ್ರೆಸ್ ಸರ್ಕಾರಕ್ಕೆ 'EXIT' ತೋರಿಸುವುದು ಖಚಿತ, ಖಂಡಿತ, ನಿಶ್ಚಿತ ಎಂದು ಸರಣಿ ಟ್ವೀಟ್ ಮಾಡಲಾಗಿದೆ.
ಅಲ್ಲದೇ ಗಾರ್ಡನ್ ಸಿಟಿ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತವು ಗಾರ್ಬೇಜ್ ಸಿಟಿ ಎಂಬ ಕುಖ್ಯಾತಿ ತಂದು ಕೊಟ್ಟಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಬ್ರ್ಯಾಂಡ್ ಬೆಂಗಳೂರಿನ ಹೆಸರಿನಲ್ಲಿ ಮಾಡುತ್ತಿರುವ ದರೋಡೆ ನಿಲ್ಲಿಸಿ, ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿ ಎಂದು ಟ್ವೀಟ್ ಮಾಡಲಾಗಿದೆ.












Click it and Unblock the Notifications