ಡಿಕೆಶಿಗೆ ಗೃಹ ಖಾತೆ ಕೊಡಲು ಹೇಳಿದ್ದ ಹೈಕಮಾಂಡ್ ಗೆ ಸಿಎಂ ಹೇಳಿದ್ದೇನು?
ಕರ್ನಾಟಕ ಗೃಹ ಖಾತೆಯನ್ನು ಡಿಕೆಶಿ ಅವರಿಗೆ ನೀಡಲು ಸಿಎಂ ಸಿದ್ದರಾಮಯ್ಯ ನಕಾರ. ಐಟಿ ರೈಡ್ ಬೆನ್ನಲ್ಲೇ ಡಿಕೆಶಿಗೆ ಗೃಹ ಖಾತೆ ನೀಡಿದರೆ ವಿವಾದವಾಗುತ್ತದೆ ಎಂಬ ಭೀತಿ.
Recommended Video
ಬೆಂಗಳೂರು, ಆಗಸ್ಟ್ 30: ಹಾಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಶೀಘ್ರದಲ್ಲೇ ನಡೆಯಲಿರುವ ಸಂಪುಟ ಪುನರಾಚನೆ ವೇಳೆ ಗೃಹ ಖಾತೆ ನೀಡುವಂತೆ ಖುದ್ದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದಕ್ಕೆ ಒಪ್ಪಿಲ್ಲವೆಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹಿರಿಯ ನಾಯಕ ಜಿ. ಪರಮೇಶ್ವರ್ ಅವರ ರಾಜಿನಾಮೆಯಿಂದ ತೆರವಾಗಿರುವ ಗೃಹ ಇಲಾಖೆ ಸದ್ಯಕ್ಕೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಕಾರ್ಯ ನಿರ್ವಹಿಸುತ್ತಿದೆ.
ಡಿಕೆ ಶಿವಕುಮಾರ್ ಆಪ್ತ ವಿಜಯ್ ಮುಳಗುಂದ ಮನೆ ಮೇಲೆ ಐಟಿ ದಾಳಿ
ಈ ಮಹತ್ವದ ಇಲಾಖೆಗೆ ಸೂಕ್ತ ವ್ಯಕ್ತಿಯನ್ನೇ ಆರಿಸಲು ಸಿದ್ದರಾಮಯ್ಯ ಆಲೋಚಿಸುತ್ತಿದ್ದು ಆ ಸ್ಥಾನಕ್ಕೆ ಹಾಲಿ ಅರಣ್ಯ ಸಚಿವ ರಮಾನಾಥ್ ರೈ ಅವರನ್ನು ತಂದು ಕೂರಿಸುವ ಆಲೋಚನೆಯನ್ನು ಅವರು ಹೊಂದಿದ್ದಾರೆನ್ನಲಾಗಿದೆ.
ಆದರೆ, ಹೈಕಮಾಂಡ್ ಪ್ರಕಾರ, ಡಿಕೆ ಶಿವಕುಮಾರ್ ಅವರಿಗೆ ಆ ಸ್ಥಾನ ಸಿಗಬೇಕು. ಹಾಗಾದರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ಮಾಡಿರುವ ಸೇವೆಗೆ ಸೂಕ್ತ ಗೌರವ ಕೊಟ್ಟಂತಾಗುತ್ತದೆ ಎಂದು ಅದು ಚಿಂತನೆ ನಡೆಸಿದೆ.
ಡಿಕೆಶಿ ಬೆಂಬಲಿಗ, ಐಟಿ ದಾಳಿಗೆ ಗುರಿಯಾಗಿದ್ದ ವರಪ್ರಸಾದ್ ರೆಡ್ಡಿ ಬಿಜೆಪಿಗೆ
ಇದರಿಂದ, ಡಿಕೆಶಿ ಅವರಲ್ಲಿನ ಉತ್ಸಾಹ ಹೆಚ್ಚಾಗಿ, ಮುಂದಿನ ಚುನಾವಣೆ ವೇಳೆಗೆ ಪಕ್ಷದ ಸಂಘಟನೆಗೂ ಅದು ಸಹಾಯಕ್ಕೆ ಬರುತ್ತದೆ ಎಂಬುದು ಅದರ ಆಲೋಚನೆ. ಆದರೆ, ಇದಕ್ಕೆ ಸಿದ್ದರಾಮಯ್ಯ ಅಸಮ್ಮತಿ ಸೂಚಿಸಿದ್ದಾರೆಂದು ಹೇಳಲಾಗಿದೆ.
ಹೈಕಮಾಂಡ್ ಏಕೆ ಡಿಕೆಶಿ ಅವರಿಗೆ ಈ ಹುದ್ದೆ ನೀಡಲು ನಿರ್ಧರಿಸಿತು? ಸಿದ್ದರಾಮಯ್ಯ ಅವರು ಏಕೆ ಅಸಮ್ಮತಿ ಸೂಚಿಸಿದರು ಎಂಬಿತ್ಯಾದಿ ಪ್ರಶ್ನೆಗಳಿಗೆ ಸೂಕ್ತ ಉತ್ತರ ಇಲ್ಲಿದೆ.
ಕಾಂಗ್ರೆಸ್ ಗೆ ನೆರವಾಗಿರುವ ಡಿಕೆಶಿ ಮೇಲೆ ವಿಶ್ವಾಸ
ಡಿಕೆಶಿ ಅವರಿಗೆ ಗೃಹ ಇಲಾಖೆ ನೀಡಲು ಹೈಕಮಾಂಡ್ ನಿರ್ಧರಿಸಿರುವುದರ ಹಿಂದೆ ಬಲವಾದ ಕಾರಣವೂ ಇದೆ. ಇತ್ತೀಚೆಗೆ, ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆಬೆಂಗಳೂರು ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಎಲ್ಲಾ ಶಾಸಕರಿಗೆ ವಾಸ್ತವ್ಯ ಕಲ್ಪಿಸಿ, ಅವರು ಕುದುರೆ ವ್ಯಾಪಾರಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಿದ್ದರು ಶಿವಕುಮಾರ್. ಇದರಿಂದಾಗಿ ಗುಜರಾತ್ ನಲ್ಲಿ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿದ್ದ ರಾಜ್ಯಸಭಾ ಸದಸ್ಯ ಸ್ಥಾನವೊಂದನ್ನು ಗೆಲ್ಲಲು ಸಾಧ್ಯವಾಗಿತ್ತು. ಇದು ಹೈಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿದೆ.
ಡಿಕೆಶಿ ದಿಟ್ಟತನದ ಬಗ್ಗೆ ಮೆಚ್ಚುಗೆ
ತಮ್ಮ ಮನೆ ಮೇಲೆ ಐಟಿ ರೈಡ್ ಆದರೂ, ಎದೆಗುಂದದೇ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆತಿಥ್ಯ ನೀಡಿದ್ದು ಹೈಕಮಾಂಡ್ ಮನಗೆದ್ದಿದೆ. ಇದೇ ಕಾರಣಕ್ಕಾಗಿಯೇ ಇತ್ತೀಚೆಗೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ರಾಯಚೂರಿಗೆ ಭೇಟಿ ನೀಡಿದ್ದಾಗ ಶಿವಕುಮಾರ್ ಜತೆಗೆ ಪ್ರತ್ಯೇಕವಾಗಿ ಮಾತನಾಡಿ, ಪಕ್ಷದಲ್ಲಿ ಮತ್ತಷ್ಟು ಮಹತ್ವದ ಜವಾಬ್ದಾರಿ ನೀಡುವ ಭರವಸೆಯನ್ನೂ ನೀಡಿದ್ದರು. ಇದರ ಫಲವಾಗಿಯೇ, ಅವರಿಗೆ ಗೃಹ ಇಲಾಖೆ ನೀಡಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್ ನ ಆಶಯವಾಗಿದೆ.
ಏಕೆ ಅವರು ಹೈಕಮಾಂಡ್ ಮಾತನ್ನು ಒಪ್ಪುತ್ತಿಲ್ಲ?
ಹೈಕಮಾಂಡ್ ಆಲೋಚನೆಯನ್ನು ಸಿದ್ದರಾಮಯ್ಯ ಅವರು ಒಪ್ಪದೇ ಇರುವುದಕ್ಕೂ ಒಂದು ಸಕಾರಣವಿದೆ. ಇತ್ತೀಚೆಗಷ್ಟೇ, ಶಿವಕುಮಾರ್ ಮನೆ ಮೇಲೆ ಐಟಿ ರೈಡ್ ಆಗಿದೆ. ಅದರ ಬೆನ್ನಲ್ಲೇ ಅವರಿಗೆ ಗೃಹ ಇಲಾಖೆಯಂಥ ಮಹತ್ವದ ಇಲಾಖೆ ವಹಿಸಿದರೆ ಅದು ವಿವಾದಕ್ಕೆ ಕಾರಣವಾಗುತ್ತದೆ ಎಂಬುದು ಅವರ ವಾದ.
ಸುಮ್ಮನೇ ವಿವಾದವೇಕೆ ಎಂಬ ಪ್ರಶ್ನೆ ಸಿಎಂ ಅವರದ್ದು
ಡಿಕೆಶಿ ನಿವಾಸದ ಮೇಲಿನ ಐಟಿ ರೈಡ್ ರಾಜಕೀಯ ದುರುದ್ದೇಶದಿಂದ ಕೂಡಿದ್ದರೂ, ಅವರು ಅಕ್ರಮವಾಗಿ ಹಣ ಮಾಡಿದ್ದಾರೆಂದು ಬಿಜೆಪಿಯು ಈಗಾಗಲೇ ಅಪಾರ ಪ್ರಮಾಣದಲ್ಲಿ ಪ್ರಚಾರ ಮಾಡಿದೆ. ಇಂಥ ಸಂದರ್ಭದಲ್ಲಿ, ಡಿಕೆಶಿ ಅವರಿಗೆ ಗೃಹ ಖಾತೆ ನೀಡಿದರೆ, ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಿದಂತಾಗುತ್ತದೆ ಎಂಬುದು ಸಿದ್ದರಾಮಯ್ಯ ಅವರ ಅನಿಸಿಕೆಯಾಗಿದೆ.