ಕಂಬಿ ಹಿಂದೆ ಕುಳಿತು ಕನ್ನಡ ಕಾಗುಣಿತ ತಿದ್ದುತ್ತಿರುವ ಶಶಿಕಲಾ
ಬೆಂಗಳೂರು, ಅಕ್ಟೋಬರ್ 25: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ತಮಿಳುನಾಡಿನ 'ಚಿನ್ನಮ್ಮ' ಶಶಿಕಲಾ ಅವರಿಗೆ ಕನ್ನಡ ಕಲಿಯುವ ಬಯಕೆ ಮೂಡಿದೆ ಎಂಬ ಸುದ್ದಿ ಬಂದಿದೆ.
ದಿವಂಗತ ಮಾಜಿ ಸಿಎಂ ತಮಿಳರ 'ಅಮ್ಮ' ಜೆ ಜಯಲಲಿತಾ ಅವರಂತೆ ಶಶಿಕಲಾ ಅವರಿಗೂ ಸಕ್ಕರೆ ಕಾಯಿಲೆ, ಬಿಪಿ ಸೇರಿದಂತೆ ಅನಾರೋಗ್ಯ ಕಾಡುತ್ತಲೇ ಇದೆ. ಆದರೆ, ಕಂಬಿ ಹಿಂದೆ ಕುಳಿತು ಕನ್ನಡ ಕಾಗುಣಿತ, ವ್ಯಾಕರಣ ಕಲಿತು, ದೂರಶಿಕ್ಷಣ ಮತ್ತು ಅಂಚೆ ತೆರಪು ನಿರ್ದೇಶನಾಲಯದ ಮೂಲಕ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆಯಲು ಶಶಿಕಲಾ ಅವರು ಮುಂದಾಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಗಮನಕ್ಕೆ ಈ ವಿಷಯ ಮುಟ್ಟಿದೆ.
ಈ ಬಗ್ಗೆ ವಿವಿ ಸಿಬ್ಬಂದಿ ಜೊತೆ ಜೈಲಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲಿರುವ ವಿವಿ ಸಿಬ್ಬಂದಿ, ಭೇಟಿ ನಂತರ ಸ್ನಾತಕೋತ್ತರ ಪದವಿಗೆ ಪ್ರವೇಶಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವ ಸಾಧ್ಯತೆಯಿದೆ.

ಸಹ ಕೈದಿಗಳ ಜೊತೆ ಕನ್ನಡ ಮಾತು: ಕನ್ನಡ ಅಆಇಈ ಕಲಿತು, ಸಹ ಕೈದಿಗಳ ಜತೆ ಕನ್ನಡದಲ್ಲೇ ಮಾತನಾಡಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿಯಿದೆ. ನಾಲ್ಕು ವರ್ಷಗಳ ಶಿಕ್ಷೆಯ ಅವಧಿಯ ನಡುವೆ ಪೂರ್ಣ ಪ್ರಮಾಣದ ಕನ್ನಡ ಕಲಿಯುವ ಬಯಕೆಯಿದೆ.
ಎಂ.ಎ. ಪದವಿ ವ್ಯಾಸಂಗ 2 ವರ್ಷದ ಅವಧಿಯಲ್ಲಿ ಪೂರ್ಣಗೊಳ್ಳುವುದರಿಂದ ಜೈಲಿನಿಂದ ಬಿಡುಗಡೆಯಾಗುವ ಒಳಗೆ ಪದವಿ ಪಡೆಯಲಿದ್ದಾರೆ ಎಂದು ಜೈಲಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಶಿಕಲಾ ಅವರು ಕನ್ನಡ ಕಲಿಯಲು ಆಸಕ್ತಿ ತೋರಿದ್ದಾರೆ. ಶನಿವಾರದಂದು ನಮ್ಮ ಸಿಬ್ಬಂದಿ ಜೈಲಿಗೆ ಹೋಗಿ ಎಂಎ ಕನ್ನಡ ಪ್ರವೇಶಕ್ಕೆ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ. ಇತರ ಕೈದಿಗಳೂ ಪ್ರವೇಶ ಪಡೆಯಬಹುದು ಎಂದು ಬೆಂವಿವಿ ಅಂಚೆ ತೆರಪು ನಿರ್ದೇಶನಾಲಯದ ನಿರ್ದೇಶಕ ಪ್ರೊ. ಬಿ.ಸಿ. ಮೈಲಾರಪ್ಪ ಹೇಳಿದ್ದಾರೆ.












Click it and Unblock the Notifications