ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಮಾನನಷ್ಟ ಮೊಕದ್ದಮೆ ಎದುರಿಸಲು ಸಿದ್ದ : ರೂಪಾ ತಿರುಗೇಟು
ಬೆಂಗಳೂರು, ಜುಲೈ 27: ಬಂಧೀಖಾನೆ ವಿಭಾಗದ ಮಾಜಿ ಡಿಜಿಪಿ ಎಚ್.ಎನ್ ಸತ್ಯನಾರಾಯಣ ರಾವ್ ಲೀಗಲ್ ನೋಟಿಸ್ ಗೆ ಪ್ರತಿಕ್ರಿಯೆ ನೀಡಿರುವ ಡಿಐಜಿ ರೂಪಾ, "ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಮಾನನಷ್ಟ ಮೊಕದ್ಧಮೆ ವಿಚಾರದಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸಲು ಸಿದ್ಧ," ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ಉನ್ನತ ಅಧಿಕಾರಿಗಳು 2 ಕೋಟಿ ಲಂಚ ಪಡೆದಿದ್ದಾಗಿ ಬಂಧೀಖಾನೆ ವಿಭಾಗದ ಮಾಜಿ ಡಿಐಜಿ ಡಿ ರೂಪಾ ಆರೋಪಿಸಿದ್ದರು.
ಈ ಸಂಬಂಧ ರೂಪಾಗೆ ಸತ್ಯನಾರಾಯಣ ರಾವ್ 7 ಪುಟಗಳ ಲೀಗಲ್ ನೋಟಿಸ್ ನೀಡಿದ್ದರು. ನೋಟಿಸ್ ನಲ್ಲಿ 'ನನ್ನ ಗೌರವಕ್ಕೆ ಧಕ್ಕೆ ತರುವಂತ ಹೇಳಿಕೆ ನೀಡಿದ್ದೀರಿ', ಎಂದು ಸತ್ಯನಾರಾಯಣ ರಾವ್ ಹೇಳಿದ್ದಾರೆ. ಮಾತ್ರವಲ್ಲ ಈ ನೋಟಿಸ್ ಸಿಕ್ಕಿದ ಮೂರು ದಿನಗಳೊಳಗೆ ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ರೂ. 50 ಕೋಟಿಯ ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೂಪಾ, "ಅವರ ವಕೀಲರು ಹೇಳಿದ್ದನ್ನು ಕೇಳಿದ್ದೇನೆ. ಮತ್ತು ಅವರು ಅವ್ಯವಹಾರ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ನಾನು ಅದನ್ನೇ ಅವ್ಯವಹಾರ ಆಗಿದೆ ಎಂದು ಹೇಳಿದ್ದು. ಹಾಗಾಗಿ ನನ್ನನ್ನು ಬೆಂಬಲಿಸುವ ಬದಲು, ತಪ್ಪನ್ನು ಒಪ್ಪಿಕೊಳ್ಳುವ ಬದಲು, ನನ್ನ ವರದಿಯನ್ನು ಒಪ್ಪಿಕೊಳ್ಳುವ ಬದಲು ನನಗೆ ಮೆಮೊಗಳನ್ನು, ನೋಟಿಸ್ ಗಳನ್ನು ನೀಡಿದ್ದಾರೆ," ಎಂದು ಹೇಳಿದ್ದಾರೆ.
"ಇದು ಅವರು ಯಾವುದರ ಪರವಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅವರಿಗೆ ನನ್ನ ಪರವಾಗಿ ನಿಲ್ಲಲು ನನ್ನ ವರದಿಯನ್ನು ಒಪ್ಪಿಕೊಳ್ಳಲು ಅಡ್ಡಿಯಾಗಿದ್ದು ಏನು? ಅವರ ವಕೀಲರು ಹೇಳಿದ ಹಲವು ವಿಚಾರಗಳು ಸುಳ್ಳು. ಮತ್ತು ನಾನು ಇದನ್ನು ನನ್ನ ಕರ್ತವ್ಯದ ಭಾಗವಾಗಿ ಮಾಡಿದ್ದೇನೆ. ನಾನು ಆರೋಪಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ," ಎಂದು ಖಡಕ್ ಆಗಿ ಹೇಳಿದ್ದಾರೆ.