ಬೆಂಗಳೂರು ವಿಶ್ವವಿದ್ಯಾಲಯ ಒಡೆದು ಮೂರು ಭಾಗ
ಬೆಂಗಳೂರು, ಮಾ.20: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದೆನಿಸಿರುವ ಬೆಂಗಳೂರು ವಿಶ್ವವಿದ್ಯಾಲಯವನ್ನು ಒಡೆದು ಮೂರು ಭಾಗ ಮಾಡಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ತೀರ್ಮಾನಿಸಿದೆ. ಬೆಂಗಳೂರು ವಿವಿ ಒಡೆಯುವ ಬಗ್ಗೆ ಎರಡನೇ ಬಾರಿಗೆ ಕಾಂಗ್ರೆಸ್ ಸರ್ಕಾರ ತೀರ್ಮಾನ ಕೈಗೊಂಡಿದೆ.
ಈ ಮುಂಚೆ ಜನವರಿ 21ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಇದೇ ತೀರ್ಮಾನ ಕೈಗೊಳ್ಳಲಾಗಿತ್ತು. ಹೀಗಾಗಿ ಬೆಂಗಳೂರು ವಿವಿ ವಿಭಜನೆ ನಿರೀಕ್ಷಿತವಾಗಿತ್ತು. ವಿವಿಗೆ ಒಳಪಡುವ ಕಾಲೇಜುಗಳ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಅತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯವನ್ನು ವಿಭಜಿಸಲು ಉನ್ನತ ಶಿಕ್ಷಣ ಖಾತೆ ಸಚಿವ ಆರ್ ವಿ ದೇಶಪಾಂಡೆ ನೇತೃತ್ವ ಉಪ ಸಮಿತಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಅಸ್ತು ಎಂದಿದೆ.

ಇದರಿಂದ ಸುಮಾರು ಐದು ಜಿಲ್ಲೆಗಳಲ್ಲಿರುವ 650ಕ್ಕೂ ಅಧಿಕ ಪದವಿ ಕಾಲೇಜುಗಳು ಪ್ರತ್ಯೇಕಗೊಳ್ಳಲಿದೆ. ಸುಮಾರು 3.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.[ಬೆಂಕಿ, ಗಾಳಿ, ಜಲ ರಕ್ಷಿತ ಅಂಕ ಪಟ್ಟಿ ಬೇಕೇ?]
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕಾಲದಲ್ಲಿ ಎನ್ ರುದ್ರಯ್ಯ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ ಈ ವಿಭಜನೆ ಕಾರ್ಯಕ್ಕೆ ಸರ್ಕಾರ ಮುಂದಾಗಿತ್ತು. ಅದರೆ, ಅಂದಿನ ರಾಜ್ಯಪಾಲ ಎಚ್.ಆರ್ ಭಾರದ್ವಾಜ್ ಅವರು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು.
250 ಕಾಲೇಜುಗಳಿಗೆ ಒಂದು ವಿ.ವಿಯನ್ನು ತೆರೆಯಲು ಶಿಫಾರಸು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ಆರ್ ವಿ ದೇಶಪಾಂಡೆ ನೇತೃತ್ವ ಉಪ ಸಮಿತಿ, ಎನ್ ರುದ್ರಯ್ಯ ಸಮಿತಿ ಹಾಗೂ ಕೆ.ಆರ್ ವೇಣುಗೋಪಾಲ್ ಸಮಿತಿ ಶಿಫಾರಸುಗಳನ್ನು ಪರಿಗಣಿಸಿ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ. [ವಿವಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್]
ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಗೆ ಹೊಸಕೋಟೆ ಸಮೀಪ ಒಂದು ವಿಶ್ವ ವಿದ್ಯಾಲಯ, ಬಿಬಿಎಂಪಿ ವ್ಯಾಪ್ತಿಗೆ ಈಗಿರುವ ಸೆಂಟ್ರಲ್ ಕಾಲೇಜು ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಮೀಸಲಾಗಿ ಜ್ಞಾನಭಾರತಿ ವಿವಿ ಉಳಿಸಗೊಳ್ಳಲಾಗುತ್ತದೆ. ಬೆಂಗಳೂರು ಉತ್ತರ ಬದಲು ಡಿವಿ ಗುಂಡಪ್ಪ ವಿಶ್ವ ವಿದ್ಯಾಲಯ ಎಂದು ಹೆಸರಿಸಲು ನಿರ್ಧರಿಸಲಾಗಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications