ಕೋಮು ಗಲಭೆ: ಸೌಹಾರ್ದತೆ ಕಾಪಾಡಲು ಸಿದ್ದರಾಮಯ್ಯ ಮನವಿ
ಬೆಂಗಳೂರು, ಡಿಸೆಂಬರ್ 14 : ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಯಲ್ಲಿ ಬಹಿರಂಗವಾಗಿ ಮನವಿ ಮಾಡಿದ್ದು ಕೋಮು ಸೌಹಾರ್ದತೆ ಕಾಯ್ದುಕೊಳ್ಳುವಂತೆ ರಾಜ್ಯದ ಜನತೆಯಲ್ಲಿ ಕೋರಿದ್ದಾರೆ.
ಜಗತ್ತಿನ ಯಾವ ಧರ್ಮವೂ ಮತ್ತೊಂದು ಧರ್ಮವನ್ನು ದ್ವೇಶಿಸುವುದಿಲ್ಲ, ಕೊಲ್ಲುವುದಿಲ್ಲ, ಕತ್ತರಿಸುವ, ಒಡೆಯುವ, ಮುರಿಯುವ, ಬೆಂಕಿ ಹಚ್ಚುವ ಭಾಷೆ ಮಾತನಾಡುವುದಿಲ್ಲ.ಧರ್ಮದ ಭಾಷೆ ಪ್ರೀತಿಯೇ ಹೊರತು ದ್ವೇಷ ಅಲ್ಲ. ಧರ್ಮ ಬೆಳೆಯಬೇಕಾಗಿರುವುದು ಆತ್ಮಾವಲೋಕನದ ಮೂಲಕ. ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುವ ಮೂಲಕ ಅಲ್ಲ ಎಂದು ರಾಜ್ಯದ ಜನತೆಗೆ ತಿಳಿ ಹೇಳಿದ್ದಾರೆ.

ನಮ್ಮದು ಸೌಹಾರ್ದ ಕರ್ನಾಟಕ, ಇಲ್ಲಿ ಹಲವಾರು ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳಿವೆ. ಪ್ರಾದೇಶಿಕ ಭಿನ್ನತೆಗಳಿದೆ. ಈ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಹೋಗುವ ವಿಶಾಲ ಮನಸ್ಸು ನಮ್ಮ ಮಣ್ಣಿನಲ್ಲಿದೆ.
ಈ ಸೌಹಾರ್ದತೆಯ ನಾಡನ್ನು ನಾವು ಕಟ್ಟಿದವರಲ್ಲ. ಇದು ನಮಗೆ ಹಿರಿಯರಿಂದ ಬಂದ ಬಳುವಳಿ. ಇದನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ನೀಡುವ ಜವಾಬ್ದಾರಿ ನಮ್ಮದು.
ರಾಜ್ಯದ ಸೌಹಾರ್ದ ನೆಲೆಗೆ ಭಂಗ ತರುವ, ಜನರ ನಡುವೆ ದ್ವೇಶ ಬಿತ್ತಿ, ಹಿಂಸೆಗೆ ಪ್ರಚೋದಿಸುವ ಹುನ್ನಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ.
ಸುಳ್ಳು ಸುದ್ದಿಗಳನ್ನು ಹರಡಿ, ಶಾಂತಿ ಕದಡುವ ಶಕ್ತಿಗಳ ಮೇಲೆ ನಿಗಾ ಇಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಪ್ರಚೋದನಕಾರಿ ಸುಳ್ಳು ಸುದ್ದಿಗಳಿಗೆ ಜನರು ಕಿವಿಗೊಡಬಾರದು.
ಯಾವುದೇ ರೀತಿಯ ಪ್ರಚೋದನಕಾರಿ ಸುದ್ದಿಗಳು ಮ್ತತು ಸಂದೇಶಗಳನ್ನು ಹರಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬಾರದು. ನಾಡಿನ ಸೌಹಾರ್ದ ಪರಂಪರೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿ, ಯಾವುದೇ ಶಕ್ತಿಯನ್ನು ಸರ್ಕಾರದ ಹಾಗೂ ನಾಡಿನ ಜನತೆ ಸಹಿಸುವುದಿಲ್ಲ ಎಂದಿದ್ದಾರೆ.












Click it and Unblock the Notifications