’ಜಗ್ಗೇಶ್ ಅವರಿಗೆ ಎಸ್ಕೇಪ್ ಆಗೋದು ತುಂಬಾ ಚೆನ್ನಾಗಿ ಗೊತ್ತು'- ನಟ ಸುದೀಪ್ ಹೀಗಂದಿದ್ದೇಕೆ?
ಬೆಂಗಳೂರು, ಜೂನ್ 17: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಪ್ರಕರಣ ನಡೆದು ಒಂದು ವಾರವಾಗುತ್ತಿದ್ದು, ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ.
ಕೊನೆಗೂ ಈ ಘಟನೆಯ ಬಗ್ಗೆ ಹಾಗೂ ನಟ ದರ್ಶನ್ ಬಂಧನದ ಬಗ್ಗೆ ಚಿತ್ರರಂಗದ ಕಲಾವಿದರು ಪ್ರತಿಕ್ರಿಯಿಸುತ್ತಿದ್ದು, ನಟ ಕಿಚ್ಚ ಸುದೀಪ್ ಕೂಡ ಮಾತನಾಡಿ , ತಪ್ಪು ಯಾರೇ ಮಾಡಲಿ ಅವರಿಗೆ ಶಿಕ್ಷೆ ಆಗಲೇಬೇಕು. ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳು ಸುದೀಪ್ ಅವರನ್ನು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್, ನಾವು ಯಾರನ್ನೂ ಬ್ಯಾನ್ ಮಾಡಲು ಆಗಲ್ಲ. ಈ ಕೇಸ್ನಿಂದ ಹೊರಗೆ ಬಂದರೆ ಬ್ಯಾನ್ ಅನ್ನುವ ಪದ ಬರಲ್ಲ. ಇಲ್ಲಿ ಬೇಕಾಗಿರುವುದು ನ್ಯಾಯ. ಎಲ್ಲರೂ ನೋಡುತ್ತಿರುವುದು ಪೊಲೀಸರು ಏನು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅಂತ ಹೇಳಿದ್ದಾರೆ.
ಇನ್ನು ಮಾತು ಮುಂದುವರಿದ ವೇಳೆ ಈ ಹಿಂದೆ ನಟ ಜಗ್ಗೇಶ್ ಅವರನ್ನು ಬ್ಯಾನ್ ಮಾಡಿದಾಗ ಅಣ್ಣವ್ರು ಒಂದು ಮಾತು ಹೇಳಿದ್ದರಂತೆ ದಯವಿಟ್ಟು ಬ್ಯಾನ್ ಎನ್ನುವ ಪದವನ್ನು ಯಾರಿಗೂ ಬಳಸಬೇಡಿ ಎಂದು ಹೇಳಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್, ಈ ವಿಚಾರವನ್ನು ಇಲ್ಲಿಗೆ ಮುಗಿಸುತ್ತೇನೆ ಎಂದಿದ್ದಾರೆ.
ಅಣ್ಣವ್ರು ಹೇಳಿದ ಬಗ್ಗೆ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಜಗ್ಗೇಶ್ ಅವರು ನಮ್ಮ ಸಹೋದರರು, ಅವರಿಗೆ ನಮಗಿಂತ ಜಾಸ್ತಿ ತಿಳುವಳಿಕೆ ಇದೆ. ಇನ್ನು ಬೇಡದಿದ್ದ ವಿಚಾರದಲ್ಲಿ ಹೇಗೆ ಮಾತನಾಡಬೇಕು, ಹೇಗೆ ಎಸ್ಕೇಪ್ ಆಗಬೇಕು ಎನ್ನುವುದರ ಬಗ್ಗೆ ನಮಗಿಂತ ಚೆನ್ನಾಗಿ ಅವರಿಗೆ ಗೊತ್ತಿದೆ. ಇಂತಹ ವಿಚಾರದಲ್ಲಿ ನಾನು ಬಹಳ ಮುಗ್ಧ ಎಂದಿದ್ದಾರೆ.
ದರ್ಶನ್ ಬಂಧನದ ಬಗ್ಗೆ ನಟ ಸುದೀಪ್ ಫಸ್ಟ್ ರಿಯಾಕ್ಷನ್ ಏನಾಗಿತ್ತು..?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಗ್ಗೆ ನಟ ಸುದೀಪ್ ನಿನ್ನೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಮಾಧ್ಯಮಗಳಲ್ಲಿ ಏನು ಬರುತ್ತಿದಿಯೋ ಅಷ್ಟೇ ನನಗೂ ಗೊತ್ತಿರುವುದು. ಸತ್ಯವನ್ನು ಹೊರತರಲು ಮಾಧ್ಯಮಗಳು, ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯನವರೇ ಈ ಪ್ರಕರಣದಲ್ಲಿ ಸತ್ಯ ಹೊರತರಲು ಹಠ ಹಿಡಿದಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. ಸಾಮಾನ್ಯ ಮನುಷ್ಯನಾಗಿ ನಾನು ಯಾರ ಪರ, ವಿರುದ್ಧವೂ ಅಲ್ಲ, ಆದರೆ ಬಾಳಿ ಬದುಕಬೇಕಾದ ಹುಡುಗ ಸತ್ತಿದ್ದಾನಲ್ಲ ಆತನಿಗೆ ನ್ಯಾಯ ಸಿಗಬೇಕು. ಆತನ ಕುಟುಂಬಕ್ಕೆ, ಹುಟ್ಟುವ ಮಗುವಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಎಲ್ಲರಿಗೂ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಬರಬೇಕು ಎಂದರೆ ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಚಿತ್ರರಂಗಕ್ಕೆ ಇಂದು ನ್ಯಾಯ ಸಿಗಬೇಕು. ಚಿಕ್ಕ ಚಿಕ್ಕ ವಿಚಾರಗಳಿಗೂ ಚಿತ್ರರಂಗವನ್ನು ದೂಷಿಸಲಾಗುತ್ತಿದೆ. ಒಬ್ಬಿಬ್ಬರಿಂದ ಚಿತ್ರರಂಗ ಅಲ್ಲ, ಆ ಕುಟುಂಬಕ್ಕೆ ನ್ಯಾಯ ಸಿಕ್ಕಾಗ ಚಿತ್ರರಂಗಕ್ಕೂ ಖುಷಿಯಾಗುತ್ತದೆ ಎಂದರು.












Click it and Unblock the Notifications