Bengaluru: ವರ್ತೂರು ಕೆರೆಗೆ ಸೇರುತ್ತಿರುವ ಕೊಳಚೆ ನೀರು, ಮೀನುಗಳ ಮಾರಣಹೋಮ!
ಬೆಂಗಳೂರು ಅಕ್ಟೋಬರ್ 23: ಮಹದೇವಪುರ ವಲಯದ ಬಸವನಪುರ ಮತ್ತು ವರ್ತೂರು ಕೆರೆಗಳಿಗೆ ಕೊಳಚೆ ನೀರು ಹರಿಯುತ್ತಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಘಟನೆ ನಡೆದಿದೆ. ಕಳೆದ 3-4 ದಿನಗಳಿಂದ ಕೆರೆಯ ಒಳಗೆ ಭೂಗತವಾಗಿ ಒಳಚರಂಡಿ ನೀರು ಸೇರುತ್ತಿದೆ. ಇದರಿಂದಾಗಿ ಮೀನುಗಳು ಅಪಾರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿವೆ ಎಂದು ಬಸವನಪುರದ ಕೆರೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಸವನಪುರದ ಕೆರೆ ಕಾರ್ಯಕರ್ತ ಬಾಲಾಜಿ ರಘೋತ್ತಮ್ ಬಾಲಿ, "ಯುಜಿಡಿ ಲೈನ್ ಬ್ಲಾಕ್ ಆಗಿರುವುದು ಮತ್ತು ಕೆರೆ ನೀರು ತುಂಬಿ ಹರಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆ ನೀರಿನ ಬಣ್ಣ ಕೂಡ ಬದಲಾಗಿದೆ. ಮೀನುಗಳು ಈಗಾಗಲೇ ತೇಲುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಹೀಗೆ ಆದರೆ 2-3 ದಿನಗಳಿಗಿಂತ ಹೆಚ್ಚು ಕಾಲ ಮೀನು ಬದುಕಲಾರವು. 13 ವರ್ಷಗಳ ಹೋರಾಟದ ನಂತರ ಈ ಕೆರೆಯನ್ನು ನವೀಕರಿಸಲಾಗಿತ್ತು. ಆದರೆ ಈಗ ಮತ್ತೆ ಕೆರೆ ಮಾಲಿನ್ಯವಾಗಿರುವುದು ನಿಜವಾಗಿಯೂ ನೋವುಂಟುಮಾಡುತ್ತಿದೆ'' ಎಂದು ಬೇಸರ ಹೊರಹಾಕಿದರು.

ಆದರೆ ಇಂತಹ ಸಂಗತಿಗಳು ಸಾಮಾನ್ಯ ಎಂದು ಕೆರೆ ನಿರ್ವಹಣೆ ಗುತ್ತಿಗೆದಾರರೊಬ್ಬರು ಹೇಳುತ್ತಾರೆ. ''ಮಳೆ ಬಂದಾಗ ಸ್ವಯಂಚಾಲಿತವಾಗಿ ಕೊಳಚೆ ನೀರು ಕೆರೆ ಸೇರುತ್ತದೆ. ಭಾರೀ ಮಳೆಯಾದರೆ ನೀರು ಚಲಿಸುತ್ತಲೇ ಇರುತ್ತದೆ. ಅದು ಶುದ್ಧ ನೀರಿನೊಂದಿಗೆ ಸೇರಿಕೊಳ್ಳುತ್ತದೆ. UGD ಚೇಂಬರ್ನಲ್ಲಿ ಸಮಸ್ಯೆಯಿದ್ದು, BWSSB (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಮೂಲಕ ಕೊಳಚೆ ನೀರು ಕೆರೆಗೆ ಸೇರದಂತೆ ಸರಿಪಡಿಸಬೇಕಾಗಿದೆ. ನಾವು ಆಗಾಗ ಹೋಗಿ ಕೆರೆಯನ್ನು ಸ್ವಚ್ಛಗೊಳಿಸುತ್ತೇವೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ವರ್ತೂರು ಕೆರೆಯಲ್ಲಿ ತಿರುವು ಕಾಲುವೆ ಒಡೆದಿದ್ದರಿಂದ ಮೇಲ್ದಂಡೆಯ ಕೊಳಚೆ ನೀರು ಜಲಮೂಲಕ್ಕೆ ಸೇರುತ್ತಿತ್ತು. ಇದರಿಂದಾಗಿ ಕೆರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪಿ ತೇಲಾಡುತ್ತಿದ್ದು ಕಂಡು ಬಂದಿತ್ತು.
ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ರಕ್ಷಣೆಗಾಗಿ ನಾಗರಿಕರು 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೆರೆಗಳ ಪುನಶ್ಚೇತನಕ್ಕೆ ಹೋರಾಟ ನಡೆಸುತ್ತಿದ್ದರೂ ಕೆರೆಗಳು ಕಲುಷಿತವಾಗುತ್ತಿರುವುದು ಬೇಸರ ತಂದಿದೆ. ಇತ್ತೀಚೆಗೆ ಕೆರೆ ಒಡೆದ ಕಾರಣ ಕೊಳಚೆ ನೀರು ಕೆರೆಗೆ ನುಗ್ಗಿ ಸಾಕಷ್ಟು ಮೀನುಗಳು ಸಾವನ್ನಪ್ಪಿವೆ. ಆ ಡೈವರ್ಶನ್ ಚಾನಲ್ ಅನ್ನು ಸರಿಪಡಿಸಲು ಕನಿಷ್ಠ ಒಂದು ವಾರದ ಸಮಯ ಬೇಕಾಯಿತು ಎಂದು ಕೆರೆ ಹೋರಾಟಗಾರ ಜಗದೀಶರೆಡ್ಡಿ ಬೇಸರ ವ್ಯಕ್ತಪಡಿಸಿದರು.
ವರ್ತೂರು ಕೆರೆಯಲ್ಲಿ ನಗರದ ಕಲ್ಮಶ
ವರ್ತೂರು ಕೆರೆಯ ದಡದ ಆಸುಪಾಸಿನಲ್ಲಿ ಗಗನಚುಂಬಿ ಅಪಾರ್ಟ್ಮೆಂಟ್ಗಳು, ಕಾರ್ಖಾನೆಗಳು ತಲೆ ಎತ್ತಿವೆ. ಈ ಕಟ್ಟಡಗಳಿಂದ ಹರಿಯುವ ಪಾಯಿಖಾನೆಯ ಕೊಳಚೆ, ರಾಸಾಯನಿಕ ತ್ಯಾಜ್ಯಕ್ಕೆ ಯಾವುದೇ ಅಡೆತಡೆ ಇಲ್ಲ. ನಗರದಲ್ಲಿ ಉತ್ಪತ್ತಿಯಾಗುವ ಶೇ 60ರಷ್ಟು ಕೊಳಚೆ ನೀರು ವರ್ತೂರು ಕೆರೆಯನ್ನು ಸೇರುತ್ತಿದೆ. ಜಲಮಂಡಳಿ ಸಹ ಎಲ್ಲಿಯೂ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಿಲ್ಲ. ನೂರಾರು ಅಪಾರ್ಟ್ಮೆಂಟ್ಗಳ ಕೊಳಚೆ ನೀರಿನ ಕೊಳವೆಗಳು ಕೆರೆಗೆ ನೀರು ಹರಿಸುತ್ತಿವೆ.












Click it and Unblock the Notifications