ಆಗಸ್ಟ್ 30ರಿಂದ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ವಾಹನ ಸಂಚಾರಕ್ಕೆ ಮುಕ್ತ: ಬಿಬಿಎಂಪಿ
ಬೆಂಗಳೂರು, ಆಗಸ್ಟ್ 25: ಹಲವು ಅಡ್ಡಿ ಆತಂಕಗಳ ನಡುವೆಯೇ ಬಹು ನಿರೀಕ್ಷಿತ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಆಗಸ್ಟ್ 30ರಂದು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಲೋಕೇಶ್ ಎಂ. ಮಾಹಿತಿ ನೀಡಿದ್ದಾರೆ.
ಆಗಸ್ಟ್ 15ರಂದು ಶಿವಾನಂದ ಸರ್ಕಲ್ ಉಕ್ಕಿನ ಮೇಲ್ಸೇತುವೆ ಉದ್ಘಾಟನೆ ಮಾಡಲು ಬಿಬಿಎಂಪಿ ಗುರಿ ಹೊಂದಿತ್ತು, ಆದರೆ ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿಯಾಗಿದ್ದು, ನಿಗದಿತ ವೇಳೆಗೆ ಕಾಮಗಾರಿ ಮುಗಿಸುವಲ್ಲಿ ಅಡ್ಡಿಯಾಗಿತ್ತು. ನಂತರ ಫ್ಲೈಓವರ್ ನ ಒಂದು ಭಾಗವನ್ನು ಸಾರ್ವಜನಿಕ ಓಡಾಟಕ್ಕೆ ತೆರೆಯಲಾಗಿತ್ತು.
ಬೆಂಗಳೂರು: ಪ್ರಾರಂಭವಾಗಿ ಒಂದು ವಾರದ ನಂತರ ಫ್ಲೈಓವರ್ ಕ್ಲೋಸ್: ಸಂಚಾರರ ಕಳವಳ
ಆದರೆ, ಸಾರ್ವಜನಿಕರ ಓಡಾಟಕ್ಕೆ ಮುಕ್ತವಾದ ಒಂದು ವಾರದಲ್ಲೇ ಮತ್ತೆ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ಹಾಕಲಾಗಿತ್ತು. ಫ್ಲೈಓವರ್ನ ಎರಡೂ ಬದಿಗಳಲ್ಲಿ ಬಿಬಿಎಂಪಿ ಬ್ಯಾರಿಕೇಡ್ ಹಾಕಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ಸೇತುವೆ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಡಾಂಬರೀಕರಣ ಉತ್ತಮವಾಗಿ ಹಾಕಿಲ್ಲ, ರಸ್ತೆ ಮೇಲ್ಮೈ ಸಮತಟ್ಟಾಗಿಲ್ಲ ಎಂದು ವಾಹನ ಸವಾರರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಏರಿಳಿತವಿದೆ ಎಂದು ಒಪ್ಪಿಕೊಂಡ ಬಿಬಿಎಂಪಿ
ಬಿಬಿಎಂಪಿ ಕೂಡ ಕಾಮಗಾರಿಯಲ್ಲಿನ ಲೋಪ ದೋಷಗಳನ್ನು ಒಪ್ಪಿಕೊಂಡಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಮೂರನೇ ವ್ಯಕ್ತಿಯಿಂದ ಪರಿಶೀಲನೆ ಮಾಡುವುದಾಗಿ ತಿಳಿಸಿದೆ. ಆಗಸ್ಟ್ 30ರ ವೇಳೆಗೆ ಸರಿ ಮಾಡುವುದಾಗಿ ಭರವಸೆ ನೀಡಿದೆ.
ಸೇತುವೆ ತೆರೆಯುವ ಮೊದಲು ಅಸಮ ಮೇಲ್ಮೈಗಳನ್ನು ಸಮತಟ್ಟು ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಲೋಕೇಶ್ ಹೇಳಿದ್ದಾರೆ. ಹೊಸ ಭೂಸ್ವಾಧೀನ ಯೋಜನೆ ಕೈಬಿಟ್ಟು ಬಿಬಿಎಂಪಿ ಸುಮಾರು 40 ಕೋಟಿ ಉಳಿತಾಯ ಮಾಡಿದೆ. ಇಂಡಿಯನ್ ರೋಡ್ ಕಾಂಗ್ರೆಸ್ ಮಾನದಂಡಗಳ ಪ್ರಕಾರ ಯೋಜನೆಯ ಯೋಜನೆಯನ್ನು ಮಾರ್ಪಡಿಸಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ ಎಂದು ಲೋಕೇಶ್ ಹೇಳಿದರು.
ಶಿವಾನಂದ ಸ್ಟೀಲ್ ಬ್ರಿಡ್ಜ್: ಬಿಜೆಪಿ ಅಕ್ರಮ ಎಸಗಿದೆ- ಎಎಪಿ
ಆಗಸ್ಟ್ 15ರಂದೇ ಉದ್ಘಾಟನೆಯಾಗಬೇಕಿದ್ದ ಮೇಲ್ಸೇತುವೆ
ಎಲ್ಲವೂ ಬಿಬಿಎಂಪಿ ಲೆಕ್ಕಾಚಾರದಂತೆ ನಡೆದಿದ್ದರೆ ಆಗಸ್ಟ್ 15ರಂದು ಸ್ವಾತಂತ್ಯ್ರ ಸಂಭ್ರಮದ ದಿನದಂದು ಸ್ಟೀಲ್ ಬ್ರಿಡ್ಜ್ ಉದ್ಘಾಟನೆಯಾಗಬೇಕಾಗಿತ್ತು. ಆದರೆ ಮಳೆಯ ಕಾರಣದಿಂದಾಗಿ ರ್ಯಾಂಪ್ ಮತ್ತು ಮೋರಿ ಕಾಮಗಾರಿ ವಿಳಂಬವಾದ ಕಾರಣ ಉದ್ಘಾಟನೆ ಮುಂದೂಡಲಾಗಿತ್ತು.
ಹಲವು ವರ್ಷಗಳಿಂದ ಉಕ್ಕಿನ ಮೇಲ್ಸೇತುವೆ ಉದ್ಘಾಟನೆಗೆ ಕಾಯುತ್ತಿದ್ದ ಈ ಭಾಗದ ವಾಹನ ಸವಾರರು ಉದ್ಘಾಟನೆಯಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ನಂತರ ಮಳೆ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ಕಾಮಗಾರಿ ಮುಗಿಸಿ ಒಂದು ಕಡೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು, ಈಗ ಆಗಸ್ಟ್ 30ರಿಂದ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಲಿದೆ.
ಕೆಲಸ ಆರಂಭಿಸಿ 5 ವರ್ಷಗಳ ಬಳಿಕ ಪೂರ್ಣ
ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017 ರಲ್ಲಿ ಅಡಿಪಾಯ ಹಾಕಲಾಯಿತು. ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಲು ಬಿಬಿಎಂಪಿ ಸುದೀರ್ಘ 5 ವರ್ಷ ಸಮಯ ತೆಗೆದುಕೊಂಡಿದೆ. ಕಾಮಗಾರಿ ಪೂರ್ಣಗೊಳಿಸುವ ಸಮಯದಲ್ಲಿ ಹಲವು ಅಡೆ ತಡೆಗಳು ಬಿಬಿಎಂಪಿಗೆ ಎದುರಾದವು. ಅವೆಲ್ಲವನ್ನು ನಿವಾರಣೆ ಮಾಡಿಕೊಂಡು ಅಂತಿಮವಾಗಿ ಕಾಮಗಾರಿ ಪೂರ್ಣವಾಗಿದೆ.
ಉಕ್ಕಿನ ಸೇತುವೆ 493 ಮೀಟರ್ ಉದ್ದವಾಗಿದೆ. 16 ಕಂಬಗಳನ್ನು ನಿರ್ಮಿಸಲಾಗಿದೆ. ಆರಂಭಿಕವಾಗಿ 19 ಕೋಟಿ ರುಪಾಯಿ ಇದ್ದ ಯೋಜನೆಯ ಒಟ್ಟು ವೆಚ್ಚ ಕಾಮಗಾರಿ ಮುಗಿಯುವ ವೇಳೆಗೆ 39 ಕೋಟಿ ರುಪಾಯಿಗೆ ಬಂದು ನಿಂತಿದೆ.
ಸೇತುವೆ ಉದ್ಘಾಟನೆ ಬಳಿಕ ಟ್ರಾಫಿಕ್ ಕಿರಿಕಿರಿ ಕಡಿಮೆ
ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಉಕ್ಕಿನ ಸೇತುವೆ ಯೋಜನೆ ಪೂರ್ಣಗೊಂಡ ನಂತರ, ಶಿವಾನಂದ ಸರ್ಕಲ್ ಸಿಗ್ನಲ್ನಲ್ಲಿ ಸಿಲುಕಿಕೊಳ್ಳದೆ ಸುಲಭವಾಗಿ ಮೆಜೆಸ್ಟಿಕ್, ಚಾಲುಕ್ಯ ಸರ್ಕಲ್, ಮಲ್ಲೇಶ್ವರಂ ಮತ್ತು ವಿಧಾನಸೌಧದ ಕಡೆಗೆ ಸುಲಭವಾಗಿ ಸಂಚರಿಸಬಹುದಾಗಿದೆ.
ವಾಹನ ಸವಾರರಿಗೆ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ ಮತ್ತು ಹೆಚ್ಚಿನ ವಾಹನ ಸಂಚಾರವಿರುವ ರೇಸ್ ಕೋರ್ಸ್ ರಸ್ತೆಯಿಂದ ಶೇಷಾದ್ರಿಪುರಂ ರೈಲ್ವೆ ಕೆಳಸೇತುವೆಯನ್ನು ತಲುಪಲು ಐದು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.