ಮೂರು ನಗರಸಭೆಗಳಿನ್ನು ಮಹಾನಗರ ಪಾಲಿಕೆ
ಬೆಂಗಳೂರು, ಸೆ.27 : ಶಿವಮೊಗ್ಗ, ತುಮಕೂರು, ವಿಜಾಪುರ ನಗರಸಭೆಗಳನ್ನು ಮಹಾನಗರ ಪಾಲಿಕೆಗಳಾಗಿ ಘೋಷಿಸುವುದು ಸೇರಿದಂತೆ ಹಲವು ನಿರ್ಣಯಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಭೆಯ ನಿರ್ಣಯಗಳ ಕುರಿತು ಮಾಹಿತಿ ನೀಡಿದರು. ಶಿವಮೊಗ್ಗ, ತುಮಕೂರು ಮತ್ತು ವಿಜಾಪುರ ನಗರಸಭೆಗಳನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಪ್ರತಿ ಪಾಲಿಕೆಗೆ ತಲಾ ನೂರು ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.
ಟೂರಿಸ್ಟ್ ಟ್ಯಾಕ್ಸಿ ಖರೀದಿಸುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 2 ಸಾವಿರ ಮಂದಿಗೆ 2 ಲಕ್ಷ ರೂ. ಸಹಾಯಧನ ಹಾಗೂ ಖಾಸಗಿ ಎಂಬಿಬಿಎಸ್ ಕಾಲೇಜುಗಳಿಗೆ ಅನುಮತಿ ನೀಡುವ ಸಂಬಂಧ ಪ್ರತ್ಯೇಕ ನೀತಿ ರಚನೆ ಸೇರಿದಂತೆ ಹಲವಾರು ನಿರ್ಣಯಗಳನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ. ಸಭೆಯ ನಿರ್ಣಯಗಳು

ಮಹಾನಗರ ಪಾಲಿಕೆ ಘೋಷಣೆ
ಮೂರು ಲಕ್ಷ ಜನಸಂಖ್ಯೆಗಿಂತ ಮೇಲಿರುವ ಮೂರು ನಗರಸಭೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಹಾನಗರ ಪಾಲಿಕೆಗಳಾಗಿ ಘೋಷಿಸಲಾಗಿದ್ದು, ಹಾಲಿ ಅಧ್ಯಕ್ಷ-ಉಪಾಧ್ಯಕ್ಷರು ಮೇಯರ್-ಉಪಮೇಯರ್ ಗಳಾಗಿ, ಸದಸ್ಯರು ಕಾರ್ಪೊರೇಟರ್ ಗಳಾಗಿ ಬಡ್ತಿ ಪಡೆಯಲಿದ್ದಾರೆ.
ಮಹಾನಗರ ಪಾಲಿಕೆಗಳಾಗಿ ಮೇಲ್ದರ್ಜೆಗೆ ಏರಿದ ಆರು ತಿಂಗಳೊಳಗೆ ಅಸ್ತಿತ್ವದಲ್ಲಿರುವ ನಗರಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆ ನಡೆಸಬೇಕು. ಪಾಲಿಕೆಗಳಾಗಿ ಮೇಲ್ದರ್ಜೆಗೆ ಏರಿಸಲ್ಪಟ್ಟ ಮೂರು ನಗರಗಳಿಗೆ ತಲಾ ನೂರು ಕೋಟಿ ರೂ. ಅನುದಾನ ನೀಡಲಾಗುವುದು.

2 ಲಕ್ಷ ಸಹಾಯಧನ
ಟೂರಿಸ್ಟ್ ಟ್ಯಾಕ್ಸಿ ಓಡಿಸಿ ಸ್ವಯಂ ಉದ್ಯೋಗ ಮಾಡಲು ಇಚ್ಛಿಸುವ ಅಲ್ಪಸಂಖ್ಯಾತ ಸಮುದಾಯದ 2 ಸಾವಿರ ಮಂದಿಗೆ ಟ್ಯಾಕ್ಸಿ ಖರೀದಿಸಲು 2 ಲಕ್ಷ ರೂ. ಸಹಾಯಧನ ನೀಡಿಕೆ. ಇದಕ್ಕಾಗಿ 40 ಕೋಟಿ ರೂ. ಅನುದಾನ ನೀಡಲು ಸಭೆ ಒಪ್ಪಿಗೆ ನೀಡಿದೆ.

50 ಕೋಟಿ ಅನುದಾನ
ರಾಜೀವ್ಗಾಂಧಿ ವಸತಿ ಯೋಜನೆಯಡಿ ಬಡಾವಣೆ ನಿರ್ಮಾಣಕ್ಕೆ ಮೂಲಸೌಕರ್ಯ ಕಲ್ಪಿಸಲು ಬಜೆಟ್ನಲ್ಲಿ 50 ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿತ್ತು ಸಿದ್ದರಾಮಯ್ಯ ಘೋಷಿಸಿದ್ದರು. ಸಂಪುಟ ಸಭೆಯಲ್ಲಿ ಈ ಯೋಜನೆಗೆ ಹೆಚ್ಚುವರಿಯಾಗಿ 50 ಕೋಟಿ ರೂ. ಅನುದಾನ ನೀಡಲು ಅನುಮೋದನೆ ದೊರೆತಿದೆ.

ಸಾಲ ನೀಡಿಕೆ
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ 38.76 ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಯಡಿ 114 ಗ್ರಾಮೀಣ ಕೈಗಾರಿಕೆ ಸಂಘಗಳಿಗೆ ಶೇ.9ರ ಬಡ್ಡಿದರದಲ್ಲಿ 3 ಲಕ್ಷ ರೂ. ಸಾಲ, ರಾಷ್ಟ್ರ ಮಟ್ಟದಲ್ಲಿ ಒಂದು ಹಾಗೂ ರಾಜ್ಯಮಟ್ಟದಲ್ಲಿ 2 ವಸ್ತು ಪ್ರದರ್ಶನ ನಡೆಸಲು ಪ್ರೋತ್ಸಾಹ ನೀಡಲು ಒಪ್ಪಿಗೆ ಪಡೆಯಲಾಗಿದೆ.

ಪ್ರತ್ಯೇಕ ನೀತಿ
ಖಾಸಗಿ ವೈದ್ಯ ಕಾಲೇಜುಗಳಿಗೆ ಅನುಮತಿ ನೀಡಲು ಪ್ರತ್ಯೇಕ ನೀತಿ ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಖಾಸಗಿ ವೈದ್ಯ ಕಾಲೇಜುಗಳಿಗೆ ಅನುಮತಿ ನೀಡುವ ಸಂಬಂದ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿತ್ತು.












Click it and Unblock the Notifications