ಜಮೀರ್ ಅಹ್ಮದ್ ಪ್ರೀತಿಯ ಆಹ್ವಾನಕ್ಕೆ ಸಿದ್ದರಾಮಯ್ಯ ಫುಲ್ ಸ್ಟಾಪ್
ಬೆಂಗಳೂರು, ಆಗಸ್ಟ್ 16: ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸ/ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿಯ ನಂತರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜಮೀರ್ ನಡುವಿನ ಸಂಬಂಧ ಹಳಸಿದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು.
ಇದಾದ ಮೇಲೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಮೀರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಭೇಟಿಗೂ ವಿಶೇಷ ರಾಜಕೀಯ ಅರ್ಥ ಕಲ್ಪಿಸಲಾಗಿತ್ತು. ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಕಾಣಿಸಿಕೊಳ್ಳುವ ಜಮೀರ್ ಅವರನ್ನು ತಮ್ಮತ್ತ ಸೆಳೆಯುವ ತಂತ್ರಗಾರಿಕೆ ಎಂದು ವ್ಯಾಖ್ಯಾನಿಸಲಾಗಿತ್ತು.
ಸಿದ್ದರಾಮಯ್ಯನವರ ಹುಟ್ಟಿದ ಹಬ್ಬದ ದಿನದಂದು ಅವರು ಮಾಧ್ಯಮ ಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಜಮೀರ್ ಅಹ್ಮದ್, ಹೈದರಾಬಾದಿನಿಂದ ಕರೆ ಮಾಡಿದ್ದರು. ಆ ಸಂದರ್ಭದಲ್ಲಿ, ನಿವಾಸಕ್ಕೆ ಬರುವಂತೆ ಸಿದ್ದರಾಮಯ್ಯ ಅವರನ್ನು ಜಮೀರ್ ಆಹ್ವಾನಿಸಿದ್ದರು.
ಅದರಂತೆಯೇ, ಸಿದ್ದರಾಮಯ್ಯನವರು ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯದಿನದ ಕಾರ್ಯಕ್ರಮ ಮುಗಿಸಿದ ನಂತರ ಜಮೀರ್ ಅವರ ಮನೆಗೆ ಊಟಕ್ಕೆ ತೆರಳಿದ್ದರು. ಅಲ್ಲಿಗೆ, ಸಿದ್ದರಾಮಯ್ಯ ಮತ್ತು ಜಮೀರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವ ಸುದ್ದಿಗೆ ತೆರೆಬಿದ್ದಿತ್ತು. ಆದರೆ, ಜಮೀರ್ ಅವರ ಆಹ್ವಾನವನ್ನು ಸಿದ್ದರಾಮಯ್ಯ ನಯವಾಗಿ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜಮೀರ್ ಸಮರ್ಥಿಸಿಕೊಳ್ಳುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದರು
ಮುಂದಿನ ನಾಯಕತ್ವದ ವಿಚಾರವನ್ನು ಜಮೀರ್ ಅಹ್ಮದ್ ಖಾನ್ ಅವರು ಪ್ರಸ್ತಾವಿಸುವ ಮೂಲಕ, ಕೆಪಿಸಿಸಿಯಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಭಾವೀ ಮುಖ್ಯಮಂತ್ರಿ ಎಂದು ಹೇಳಿದ್ದರೂ, ಸಿದ್ದರಾಮಯ್ಯ ಅವರಿಗೆ ಆ ರೀತಿಯ ಹೇಳಿಕೆ ನೀಡದಂತೆ ಮೊದಮೊದಲು ಸೂಚಿಸಿರಲಿಲ್ಲ. ನನ್ನ ಮೇಲಿನ ಅಭಿಮಾನಕ್ಕೆ ಅವರು ಆ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಅವರನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದರು.

ಚಾಮರಾಜಪೇಟೆ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಭಾಗಿಯಾಗುತ್ತಿದ್ದರು
ಅದರೆ ಜೊತೆಗೆ, ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸಲಿ ಎನ್ನುವ ವಿಚಾರವನ್ನೂ ಮುನ್ನಲೆಗೆ ತಂದವರು ಜಮೀರ್ ಅಹ್ಮದ್. ಅವರಿಗಾಗಿ ಸೀಟು ಬಿಟ್ಟುಕೊಡಲು ಸಿದ್ದನಿದ್ದೇನೆ ಎಂದು ಜಮೀರ್ ಹೇಳುವ ಮೂಲಕ, ಹೊಸ ಚರ್ಚೆಗೆ ನಾಂದಿ ಹಾಡಿದ್ದರು. ಇದರ ಜೊತೆಗೆ, ಚಾಮರಾಜಪೇಟೆ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಭಾಗಿಯಾಗುತ್ತಿದ್ದರು. ಇದು, ಅಲ್ಲಿಂದ ಸ್ಪರ್ಧಿಸಲಿದ್ದಾರಾ ಎನ್ನುವ ಪ್ರಶ್ನೆಗೆ ಮತ್ತಷ್ಟು ಇಂಬು ನೀಡುವಂತಿತ್ತು.

ಚಾಮರಾಜಪೇಟೆಯಿಂದ ಸ್ಪರ್ಧೆಯ ಸಿದ್ದರಾಮಯ್ಯ ಫುಲ್ ಸ್ಟಾಪ್ ನೀಡಿದ್ದಾರೆ
ಇದರ ಜೊತೆಗೆ, ಚಾಮುಂಡೇಶ್ವರಿ, ಬಾದಾಮಿ, ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎನ್ನುವ ಅಂತೆಕಂತೆ ಕಥೆಗಳು ಹರಿದಾಡುತ್ತಿದ್ದವು. ಈ ಎಲ್ಲಾ ಸುದ್ದಿಗೆ ತೆರೆ ಎಳೆದಿದ್ದ ಸಿದ್ದರಾಮಯ್ಯ ನಾನು ಸ್ಪರ್ಧಿಸುವುದು, ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಬಾದಾಮಿಯಿಂದಲೇ ಎಂದು ಹೇಳಿದ್ದರು. ಆದರೂ, ಜಮೀರ್ ಅಹ್ಮದ್ ಅವರು ಮತ್ತೆಮತ್ತೆ ಚಾಮರಾಜಪೇಟೆಯಿಂದ ಸ್ಪರ್ಧೆಯ ಬಗ್ಗೆ ಪುನರುಚ್ಚಿಸುತ್ತಲೇ ಇದ್ದರು. ಈಗ, ಅದಕ್ಕೆ ಫುಲ್ ಸ್ಟಾಪ್ ನೀಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ.
Recommended Video

ನಾನು ಎಲ್ಲಿಂದ ಕಳೆದ ಬಾರಿ ಗೆದ್ದು ಬಂದಿದ್ದೇನೋ ಅಲ್ಲಿಂದಲೇ ಸ್ಪರ್ಧಿಸುತ್ತೇನೆ
ಜಮೀರ್ ಅಹ್ಮದ್ ಮನೆಯಲ್ಲಿನ ಭೋಜನದ ನಂತರ, ಸಿದ್ದರಾಮಯ್ಯ ತಮ್ಮಾಪ್ತರ ಬಳಿ ಈ ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ ಎನ್ನುವ ಮಾಹಿತಿಯಿದೆ. ನಾನು ಚಾಮರಾಜಪೇಟೆಯಿಂದ ಸ್ಪರ್ಧಿಸಲಾರೆ, ನಾನು ಬಾದಾಮಿಯಿಂದಲೇ ಸ್ಪರ್ಧಿಸುವುದು. ನನ್ನ ಮೇಲಿನ ಅಭಿಮಾನಕ್ಕೆ ಅವನು (ಜಮೀರ್) ಚಾಮರಾಜಪೇಟೆ ಎಂದು ಹೇಳುತ್ತಿದ್ದಾನೆ. ನಾನು ಎಲ್ಲಿಂದ ಕಳೆದ ಬಾರಿ ಗೆದ್ದು ಬಂದಿದ್ದೇನೋ ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎನ್ನುವ ಮೂಲಕ ಜಮೀರ್ ಅವರ ಪ್ರೀತಿಯ ಆಹ್ವಾನವನ್ನು ನಿರಾಕರಿಸಿದ್ದಾರೆ.












Click it and Unblock the Notifications