ಸಂಜಯ ಗಾಂಧಿ ಆಸ್ಪತ್ರೆ ಎಲ್ಲ ವೈದ್ಯರು ಕೆಲಸಕ್ಕೆ ಹಾಜರ್
ಬೆಂಗಳೂರು, ಅ. 28: ವೈದ್ಯರ ರಾಜೀನಾಮೆ ಪ್ರಹಸನ ಬೆಂಗಳೂರಿನ ಸಂಜಯಗಾಂಧಿ ಸಾರ್ವಜನಿಕ ಆಸ್ಪತ್ರೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಸಂಜಯಗಾಂಧಿ ಆಸ್ಪತ್ರೆಯಲ್ಲಿನ 48 ವೈದ್ಯರು ಮಂಗಳವಾರ ಕರ್ತವ್ಯಕ್ಕೆ ಹಾಜರಾಗಿದ್ದು ಎಂದಿನಂತೆ ರೋಗಿಗಳಿಗೆ ಆರೈಕೆ ದೊರೆಯುತ್ತಿದೆ.
ಸರ್ಕಾರಿ ವೈದ್ಯರು ಸೋಮವಾರ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದರೂ ಸಂಜಯಗಾಂಧಿ ಆಸ್ಪತ್ರೆಯ ಯಾವೊಬ್ಬ ವೈದ್ಯರು ಕೆಲಸಕ್ಕೆ ಗೈರಾಗಿಲ್ಲ. ಅಲ್ಲದೇ ಯಾರೊಬ್ಬರು ಇಲ್ಲಿಯವರೆಗೆ ರಾಜೀನಾಮೆ ಸಲ್ಲಿಸಿಲ್ಲ.[ರಾಜೀನಾಮೆ ನೀಡಿದ ಸರಕಾರಿ ವೈದ್ಯರ ಅಳಲುಗಳು]
ಎಂದಿನಂತೆ 800ಕ್ಕೂ ಹೆಚ್ಚು ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಹೆಸರು ಹೇಳಲು ಬಯಸದ ವೈದ್ಯರು ಸಂಘಟನೆ ಇಂಥ ತೀರ್ಮಾನ ತೆಗೆದುಕೊಂಡಿದೆ ಅಂದ ಮಾತ್ರಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದೇನು ಇಲ್ಲ. ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದೆನಿಸಿದವರು ಮಾತ್ರ ರಾಜೀನಾಮೆ ನೀಡಿದ್ದಾರೆ. ನಾವು ಎಂದಿನಂತೆ ರೋಗಿಗಳ ಆರೈಕೆಯಲ್ಲಿ ತೊಡಗಿದ್ದೇವೆ. ವಿವಾದವನ್ನು ಸರ್ಕಾರ ಶೀಘ್ರ ಬಗೆಹರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.[ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವ ಖಾದರ್]
ಚಿಕಿತ್ಸೆಗೆ ಆಗಮಿಸಿದ ರೋಗಿಗಳಲ್ಲಿ ಹಲವರಿಗೆ ವೈದ್ಯರ ರಾಜೀನಾಮೆ ಮಾಹಿತಿಯೇ ಗೊತ್ತಿರಲಿಲ್ಲ. ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಜಯನಗರ ಹೊಂಬೇಗೌಡ ನಗರ ನಿವಾಸಿ ರಜಿಯಾಬಾನು, ನಮಗೆ ಚಿಕಿತ್ಸೆ ಸಿಕ್ಕರೆ ಸಾಕು, ವೈದ್ಯರು ಮತ್ತು ಸರ್ಕಾರ ಏನಾದರೂ ಮಾಡಿಕೊಳ್ಳಲಿ ಎಂದರು. ನೇತ್ರ ತಪಾಸಣಾ ಕೇಂದ್ರ, ಬಾಣಂತಿಯರ ಆರೈಕೆ, ಚರ್ಮ ರೋಗ ವಿಭಾಗ ಸೇರಿದಂತೆ ಎಲ್ಲ ವೈದ್ಯರು ಕೆಲಸಕ್ಕೆ ಹಾಜರಾಗಿದ್ದರು.
ಹೊರ ರೋಗಿಗಳು
ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಗೆ ಆಗಮಿಸಿದ್ದ ನಾಗರಿಕರು.
ಹಾಜರಾತಿ ದಾಖಲೆ
ಆಸ್ಪತ್ರೆಯ ಯಾವ ಯಾವ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತೋರಿಸುವ ಸೂಚನಾ ಫಲಕ.
ಸರತಿ ಸಾಲು
ವೈದ್ಯರನ್ನು ಕಾಣಲು ಸರತಿ ಸಾಲಿನಲ್ಲಿ ನಿಂತ ಹೊರರೋಗಿಗಳು.
ಎಂದಿನ ವಾತಾವರಣ
ಆಸ್ಪತ್ರೆಗೆ ರೋಗಿಗಳು ಎಂದಿನಂತೆ ಆಗಮಿಸುತ್ತಿದ್ದು ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಕಂಡುಬರಲಿಲ್ಲ.