ಕೈ ಶಾಸಕರ ಬಂಧನದಲ್ಲಿದ್ದ ಸುಧಾಕರ್ ಭೇಟಿಯಾದ ಸಿದ್ದರಾಮಯ್ಯ
ಬೆಂಗಳೂರು, ಜುಲೈ 10: ಕಾಂಗ್ರೆಸ್ ಶಾಸಕರ ಬಂಧನದಲ್ಲಿದ್ದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರನ್ನು ಶಾಸಕಾಂಗ ಪಕ್ಷ ಮುಖಂಡ ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಸುಧಾಕರ್ ಅವರನ್ನು ಕಾಂಗ್ರೆಸ್ ಶಾಸಕರು, ಮುಖಂಡರು ವಿಧಾನಸೌಧದ ಕೊಠಡಿಯೊಂದರಲ್ಲಿ ಬಲವಂತದಿಂದ ಬಂಧನದಲ್ಲಿಟ್ಟಿದ್ದರು. ಸುಧಾಕರ್ ಅವರನ್ನು ಕೂಡಿ ಹಾಕಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿ ವಿಧಾನಸೌಧಕ್ಕೆ ಕರೆಸಿಕೊಳ್ಳಲಾಯಿತು.
ಸುಧಾಕರ್ ಭೇಟಿಗೆ ಬಂದ ಸಿದ್ದರಾಮಯ್ಯ ಅವರನ್ನು ಬಿಜೆಪಿ ಶಾಸಕರು ತಡೆದರು, ಆದರೂ ಅವರು ಸುಧಾಕರ್ ಇದ್ದ ಕೊಠಡಿಯ ಒಳಗೆ ಪ್ರವೇಶಿಸಿದರು, ಬಿಜೆಪಿ ಶಾಸಕರು ಅದೇ ಕೊಠಡಿಯ ಹೊರಗೆ ಪ್ರತಿಭಟನೆ ಕೂತರು.

ಕೊಠಡಿಯ ಒಳಗೆ ಸಿದ್ದರಾಮಯ್ಯ ಅವರು ಸುಧಾಕರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜೀನಾಮೆ ವಾಪಸ್ ಪಡೆಯಬೇಕೆಂದು ಸುಧಾಕರ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, 'ಸುಧಾಕರ್ ಅವರ ಮನವೊಲಿಸಿದ್ದೇವೆ, ವೈಯಕ್ತಿಕ ಕಾರಣದಿಂದ ರಾಜೀನಾಮೆಯನ್ನು ಸುಧಾಕರ್ ನೀಡಿದ್ದಾರೆ, ಅವರು ನನ್ನನ್ನು ವೈಯಕ್ತಿಕವಾಗಿ ನನ್ನನ್ನು ಭೇಟಿ ಆಗಿ ಮಾತನಾಡುವ ಭರವಸೆ ನೀಡಿದ್ದಾರೆ' ಎಂದು ಹೇಳಿದರು.
ಸಭೆಯ ಬಳಿಕ, ಭಾರಿ ಪೊಲೀಸ್ ಭದ್ರತೆಯಲ್ಲಿ ಸುಧಾಕರ್ ಅವರು ವಿಧಾನಸೌಧದಿಂದ ಹೊರಬಂದು ನೇರವಾಗಿ ರಾಜಭವನಕ್ಕೆ ತೆರಳಿದ್ದಾರೆ.












Click it and Unblock the Notifications