ಜೈಲಿನಲ್ಲಿ ಶಶಿಕಲಾ ಐಶಾರಾಮಿ ಜೀವನಕ್ಕೆ ತಡೆ ಇಲ್ಲ?
ಬೆಂಗಳೂರು, ಮಾರ್ಚ್ 11: ದೇಶಾದ್ಯಂತ ಸುದ್ದಿ ಆಗಿದ್ದ ಎಐಡಿಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್ ಅವರ ಐಶಾರಾಮಿ ಜೈಲು ವಾಸಕ್ಕೆ ಇನ್ನೂ ಬ್ರೇಕ್ ಬಿದ್ದಂತಿಲ್ಲ. ಈಗಲೂ ಶಶಿಕಲಾ ಅವರಿಗೆ ಜೈಲಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ಅನುಮಾನಗಳು ದಟ್ಟವಾಗಿವೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ನಿನ್ನೆ (ಮಾರ್ಚ್ 10) ರಂದು ದಿಢೀರ್ ಎಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ಆ ವೇಳೆ ಶಶಿಕಲಾ ನಟರಾಜನ್ ಅವರು ಬಿಳಿ ಬಟ್ಟೆ ಧರಿಸದೆ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು.
ಪರಪ್ಪನ ಅಗ್ರಹಾರದಲ್ಲಿ ಚಿನ್ನಮ್ಮನಿಗೆ 'ರಾಜಾತಿಥ್ಯ' ಫೋಟೋಗಳಲ್ಲಿ ಬಹಿರಂಗ
ಈ ಬಗ್ಗೆ ರೇಖಾ ಶರ್ಮಾ ಅವರು ಶಶಿಕಲಾ ನಟರಾಜನ್ ಅವರ ಪ್ರಶ್ನೆ ಮಾಡಿದ್ದಾರೆ ಆದರೆ ಅದಕ್ಕೆ ಶಶಿಕಲಾ ಅವರಿಂದ ಸೂಕ್ತ ಉತ್ತರ ಬಂದಿಲ್ಲ. ಶಶಿಕಲಾ ಅವರ ಕಪಾಟಿನಲ್ಲಿ ಇನ್ನೂ ಹಲವು ಉತ್ತಮ ಬ್ರಾಂಡ್ನ ಬಣ್ಣದ ಬಟ್ಟೆಗಳು ಪತ್ತೆಯಾಗಿವೆ. ಶಶಿಕಲಾ ಅವರಿಗೆ ಬಿಳಿ ಬಟ್ಟೆ ಕೊಡದೇ ಇರುವುದಕ್ಕೆ ಜೈಲು ಅಧಿಕಾರಿಗಳಿಂದ ರೇಖಾ ಶರ್ಮಾ ಅವರು ಲಿಖಿತ ಉತ್ತರ ಕೇಳಿದ್ದಾರೆ.

ಕಂಪ್ಯೂಟರ್ ಕೂಡಾ ಕಲಿಯುತ್ತಿದ್ದಾರೆ
ಶಶಿಕಲಾ ಅವರೊಂದಿಗೆ ಕೆಲವು ನಿಮಿಷ ಮಾತನಾಡಿದ ರೇಖಾ ಅವರು ಹಲವು ಪ್ರಶ್ನೆಗಳನ್ನು ಶಶಿಕಲಾ ಅವರಿಗೆ ಕೇಳಿದ್ದಾರೆ ಆದರೆ ಹೆಚ್ಚಿನವುದಕ್ಕೆ ಅವರಿಂದ ಸೂಕ್ತ ಉತ್ತರ ಬಂದಿಲ್ಲ. ಪ್ರಸ್ತುತ ಜೈಲಿನಲ್ಲಿ ಕನ್ನಡ ಮತ್ತು ಕಂಪ್ಯೂಟರ್ ಕಲಿಯುತ್ತಿರುವುದಾಗಿ ಅವರು ಹೇಳಿದ್ದಾರೆ..

ಜೈಲು ಸ್ಥಿತಿ ಪರಿಶೀಲನೆ
ರೇಖಾ ಶರ್ಮಾ ಅವರು ಪರಪ್ಪನ ಅಗ್ರಹಾರದ ಮಹಿಳಾ ಖೈದಿಗಳು, ಅಲ್ಲಿನ ಕಲಿಕಾ ಸಿಬ್ಬಂದಿ ಮತ್ತು ಇನ್ನತರ ಸಿಬ್ಬಂದಿಗಳ ಜೊತೆ ಮಾತನಾಡಿ ವರದಿ ಪಡೆದುಕೊಂಡರು. ಜೈಲಿನ ವಾತಾವರಣವನ್ನು ಪರಿಶೀಲಿಸಿದರು.

ದೇಶದ ಗಮನ ಸೆಳೆದಿತ್ತು
ದಿಟ್ಟ ಅಧಿಕಾರಿ ಡಿ.ರೂಪಾ ಅವರು ಕಾರಾಗೃಹ ಇಲಾಖೆ ಡಿಐಜಿ ಆಗಿದ್ದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ನಟರಾಜನ್ ಅವರಿಗೆ ನೀಡಲಾಗುತ್ತಿರುವ ಐಶಾರಾಮಿ ವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಜೈಲು ಅಧಿಕಾರಿಗಳು ಮತ್ತು ಕೆಲವು ಮೇಲಧಿಕಾರಿಗಳ ಬಗ್ಗೆಯೂ ವರದಿ ನೀಡಿದ್ದರು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿತ್ತು.

ಶಶಿಕಲಾ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಶಶಿಕಲಾ ನಟರಾಜನ್ ಅವರಿಗೆ ಜೈಲಿನಲ್ಲಿ ಐಶಾರಾಮಿ ಸೌಲಭ್ಯ ನೀಡಲು ಸಿದ್ದರಾಮಯ್ಯ ಅವರೇ ಸೂಚಿಸಿದ್ದರು ಎಂದು ಇತ್ತೀಚೆಗೆ ನಿವೃತ್ತ ಡಿಜಿಪಿ ಸತ್ಯನಾರಾಯಣ್ ಅವರು ಹೇಳಿದ್ದುದು ಸುದ್ದಿಯಾಗಿತ್ತು. ಸಿದ್ದರಾಮಯ್ಯ ಅವರು ನನಗೆ ಮೌಖಿಕ ಆದೇಶ ಮಾಡಿದ್ದರು ಎಂದು ಸತ್ಯನಾರಾಯಣ್ ಅವರು ಎಸಿಬಿ ಮುಂದೆ ಹೇಳಿಕೆ ನೀಡಿದ್ದರು. ಶಶಿಕಲಾ ಐಶಾರಾಮಿ ಜೈಲು ವಾಸದ ಬಗ್ಗೆ ಎಸಿಬಿಯು ತನಿಖೆ ನಡೆಸುತ್ತಿದೆ.

ರೂಪಾ ಟ್ವೀಟ್
ಶಶಿಕಲಾ ನಟರಾಜನ್ ಅವರಿಗೆ ಜೈಲಿನಲ್ಲಿ ಸಿಗುತ್ತಿದ್ದ ರಾಜಾತಿಥ್ಯದ ಬಗ್ಗೆ ವರದಿ ಸಲ್ಲಿಸಿದ್ದ ಡಿ.ರೂಪಾ ಅವರು ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು 'ಅನೇಕ ರಿಸ್ಕ್ ತೆಗೆದುಕೊಂಡು ವರದಿ ಕೊಟ್ಟಿದ್ದೆ. ಮನ್ನಾರ್ಗುಡಿ ಮಾಫಿಯಾ ನಿಮ್ಮನ್ನು ಬಿಡುವುದಿಲ್ಲ ಎಂದೂ ಹೇಳಿದರು ಕೆಲವರು. ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಆ ಮಟ್ಟಿಗೆ ಸಂತಸ ತಂದಿದೆ. ಸತ್ಯಮೇವ ಜಯತೆ' ಎಂದು ಬರೆದುಕೊಂಡಿದ್ದಾರೆ.












Click it and Unblock the Notifications