ಕೊನೆಗೂ 'ಕಾಲು ಜಾರಿದ್ದು' ಸಿದ್ದರಾಮಯ್ಯದೋ, ಸಿ.ಟಿ. ರವಿಯದೋ?!
ಬೆಂಗಳೂರು, ಆಸಗ್ಟ್ 30: "ಪ್ರತ್ಯೇಕ ನಾಡಧ್ವಜಕ್ಕೆ ತಾವು ಪ್ರೋತ್ಸಾಹ ನೀಡುವುದಿಲ್ಲ" ಎಂದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸಚಿವರು ಅನಗತ್ಯವಾಗಿ ವಿವಾದ ಸೃಷ್ಟಿಸಲು ಹೊರಟಿದ್ದಾರೆ" ಎಂದು ದೂರಿದರು.
ನಾಡಧ್ವಜಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ಶಾಸಕ ಸಿ.ಟಿ. ರವಿ ಅವರ ನಡುವೆ ವಾಗ್ವಾದ ಆರಂಭವಾಗಿದ್ದು, ಪರಸ್ಪರ 'ಕಾಲೆಳೆವ' ಕೆಲಸವನ್ನು ಉಭಯ ನಾಯಕರೂ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಕಾಲು ಜಾರದೆ ಎಚ್ಚರದಿಂದಿರಲಿ ಎಂಬ ಸಿ.ಟಿ. ರವಿ ಅವರ ಹೇಳಿಕೆಗೆ ಉತ್ತರ ನೀಡಿದ ಸಿದ್ದರಾಮಯ್ಯ, 'ನಾನು ಕಾಲು ಜಾರದ ಹಾಗೇ ಎಚ್ಚರದಿಂದಿದ್ದೇನೆ, ನೀವು ಸ್ಪೀಡಾಗಿ ಹೋಗಿ ಅಪಘಾತ ಮಾಡಿಕೊಳ್ಳಬೇಡಿ' ಎಂದಿದ್ದಾರೆ. ನಾಡಧ್ವಜಕ್ಕೆ ಸಂಬಂಧಿಸಿದ ಇಬ್ಬರ ನಡುವಿನ ವಾಗ್ವಾದ ಇದೀಗ ಬೇರೆ ಯಾವ್ಯಾವುದೋ ವಿಷಯಕ್ಕೆ ತಿರುಗಿದಂತಿದೆ! ಒಟ್ಟಿನಲ್ಲಿ ಕೊನೆಗೂ ಕಾಲು ಜಾರಿದ್ದು ಸಿ.ಟಿ.ರವಿಯವರದೋ, ಸಿದ್ದರಾಮಯ್ಯ ಅವರದೋ ಎಂಬುದು ಅವರಿಗೇ ಗೊತ್ತು!

ನೀವು ಜೋಪಾನ!
"ಸನ್ಮಾನ್ಯ ಸಿ.ಟಿ.ರವಿ ಅವರೇ,
ನಾನು ಕಾಲು ಜಾರದ ಹಾಗೆ ಎಚ್ಚರದಿಂದ ನಾಲ್ಕು ದಶಕಗಳ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ.
ನೀವು ಇನ್ನೂ ಯುವಕರು,
ಹೆಚ್ಚು ಸ್ಪೀಡಾಗಿ ಹೋಗ್ಬೇಡಿ, ಜೋಪಾನ.
ಅಪಘಾತ ಮಾಡಿಬಿಟ್ಟರೆ
ಎಲ್ಲ ಸಂದರ್ಭಗಳಲ್ಲಿಯೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ"- ಸಿದ್ದರಾಯ್ಯ

ಕನ್ನಡಿಗರನ್ನು ಕೆರಳಿಸಬೇಡಿ
"ಕನ್ನಡ ಮತ್ತು ಸಂಸ್ಕೃತಿ ಸಚಿವರು ನಾಡಧ್ವಜ ಅಗತ್ಯ ಇಲ್ಲ ಎಂದು ಹೇಳಿ ಕನ್ನಡಿಗರನ್ನು ಕೆರಳಿಸಿರುವುದು ಸರಿ ಅಲ್ಲ. ಮಾಡಬೇಕಾಗಿರುವ ಕೆಲಸ ಬಿಟ್ಟು ಸಚಿವರು ಅನಗತ್ಯವಾಗಿ ವಿವಾದ ಸೃಷ್ಟಿಸಲು ಹೊರಟಂತಿದೆ. ಸಚಿವರು ತಕ್ಷಣ ತಮ್ಮ ಅಭಿಪ್ರಾಯವನ್ನು ಹಿಂದಕ್ಕೆ ಪಡೆದು ನಾಡಧ್ವಜವನ್ನು ಒಪ್ಪಿಕೊಳ್ಳಬೇಕು" -ಸಿದ್ದರಾಮಯ್ಯ

ರಾಜ್ಯ ಸರ್ಕಾರವೇ ವಿರೋಧಿಸಿದರೆ ಹೇಗೆ?
"ಹಿರಿಯರಾದ ಡಾ.ಪಾಟೀಲ ಪುಟ್ಟಪ್ಪ ಮತ್ತಿತರ ಕನ್ನಡ ಹೋರಾಟಗಾರರು ನಾಡಧ್ವಜಕ್ಕಾಗಿ ಮನವಿಮಾಡಿದ್ದರು. ಆ ಬಗ್ಗೆ ಅಧ್ಯಯನ ನಡೆಸಿದ್ದ ತಜ್ಞರ ಸಮಿತಿ ವಿನ್ಯಾಸ ಗೊಳಿಸಿದ್ದ ನಾಡಧ್ವಜಕ್ಕೆ ಮನ್ನಣೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದೆವು. ಈಗ ರಾಜ್ಯ ಸರ್ಕಾರವೇ ವಿರೋಧಿಸುತ್ತಿರುವುದು ಖಂಡನೀಯ"-ಸಿದ್ದರಾಮಯ್ಯ

ನಾಡಗೀತೆ ಒಪ್ಪಿಕೊಂಡರೆ ರಾಷ್ಟ್ರಗೀತೆಗೆ ಅವಮಾನವೇ?
"ನಾವು ನಮಗೊಂದು ನಾಡಗೀತೆಯನ್ನು ಒಪ್ಪಿಕೊಂಡಿಲ್ಲವೇ?
ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜ ಹಾರಿಸಬೇಕೆಂದು ರಾಷ್ಟ್ರಧ್ವಜ ಸಂಹಿತೆ ಹೇಳಿದೆ. ಅದನ್ನು ಪಾಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಬೇರೇನು ಸಮಸ್ಯೆ ಇದೆ"-ಸಿದ್ದರಾಮಯ್ಯ

ಕನ್ನಡ ವಿರೋಧಿ ನಿಲುವು
"ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ. ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ.ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ಬಿಜೆಪಿ ಸರ್ಕಾರದ ಸರ್ಕಾರದ ನಿಲುವು ಸ್ಪಷ್ಟವಾಗಿ ಕನ್ನಡ ವಿರೋಧಿಯಾದುದು"-ಸಿದ್ದರಾಮಯ್ಯ












Click it and Unblock the Notifications