ನಟ ದುನಿಯಾ ವಿಜಯ್ಗೆ ಷರತ್ತು ಬದ್ಧ ಜಾಮೀನು ಮಂಜೂರು
ಬೆಂಗಳೂರು, ಅಕ್ಟೋಬರ್ 01 : ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ನಟ ದುನಿಯಾ ವಿಜಯ್ ಅವರಿಗೆ ಸೆಷನ್ಸ್ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ದುನಿಯಾ ವಿಜಯ್ 9 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸೋಮವಾರ ಬೆಂಗಳೂರಿನ 70ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ರಾಮಲಿಂಗೇಗೌಡ ಅವರು ನಟ ದುನಿಯಾ ವಿಜಯ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದರು. ಸೆ.29ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.
ಜಿಮ್ ಟ್ರೈನರ್ ಮಾರುತಿ ಗೌಡ ಅಪಹರಣ, ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಆರೋಪಿಯಾಗಿದ್ದಾರೆ. ಸೆ.23ರಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ದುನಿಯಾ ವಿಜಯ್ ಅವರನ್ನು ಬಂಧಿಸಿದ್ದರು. 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಸೆ.24ರಂದು ದುನಿಯಾ ವಿಜಯ್ ಪರ ವಕೀಲರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೆ.26ಕ್ಕೆ ತೀರ್ಪು ನೀಡಿದ್ದ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿತ್ತು. ಆದ್ದರಿಂದ, ಸೆಷನ್ಸ್ ಕೋರ್ಟ್ಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲಾಗಿದೆ. ತನಿಖೆಗೆ ಸಹಕಾರ ನೀಡಬೇಕು, ಸಾಕ್ಷ್ಯ ನಾಶ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ.
'ಜಾಮೀನು ನೀಡಿದ್ದೇವೆ ಮುಂದೆ ಹೀಗೆ ವರ್ತಿಸದಂತೆ ಸಲಹೆ ನೀಡಿ, ಮಾಧ್ಯಮಗಳಿವೆ. ಸೆಲೆಬ್ರಿಟಿಗಳು ಬೇರೆಯವರಿಗೆ ಮಾದರಿ ಆಗಬೇಕು. ಇನ್ನು ಮುಂದೆ ಸರಿಯಾಗಿ ನಡೆದುಕೊಳ್ಳುವಂತೆ ಸೂಚಿಸಿ' ಎಂದು ನ್ಯಾಯಾಧೀಶರು ದುನಿಯಾ ವಿಜಯ್ ಪರ ವಕೀಲರಿಗೆ ನಿರ್ದೇಶನ ನೀಡಿದ್ದಾರೆ.












Click it and Unblock the Notifications